ರಾಜ್ಯ

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ರಿಯಾಯಿತಿ: ಚಾಲಕರ ವೇತನ ಬಳಸಿಕೊಂಡು 33 ಲಕ್ಷ ರೂ. ದಂಡ ಕಟ್ಟಿದ ಬಿಎಂಟಿಸಿ

Manjula VN

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಸವಾರರಿಗೆ ದಂಡ ಪಾವತಿಸಲು ಸರ್ಕಾರ ಶೇ.50ರ ರಿಯಾಯಿತಿಯನ್ನು ನೀಡಿದ್ದು, ಸರ್ಕಾರದ ಈ ಆಫರ್'ನ್ನು ಬಿಎಂಟಿಸಿ ಕೂಡ ಬಳಕೆ ಮಾಡಿಕೊಂಡಿದೆ.

ನಗರದಲ್ಲಿ 12 ಸಾವಿರ ಸಿಗ್ನಲ್ ಜಂಪ್ ಮಾಡಿರುವ ಬಿಎಂಟಿಸಿ ಚಾಲಕರು ನಿಗಮಕ್ಕೆ ಬರೋಬ್ಬರಿ 1 ಕೋಟಿ ರೂ. ನಷ್ಟವುಂಟು ಮಾಡಿದ್ದಾರೆ. 12 ಸಾವಿರ ಸಿಗ್ನಲ್ ಜಂಪ್ ಮಾಡಿರುವ ಪ್ರಕರಣಗಳು ಸೇರಿ ಒಟ್ಟು ದಂಡದ ಮೊತ್ತ 1 ಕೋಟಿ ರೂ.ಗೆ ತಲುಪಿದೆ. ಟ್ರಾಫಿಕ್ ನಿಯಮಗಳನ್ನ ಉಲ್ಲಂಘಿಸಿದ ಪ್ರಮುಖ ಪ್ರಕರಣಗಳಲ್ಲಿ ಒಟ್ಟು ದಂಡ 66 ಲಕ್ಷ ರೂಪಾಯಿ ಆಗಿದ್ದು, ಶೇ.50 ಆಫರ್ ಮೂಲಕ 33 ಲಕ್ಷ ರೂ. ದಂಡವನ್ನು ಬಿಎಂಟಿಸಿ ಆಡಳಿತ ಮಂಡಳಿ ಪಾವತಿ ಮಾಡಿದೆ.

ರೂ.33 ಲಕ್ಷ ದಂಡ ಪಾವತಿಸಿರುವುದನ್ನು ಬಿಎಂಟಿಸಿ ಎಂಡಿ ಸತ್ಯವತಿ ಅವರು ದೃಢಪಡಿಸಿದ್ದಾರೆ. ಸಿಗ್ನಲ್ ಜಂಪ್‌ಗಳು ಮತ್ತು ಅನಧಿಕೃತ ಪಾರ್ಕಿಂಗ್‌ಗೆ ದಂಡ ವಿಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆಗಾಗಿ 33 ಲಕ್ಷ ರೂಪಾಯಿ ದಂಡ ಪಾವತಿಸಿದ್ದೇವೆ. ನಿಯಮ ಉಲ್ಲಂಘನೆ ಮಾಡಿದ ಬಿಎಂಟಿಸಿ ಚಾಲಕರಿಂದ ವಸೂಲಿ ಮಾಡಿದ ನಂತರ ದಂಡದ ಮೊತ್ತವನ್ನು ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ.

ಭವಿಷ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡದಂತೆ ತಡೆಯಲು ಚಾಲಕರ ವೇತನದಿಂದ ಈ ಮೊತ್ತವನ್ನು ಕಡಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ಮತ್ತೊಮ್ಮೆ ಬಂಪರ್‌ ಆಫ‌ರ್‌ ನೀಡಿದ್ದ ರಾಜ್ಯ ಸರಕಾರವು ಶೇ. 50ರಷ್ಟು ದಂಡ ಪಾವತಿಗೆ ಮಾ.4 ರಿಂದ 15 ದಿನಗಳ ಕಾಲಾವಕಾಶ ನೀಡಿತ್ತು.

SCROLL FOR NEXT