ಬೆಂಗಳೂರು: ಯೋಜನೆಯ ಅವೈಜ್ಞಾನಿಕ ಅನುಷ್ಠಾನದಿಂದ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಸಂಭವಿಸುತ್ತಿರುವ ಅಪಘಾತಗಳು ಮತ್ತು ಸಾವುಗಳನ್ನು ಖಂಡಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ಕರ್ನಾಟಕ ಘಟಕವು ‘ರೋಡ್ ಟು ಡೆತ್’ ಎಂಬ ಅಭಿಯಾನವನ್ನು ಕೈಗೆತ್ತಿಕೊಂಡಿದೆ.
ಕಳೆದ 9 ತಿಂಗಳಲ್ಲಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತಗಳಲ್ಲಿ 158 ಜನರು ಸಾವಿಗೀಡಾಗಿದ್ದಾರೆ. ಸರ್ಕಾರಗಳ ಅವೈಜ್ಞಾನಿಕ ಮತ್ತು ಭ್ರಷ್ಟ ಯೋಜನೆಗಳಿಗೆ ಅಮಾಯಕರು ಬಲಿಯಾಗುತ್ತಿರುವುದು ದುರಂತ ಎಂದು ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಮೋಹನ್ ದಾಸರಿ ಹೇಳಿದ್ದಾರೆ.
ಸರ್ಕಾರಗಳ ತಪ್ಪು ಕ್ರಮಗಳಿಂದ ಅಮಾಯಕರು ಸಾವಿಗೀಡಾಗುತ್ತಿರುವುದನ್ನು ಖಂಡಿಸಿ ಆಮ್ ಆದ್ಮಿ ಪಕ್ಷವು ‘ರೋಡ್ ಟು ಡೆತ್’ ಅಭಿಯಾನವನ್ನು ಕೈಗೆತ್ತಿಕೊಂಡಿದೆ ಎಂದರು.
ಈ ಅಭಿಯಾನದ ಮೂಲಕ ಅಮಾಯಕ ಪ್ರಯಾಣಿಕರ ಜೀವ ಉಳಿಸಲು ಜನಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಶುಕ್ರವಾರ (ಜೂನ್ 30) ಮೈಸೂರು ರಸ್ತೆಯ ಕಣಿಮಾನಿಕೆ ಟೋಲ್ ಪ್ಲಾಜಾ ಬಳಿ ಪಕ್ಷದ ನೂರಾರು ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ ಎಂದು ಮೋಹನ್ ದಾಸರಿ ತಿಳಿಸಿದರು.
ಇಂತಹ ಅಭಿಯಾನಗಳ ಮೂಲಕ ಅಮಾಯಕ ಪ್ರಯಾಣಿಕರ ಜೀವ ಉಳಿಸುವುದು ಆಮ್ ಆದ್ಮಿ ಪಕ್ಷದ ಉದ್ದೇಶವಾಗಿದ್ದು, ಸಾರ್ವಜನಿಕರು ನಮ್ಮೊಂದಿಗೆ ಕೈಜೋಡಿಸುವಂತೆ ಮನವಿ ಮಾಡಲಾಗಿದೆ ಎಂದರು.