ರಾಜ್ಯ

ಸ್ತ್ರೀ ಶಕ್ತಿ ಸಂಘದಿಂದ ಬ್ಯಾಂಕ್ ಸಿಬ್ಬಂದಿ ಬೈಕಿಗೆ ಬೆಂಕಿ: ಇದು ಸುಳ್ಳು ಸುದ್ದಿ, ಪೊಲೀಸರ ಸ್ಪಷ್ಟನೆ

Nagaraja AB

ಕೋಲಾರ: ಮುಳಬಾಗಿಲು ತಾಲ್ಲೂಕ್ ಬಿಸ್ನಹಳ್ಳಿ ಗ್ರಾಮದಲ್ಲಿ  ಸಾಲ ವಸೂಲಿ ಮಾಡಲು ಹೋದ ಡಿಸಿಸಿ ಬ್ಯಾಂಕ್ ಸಿಬ್ಬಂದಿಯ ಬೈಕಿಗೆ ಸ್ತ್ರಿ ಶಕ್ತಿ ಸಂಘದವರು ಬೆಂಕಿ ಹಚ್ಚಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಇಂತಹ ಯಾವುದೇ ಘಟನೆ ನಡೆದಿಲ್ಲ, ಇದು ಸುಳ್ಳು ಸುದ್ದಿ ಎಂದು ಜಿಲ್ಲಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ. 

ಸಾಲ ವಸೂಲಾತಿಗಾಗಿ ಬ್ಯಾಂಕ್ ಸಿಬ್ಬಂದಿ ಗ್ರಾಮಕ್ಕೆ ತೆರಳಿದಾಗ ಸರ್ಕಾರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿರುವುದರಿಂದ ಸಾಲ ಮರು ಪಾವತಿ ಮಾಡುವುದಿಲ್ಲ ಎಂದು ಸ್ತ್ರಿಶಕ್ತಿ ಸಂಘದ ಮಹಿಳೆಯರು ಹೇಳಿದ ನಂತರ ಬ್ಯಾಂಕ್ ಸಿಬ್ಬಂದಿ ಅಲ್ಲಿಂದ ಹಿಂತಿರುಗಿ ಬಂದಿದ್ದಾರೆ. ಈ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ, ಯಾವುದೇ ವಾಹನಕ್ಕೆ ಬೆಂಕಿ ಸಹ ಇಟ್ಟಿಲ್ಲ ಎಂದು ಅವರು ತಿಳಿಸಿದ್ದಾರೆ. 

ಅದೇ ಗ್ರಾಮದ ಮಂಜು ಎಂಬ ವ್ಯಕ್ತಿ ತನ್ನ ಬೈಕಿಗೆ ತಾನೇ ಬೆಂಕಿ ಹತ್ತಿಕೊಂಡು ಇದನ್ನು ವಿಡಿಯೋ ಮಾಡಿ ಸಾಲ ವಸೂಲಾತಿಗೆ ತೆರಳಿದ ಸಿಬ್ಬಂದಿ ಬೈಕ್ ಗೆ ಬೆಂಕಿ ಹಚ್ಚಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟು ತಪ್ಪು ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ, ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಸುದ್ದಿ ಸುಳ್ಳಾಗಿದ್ದು, ಈ ಬಗ್ಗೆ ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.

SCROLL FOR NEXT