ಬೆಂಗಳೂರು: ಸಾಕು ನಾಯಿಯ ಕೊಂದು ಹಾಕಿತೆಂದು ಚಿರತೆಗೆ ವಿಷಪ್ರಾಶನ ಮಾಡಿಸಿ ಹತ್ಯೆ ಮಾಡಿರುವ ಘಟನೆಯೊಂದು ಚಾಮರಾಜನಗರ ಜಿಲ್ಲೆಯ ಬಂಡೀಪುರ ಸಮೀಪದ ಕೂಟನೂರು ಗ್ರಾಮದಲ್ಲಿ ಶುಕ್ರವಾರ ವರದಿಯಾಗಿದೆ.
ಈ ಸಂಬಂಧ ಅರಣ್ಯಾಧಿಕಾರಿಗಳು ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ. ಆರೋಪಿಯನ್ನು ಕೃಷಿ ಕಾರ್ಮಿಕ ರಮೇಶ್ ಎಂದು ಗುರ್ತಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಮೀನು ಮಾಲೀಕ ಜಿ.ಆರ್.ಗೋವಿಂದ ರಾಜು ಎಂಬುವರಿಗೆ ಸೇರಿದ ಕೃಷಿ ಭೂಮಿಯಲ್ಲಿ ಅರಣ್ಯಾಧಿಕಾರಿಗಳು ಚಿರತೆಯ ಶವವನ್ನು ಪತ್ತೆ ಮಾಡಿದ್ದಾರೆ.
ಇದನ್ನೂ ಓದಿ: ಬಂಡೀಪುರದಲ್ಲಿ ಹುಲಿ, ಚಿರತೆ ಕೊಂದು ಹೂತಿಟ್ಟ ಪ್ರಕರಣ; ತನಿಖೆಗೆ ಆಗ್ರಹಿಸಿ ಸಿಎಂ ಸಿದ್ದರಾಮಯ್ಯಗೆ ಕಾರ್ಯಕರ್ತ ಆಗ್ರಹ
ರಮೇಶ್ ಅವರು ಸಾಕಿದ್ದ ನಾಯಿಯನ್ನು ನಾಲ್ಕು ದಿನಗಳ ಹಿಂದೆ ಮೂರು ವರ್ಷದ ಹೆಣ್ಣು ಚಿರತೆ ಕೊಂದು ಹಾಕಿತ್ತು. ಇದರಿಂದ ಕುಪಿತಗೊಂಡ ರಮೇಶ್, ಚಿರತೆ ಭಾಗಶಃ ತಿಂದು ಬಿಟ್ಟಿದ್ದ ನಾಯಿಯ ಮೃತದೇಹಕ್ಕೆ ಕೀಟನಾಶಕವನ್ನು ಸಿಂಪಡಿಸಿದ್ದ. ಇದರಂತೆ ಚಿರತೆ ಮತ್ತೆ ಬಂದು ಮೃತದೇಹವನ್ನು ತಿಂದಿದೆ. ಈ ವೇಳೆ ವಿಷಪ್ರಾಶನದಿಂದ ಮೃತಪಟ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.