ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಸೋಮವಾರ ಕೆಆರ್ ಪುರಂನಲ್ಲಿ ಬುಲ್ಡೋಜರ್ಗಳೊಂದಿಗೆ ಅತಿಕ್ರಮಣ ತೆರವುಗೊಳಿಸಲು ಮುಂದಾದ ವೇಳೆ ಬಿಜೆಪಿಯ ಮಾಜಿ ಶಾಸಕ ನಂದೀಶ್ ರೆಡ್ಡಿ ಬುಲ್ಡೋಜರ್ ವಾಹನದ ಕೀಗಳನ್ನು ಕಸಿದುಕೊಂಡು ತೆರವು ಕಾರ್ಯಾಚರಣೆಗೆ ಅಡ್ಡಿ ಪಡಿಸಿದ ಘಟನೆ ನಡೆಯಿತು.
ಬಿಬಿಎಂಪಿಯ ಎಸ್ಡಬ್ಲ್ಯುಡಿ ಇಲಾಖೆ ಅಧಿಕಾರಿಗಳು ಮತ್ತು ಮಹದೇವಪುರ ವಲಯ ಎಂಜಿನಿಯರ್ಗಳು, ಭೂಮಾಪಕರು ಮತ್ತು ಸ್ಥಳೀಯ ಪೊಲೀಸರೊಂದಿಗೆ ಸೋಮವಾರ ಬೆಳಿಗ್ಗೆ ತಮ್ಮ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
ದೊಡ್ಡನೆಕುಂದಿಯ ಸರ್ವೆ ನಂಬರ್ 24/1, 3, 4, ಮತ್ತು 5ರಲ್ಲಿ ಫರ್ನ್ ಸಿಟಿ ಲೇಔಟ್ ಯಲ್ಲಿ ತೆರವು ಕಾರ್ಯಾಚರಣೆ ನಡೆಸಲು ಮುಂದಾದಾಗ ವಿಲ್ಲಾ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ನಂದೀಶ್ ರೆಡ್ಡಿ, ಬುಲ್ಡೋಜರ್ನ ಕೀ ಕಿತ್ತುಕೊಂಡರು ಮತ್ತು ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಅಡ್ಡಿ ಪಡಿಸಿದರು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ತಾವು ತಹಶೀಲ್ದಾರ್ ಅವರ ಆದೇಶವನ್ನು ಪಾಲಿಸುತ್ತಿದ್ದೇವೆ ಎಂದು ಬಿಬಿಎಂಪಿ ಎಂಜಿನಿಯರ್ ಸ್ಪಷ್ಟಪಡಿಸಿದ್ದಾರೆ. ಆಕ್ಷೇಪಣೆಗಳ ಹೊರತಾಗಿಯೂ, ಸುಮಾರು 50 ಪೊಲೀಸ್ ಸಿಬ್ಬಂದಿಗಳ ಸಹಾಯದಿಂದ, 200 ಮೀಟರ್ ಉದ್ದದ ಮಳೆನೀರು ಚರಂಡಿ ಮೇಲೆ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಾಂಪೌಂಡ್ ಗೋಡೆ, ಕ್ಲಬ್ ಹೌಸ್ ಕಟ್ಟಡ, ಈಜುಕೊಳ, ಒಳಚರಂಡಿ ಸಂಸ್ಕರಣಾ ಘಟಕ, ಕಟ್ಟಡಗಳ ಭಾಗಗಳು ಮತ್ತು ಕಾಂಪೌಂಡ್ ಗೋಡೆಯನ್ನು ತೆರೆವುಗೊಳಿಸಲಾಯಿತು ಎಂದು ಎಂಜಿನೀಯರ್ ವಿವರಿಸಿದ್ದಾರೆ.
ತೆರವು ಕಾರ್ಯಾಚರಣೆ ವೀಕ್ಷಿಸಿದ ನಂದೀಶ್ ರೆಡ್ಡಿ, ಬಿಬಿಎಂಪಿ ಮೊದಲು ಮಳೆನೀರು ಚರಂಡಿಯ ಅಡೆತಡೆಗಳನ್ನು ತೆಗೆದುಹಾಕಬೇಕು ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು. "ಫರ್ನ್ ಸಿಟಿಯಲ್ಲಿ ಮನೆಗಳು ಮತ್ತು ಆಸ್ತಿಗಳನ್ನು ಕೆಡವುವುದರಿಂದ ಜನ ಬೀದಿಗೆ ಬರಬೇಕಾಗುತ್ತದೆ ಎಂದು ರೆಡ್ಡಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮಹದೇವಪುರ ವಲಯದ ದೊಡ್ಡನೆಕುಂದಿ, ಅಂಜನಾಪುರ ಮತ್ತು ಹೊಯ್ಸಳನಗರದಲ್ಲಿ ಸೋಮವಾರ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಲಾಯಿತು ಎಂದು ಮಳೆನೀರು ಚರಂಡಿ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ವಾಣಿಜ್ಯ ಸಂಸ್ಥೆಗಳು ಮತ್ತು ಕಾರ್ ಸರ್ವೀಸ್ ಸ್ಟೇಷನ್ ಕೆಡವಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ಸದ್ದು ಮಾಡಿದ ಬುಲ್ಡೋಜರ್: ಕೋರ್ಟ್ ನಿಂದ ಸ್ಟೇ ತಂದ ಸ್ಥಳೀಯರು, ಕಾರ್ಯಾಚರಣೆ ಸ್ಥಗಿತ
ಬೊಮ್ಮನಹಳ್ಳಿಯ ಅಂಜನಾಪುರ ವಾರ್ಡ್ನಲ್ಲಿ ಬಿಡಿಎ ಅನುಮೋದಿತ ಬಡಾವಣೆಯಲ್ಲಿನ ಒತ್ತುವರಿ ತೆರವುಗೊಳಿಸಲು ಬುಲ್ಡೋಜರ್ಗಳನ್ನು ಅಳವಡಿಸಲಾಗಿದ್ದು, ಉದ್ಯಾನವನದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಎರಡು ಅಂಗಡಿಗಳನ್ನು ನೆಲಸಮ ಮಾಡಲಾಗಿದೆ.
ಹಿರಿಯ ಎಸ್ಡಬ್ಲ್ಯುಡಿ ಇಂಜಿನಿಯರ್ಗಳು ವಕೀಲರೊಂದಿಗೆ ಸಭೆ ನಡೆಸಿ ಮುನ್ನೇಕೊಳ್ಳದಲ್ಲಿ 21 ಅತಿಕ್ರಮಣದಾರರ ವಿರುದ್ಧ ಕೇವಿಯಟ್ ಸಲ್ಲಿಸಲು ಯಾವ ಮಾರ್ಗವನ್ನು ತೆಗೆದುಕೊಳ್ಳಬಹುದು ಎಂಬ ಬಗ್ಗೆ ಚರ್ಚಿಸಿದರು.
ಇದನ್ನೂ ಓದಿ: ಮಳೆನೀರು ಚರಂಡಿಗಳ ಅತಿಕ್ರಮಣ ಸಮೀಕ್ಷೆ ಪೂರ್ಣ: ಶೇ.99ರಷ್ಟು ಅತಿಕ್ರಮಣಗಳ ತೆರವಿಗೆ ಆದೇಶಿಸಲಾಗಿದೆ- ಅಧಿಕಾರಿಗಳು
ಹೆಚ್ಚಿನ ಮಾಲೀಕರು ಪಿಜಿ ವಸತಿಗಳನ್ನು ನಿರ್ಮಿಸಿದ್ದಾರೆ ಮತ್ತು ಕರ್ನಾಟಕ ಭೂ ಕಂದಾಯ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ತಹಶೀಲ್ದಾರ್ ಅವರ ತೆರವು ಆದೇಶದ ವಿರುದ್ಧ ಕರ್ನಾಟಕ ಹೈಕೋರ್ಟ್ನಲ್ಲಿ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅವರು ಸ್ಟೇ ಆರ್ಡರ್ ಪಡೆದಿದ್ದಾರೆ. ಶೀಘ್ರವೇ ಕೇವಿಯಟ್ ಸಲ್ಲಿಸುವಂತೆ ಕಾನೂನು ತಂಡಕ್ಕೆ ಸೂಚಿಸಲಾಗಿದೆ’ ಎಂದು ಮಹದೇವಪುರ ವಲಯದ ಎಂಜಿನಿಯರ್ ತಿಳಿಸಿದರು.