ರಾಜ್ಯ

ಪುತ್ತೂರು ವಿವೇಕಾನಂದ ಕಾಲೇಜು ವಿದ್ಯಾರ್ಥಿಗಳಿಂದ ಬಾಬ್ರಿ ಮಸೀದಿ ದ್ವಂಸ ಪ್ರಹಸನ ನಾಟಕ ಪ್ರದರ್ಶನ: ವಿವಾದ

Sumana Upadhyaya

ಪುತ್ತೂರು(ದಕ್ಷಿಣ ಕನ್ನಡ): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಹಸನ ಮತ್ತು ರಾಮಮಂದಿರ ನಿರ್ಮಾಣದ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ವಾರ್ಷಿಕೋತ್ಸವದಲ್ಲಿ ನೀಡಿರುವ ನೃತ್ಯ ಸಂಗೀತ ಆಧಾರಿತ ನಾಟಕ ಪ್ರದರ್ಶನ ವಿವಾದ ಹುಟ್ಟುಹಾಕಿದೆ.

ಈ ಕಾರ್ಯಕ್ರಮ ವಿವೇಕಾನಂದ ಕಾಲೇಜಿನಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಅಪ್ ಲೋಡ್ ಆಗಿ ವೈರಲ್ ಆದ ನಂತರ ವಿವಾದ ಎಬ್ಬಿಸಿದೆ.

ಪ್ರದರ್ಶನದಲ್ಲಿ ಮೊಘಲರ ದೊರೆ ಬಾಬರ್ ಪಾತ್ರಧಾರಿ ತನ್ನ ಸೇನೆಯೊಂದಿಗೆ ಅಲ್ಲಾಹ್ ಅಕ್ಬರ್ ಎಂದು ಘೋಷಣೆ ಕೂಗುತ್ತಾ ಸಾಗುತ್ತಾನೆ. ನಾಟಕ ಪ್ರದರ್ಶನ ವಿರುದ್ಧ ದೂರು ದಾಖಲಾಗುವ ಸಾಧ್ಯತೆಯಿದೆ.

ಎಸ್ ಡಿಪಿಐ ಆಕ್ರೋಶ: ಕಾಲೇಜಿನಲ್ಲಿ ‘ಬಾಬ್ರಿ ಮಸೀದಿ ದ್ವಂಸ ಪ್ರಹಸನ’ ಪ್ರದರ್ಶನ ಮಾಡಿದ ಕಾಲೇಜು ಆಡಳಿತ ಮಂಡಳಿಯ ನಡೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷವು ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಎಸ್ ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್, ವಿವೇಕಾನಂದ ಕಾಲೇಜ್ ನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಲಾಡಳಿತ ಮಂಡಳಿಯು ಬಾಬ್ರಿ ಮಸೀದಿ ಧ್ವಂಸ ಮಾಡಿದ ಭಯೋತ್ಪಾದನೆಯ ಕೃತ್ಯವನ್ನು ವಿದ್ಯಾರ್ಥಿಗಳ ಮೂಲಕ ನಾಟಕ‌ ಮಾಡಿಸಿದೆ. ಸೌಹಾರ್ದತೆ, ಸಹಬಾಳ್ವೆಯನ್ನು ಕಲಿಸಬೇಕಾದ ವಿದ್ಯಾ ಕೇಂದ್ರದಲ್ಲಿ ಪರಸ್ಪರ ದ್ವೇಷ, ಕೋಮು ಗಲಭೆಗೆ ಆಸ್ಪದ ಮಾಡುವ ಕೃತ್ಯವನ್ನು ನಡೆಸಲು ಪ್ರೇರೇಪಿಸಿದೆ.

ವಿದ್ಯಾ ಕೇಂದ್ರಕ್ಕೆ ವಿವೇಕಾನಂದರಂತಹ ಮಹಾನ್ ದೇಶ ಭಕ್ತ ಹಾಗೂ ಪುಣ್ಯಾತ್ಮರ ಹೆಸರಿಟ್ಟುಕೊಂಡು ಅವರ ತತ್ವಕ್ಕೆ ವಿರುದ್ಧವಾಗಿ ಭಯೋತ್ಪಾದನಾ ಕೃತ್ಯದ ನಾಟಕವನ್ನು ಮಾಡಿ ಅದನ್ನು ದೇಶಪ್ರೇಮಕ್ಕೆ ಹೋಲಿಸುವ ಸಂಘಪರಿವಾರ ಹಿನ್ನೆಲೆಯ ಶಾಲಾಡಳಿತ ಮಂಡಳಿಯ ನಡೆಯು ಖಂಡನೀಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಪೊಲೀಸ್ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಸ್ಥಳೀಯ ಶಾಸಕರು ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

SCROLL FOR NEXT