ರಾಜ್ಯ

ನಾಳೆಯಿಂದ ಕೆಪಿಟಿಸಿಎಲ್ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ಅಗತ್ಯ ಸೇವೆಗಳಿಗೆ ವಿದ್ಯುತ್ ಪೂರೈಕೆ ಅಬಾಧಿತ

Sumana Upadhyaya

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ನೌಕರರ ಸಂಘವು ನಾಳೆ ಅಂದರೆ ಮಾರ್ಚ್ 16 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದೆ ಎಂದು ಘೋಷಿಸಿದೆ. 

ಆಸ್ಪತ್ರೆಗಳು ಮತ್ತು ಇತರ ತುರ್ತು ಸೇವೆಗಳಿಗೆ ನಿರಂತರ ವಿದ್ಯುತ್ ಸರಬರಾಜನ್ನು ಮಾಡಲಾಗುತ್ತದೆ. ಅಗತ್ಯ ತುರ್ತು ಸೇವೆಗಳಿಗೆ ನೌಕರರ ಮುಷ್ಕರದಿಂದ ವ್ಯತ್ಯಯವುಂಟಾಗುವುದಿಲ್ಲ. ವಿದ್ಯುತ್ ಕೇಬಲ್‌ಗಳನ್ನು ಕಡಿಯುವಂತಹ ದೂರುಗಳಿಗೆ ಸ್ಪಂದಿಸಲಾಗುತ್ತದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ ಬಲರಾಮ್ ಹೇಳಿದ್ದಾರೆ. 

ಅಗತ್ಯ ಸೇವೆಗಳ ನಿರ್ವಹಣೆ ಕಾಯಿದೆ (ಎಸ್ಮಾ) ಅಡಿಯಲ್ಲಿ ಬಂದರೂ ಸರಕಾರ ವೇತನ ಹೆಚ್ಚಿಸಬೇಕು ಹಾಗೂ 35 ಸಾವಿರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿ ಸಂಘದ ಸದಸ್ಯರು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಸರಕಾರಕ್ಕೆ ಮನವಿ ಪತ್ರ ನೀಡಿ ಒಂದು ವರ್ಷವಾಗಿದೆ. ನಾವು ವೇತನದಲ್ಲಿ ಶೇಕಡಾ 40 ರಷ್ಟು ಹೆಚ್ಚಳವನ್ನು ಕೋರಿದ್ದೇವೆ. ಆದರೆ KPTCL ಆಡಳಿತದೊಂದಿಗೆ ಸರಣಿ ಮಾತುಕತೆಗಳ ನಂತರ, ನಾವು ಶೇಕಡಾ 22ರಷ್ಟು ಹೆಚ್ಚಳಕ್ಕೆ ಒಪ್ಪಿಕೊಂಡಿದ್ದೇವೆ. ಆದರೆ ಹಣಕಾಸು ಇಲಾಖೆ ಪ್ರಸ್ತಾವನೆಗೆ ಒಪ್ಪಿಗೆ ನೀಡಿಲ್ಲ' ಎಂದು ಒಕ್ಕೂಟದ ಅಧ್ಯಕ್ಷ ಆರ್‌ಎಚ್‌ ಲಕ್ಷ್ಮೀಪತಿ ಅಳಲು ತೋಡಿಕೊಂಡಿದ್ದಾರೆ. 

95,000 ಮಂಜೂರಾದ ಹುದ್ದೆಗಳಲ್ಲಿ 35,000 ಖಾಲಿ ಇವೆ ಎಂದು ಬಲರಾಂ ಹೇಳಿದರು. ಇತರ ರಾಜ್ಯಗಳಲ್ಲಿ, 1,000 ಗ್ರಾಹಕರಿಗೆ 10 ಉದ್ಯೋಗಿಗಳಿದ್ದಾರೆ. ಆದರೆ ಕರ್ನಾಟಕದಲ್ಲಿ ಈ ಅನುಪಾತ 1000:3 ಇದೆ. ಇದರಿಂದಾಗಿ ಕೆಲಸದ ಹೊರೆ ಹೆಚ್ಚಿದ್ದು, ನೌಕರರು ಅದನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಸಂಘದ ವತಿಯಿಂದ ಕೆಲ ಸಮಯದ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ನೀಡಿದ್ದು, ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಏನೂ ಮಾಡಿಲ್ಲ ಎಂದು ಪದಾಧಿಕಾರಿಗಳು ದೂರಿದರು. 

ಇಂಧನ ಸಚಿವ ವಿ ಸುನೀಲ್ ಕುಮಾರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಮತ್ತು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ ಪ್ರತಿಕ್ರಿಯೆಗೆ ಲಭ್ಯರಾಗಿಲ್ಲ. ESCOM ಗಳು ಉದ್ಯಮ ಮತ್ತು ವ್ಯಾಪಾರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಮುಷ್ಕರದಿಂದಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾದರೆ ಕೈಗಾರಿಕಾ ವಲಯದ ಉತ್ಪಾದನೆಗೆ ಧಕ್ಕೆಯಾಗಲಿದೆ ಎಂದರು.

ವಿದ್ಯುತ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂದು ಕೆಪಿಟಿಸಿಎಲ್ ಯೂನಿಯನ್ ಹೇಳಿದ್ದರೂ, ಕೆಪಿಟಿಸಿಎಲ್ ಮತ್ತು ಎಸ್ಕಾಂಗಳ ನೌಕರರು ದೂರುಗಳನ್ನು ಸ್ವೀಕರಿಸಲು ಲಭ್ಯವಿರುವುದಿಲ್ಲ ಎಂದು ಅವರು ಹೇಳಿದರು.

SCROLL FOR NEXT