ರಾಜ್ಯ

ವೇತನ ಹೆಚ್ಚಳಕ್ಕೆ ಆಗ್ರಹ: ಸಾರಿಗೆ ನೌಕರರ ಜೊತೆಗಿನ ಸಚಿವ ಶ್ರೀರಾಮುಲು ಸಭೆ ವಿಫಲ

Manjula VN

ಬೆಂಗಳೂರು: ಪ್ರತಿ ವರ್ಷ ರಾಜ್ಯದಲ್ಲಿ ಸಾರಿಗೆ ನೌಕರರ ವೇತನ ಹೆಚ್ಚಿಸುವಂತೆ ಮುಷ್ಕರ, ಪ್ರತಿಭಟನೆಗಳು ನಡೆಯುತ್ತಿರುತ್ತವೆ. ಈ ವಿಚಾರ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿವಿಧ ಒಕ್ಕೂಟಗಳೊಂದಿಗೆ ಸಾರಿಗೆ ಸಚಿವ ಬಿ ಶ್ರೀರಾಮುಲು ಅವರು ಬುಧವಾರ ನಡೆಸಿದ ಸಭೆ ವಿಫಲವಾಗಿದೆ.

ರಾಜ್ಯ ಸರ್ಕಾರ ಸಾರಿಗೆ ನೌಕರರ ಮೂಲ ವೇತನವನ್ನು ಶೇ.8ಕ್ಕೆ ಹೆಚ್ಚಿಸುವ ಭರವಸೆಯನ್ನು ಶ್ರೀರಾಮುಲು ಅವರು ನೀಡಿದ್ದು, ಇದನ್ನು ಸಾರಿಗೆ ಸಂಘಟನೆಗಳ ಮುಖಂಡರು ತಿರಸ್ಕರಿಸಿದ್ದಾರೆ. ಶೇ.25ರಷ್ಟು ವೇತನ ಹೆಚ್ಚಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಸಭೆಯಲ್ಲಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಮುಖಂಡರ ಮನವೊಲಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಸುಮಾರು 2 ಗಂಟೆಗಳ ಕಾಲ ನಡೆದ ಸಭೆ ವಿಫಲಗೊಂಡಿದೆ ಎಂದು ತಿಳಿದುಬಂದಿದೆ.

ಸಭೆಯಲ್ಲಿ ಕೆಎಸ್‌ಆರ್‌ಟಿಸಿ ಎಂಡಿ ಅನ್ಬುಕುಮಾರ್, ಎಐಟಿಯುಸಿ-ಸಂಯೋಜಿತ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕರ ಫೆಡರೇಶನ್, ಕರ್ನಾಟಕ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಿದ್ದರು.

ಒಗ್ಗಟ್ಟಿನಿಂದ ಪ್ರಸ್ತಾಪವನ್ನು ತಿರಸ್ಕರಿಸಿದ್ದೇವೆ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಫೆಡರೇಶನ್ ಅಧ್ಯಕ್ಷ, ಸಾರಿಗೆ ಕಾರ್ಯಕರ್ತ ಎಚ್ ವಿ ಅನಂತ ಸುಬ್ಬರಾವ್ ಅವರು ಹೇಳಿದ್ದಾರೆ.

ಮೂಲ ವೇತನವನ್ನು ಶೇಕಡಾ 25 ರಷ್ಟು ಹೆಚ್ಚಿಸಬೇಕೆಂದು ಒತ್ತಾಯಿಸಿದಾಗ, ಸಾರಿಗೆ ನಿಗಮವು ಭಾರಿ ನಷ್ಟದಲ್ಲಿದೆ ಎಂಬ ಉತ್ತರವನ್ನು ನೀಡಲಾಯಿತು. ಸಾರಿಗೆ ನಿಯಮ ನಷ್ಟ ಎದುರಿಸುತ್ತಿರವುದು ನೌಕರರಿಂದಲ್ಲ, ತೆಗೆದುಕೊಂಡ ತಪ್ಪು ನೀತಿಗಳಿಂದಾಗಿದೆ ಎಂದು ತಿಳಿಸಿದ್ದಾರೆ.

ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲು ಸಚಿವ ಶ್ರೀರಾಮುಲು ನಿರ್ಧರಿಸಿದ್ದು, ಮುಖ್ಯಮಂತ್ರಿಗಳೊಂದಿನ ಸಭೆ ಬಳಿಕ ವೇತನ ಹೆಚ್ಚಳದ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ.

SCROLL FOR NEXT