ರಾಜ್ಯ

ಶಕ್ತಿ ಯೋಜನೆ: ಬಸ್ ನಲ್ಲಿ ಬಿಎಂಟಿಸಿ ಎಂಡಿ ಸತ್ಯವತಿ ರೌಂಡ್ಸ್, ಸಿಬ್ಬಂದಿ ಕಾರ್ಯವೈಖರಿ ಪರಿಶೀಲನೆ

Manjula VN

ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯದ ಶಕ್ತಿ ಯೋಜನೆಯಡಿಯಲ್ಲಿ ನಿರ್ವಾಹಕರು ಮಹಿಳೆಯರಿಕೆ ಟಿಕೆಟ್ ವಿತರಿಸುವ, ಮಹಿಳಾ ಪ್ರಯಾಣಿಕರ ಜೊತೆ ವರ್ತನೆ ಸೇರಿದಂತೆ ವಿವಿಧ ಅಂಶಗಳ ಬಗ್ಗೆ ನಿಗಮದ ವ್ಯವಸ್ಥಾಪ ನಿರ್ದೇಶಕಿ ಜಿ.ಸತ್ಯವತಿ ಅವರು ಖುದ್ದು ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುವ ಮೂಲಕ ಪರಿಶೀಲನೆ ನಡೆಸಿದರು.

ಬುಧವಾರ ಶಾಂತಿನಗರದಿಂದ ಲಾಲ್ ಬಾಗ್, ರಾಮಕೃಷ್ಣ ಆಶ್ರಮ, ಗಣೇಶ್ ಭವನ, ಸೀತಾ ಸರ್ಕಲ್, ಹೊಸಕೆರೆಹಳ್ಳಿ ಕ್ರಾಸ್, ನಾಯಂಡಹಳ್ಳಿ ಮಾರ್ಗವಾಗಿ ದೀಪಾಂಜಲಿ ನಗರದವರೆಗೆ ಬಿಎಂಟಿಸಿ ಬಸ್ ನಲ್ಲಿ ಸತ್ಯವತಿಯವರು ಸಂಚರಿಸಿದರು.

ನಿರ್ವಾಹಕರು ಮಹಿಳಾ ಪ್ರಯಾಣಿಕರಿಗೆ ಟಿಕೆಟ್ ನೀಡುವುದು, ಪ್ರಯಾಣಿಕರೊಂದಿಗೆ ಹೇಗೆ ವರ್ತಿಸುತ್ತಾರೆಂಬುದನ್ನು ಪರಿಶೀಲಿಸಿದರು.

ಬಸ್ ನಲ್ಲಿನ ಪ್ರಯಾಣ ಉತ್ತಮವಾಗಿದ್ದು, ಮಹಿಳೆಯರು ಮತ್ತು ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲನೆ ನಡೆಸಿದೆ. ಪೀಕ್ ಅವರ್‌ಗಳಲ್ಲಿ ಶಕ್ತಿ ಯೋಜನೆಯಡಿಯಲ್ಲಿ ಉಚಿತವಾಗಿ ಪ್ರಯಾಣಿಸಲು ಬಯಸುವ ಮಹಿಳಾ ಪ್ರಯಾಣಿಕರು ಆಧಾರ್ ಮತ್ತು ಇತರ ಐಡಿ ಕಾರ್ಡ್‌ಗಳಂತಹ ವಿಳಾಸ ದಾಖಲೆಗಳ ಪರಿಶೀಲಿಸಲು ನಿರ್ವಾಹಕರಿಗೆ ಕಷ್ಟಕರವಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಸಮಸ್ಯೆಯನ್ನು ಶಕ್ತಿ ಸ್ಮಾರ್ಟ್‌ ಕಾರ್ಡ್ ಗಳ ಬಳಿಕ ಪರಿಹರಿಸಲಾಗುವುದು. ಈ ಕಾರ್ಡ್ ಗಳನ್ನು ತೋರಿಸುವ ಮೂಲಕ ಮಹಿಳೆಯರು ಪ್ರಯಾಣ ಮಾಡಬಹುದು. ಇದು ಸಮಯ ಉಳಿಸಲು ಸಹಾಯ ಮಾಡುತ್ತದೆ ಎಂದು ಸತ್ಯವತಿಯವರು ಹೇಳಿದರು.

ಇದನ್ನು ಹೊರತುಪಡಿಸಿ, ಶಕ್ತಿ ಯೋಜನೆಯ ಸುಗಮ ಅನುಷ್ಠಾನದ ಮೇಲೆ ಪರಿಣಾಮ ಬೀರುವ ಯಾವುದೇ ಪ್ರಮುಖ ಸಮಸ್ಯೆ ಕಂಡುಬಂದಿಲ್ಲ ಎಂದು ತಿಳಿಸಿದರು.

ಇದೇ ವೇಳೆ ದೀಪಾಂಜಲಿನಗರದ ಬಸ್ ಡಿಪೋದಲ್ಲಿ ಬಿಎಂಟಿಸಿ ಸಿಬ್ಬಂದಿಗಳೊಂದಿಗೆ ಮಾತನಾಡಿದ ಸತ್ಯವತಿಯವರು ಸಮಸ್ಯೆಗಳನ್ನು ಆಲಿಸಿದರು.

SCROLL FOR NEXT