ರಾಜ್ಯ

ಬನಶಂಕರಿ 6ನೇ ಹಂತದಲ್ಲಿ ಬಿಡಿಎ ನಿವೇಶನ ಮಾಲಿಕರಿಗೆ ಮನೆ ಕಟ್ಟಲು 'ತುರಹಳ್ಳಿ' ತೊಡಕು!

Srinivas Rao BV

ಬೆಂಗಳೂರು: ಬನಶಂಕರಿ 6ನೇ ಹಂತದಲ್ಲಿ ಬಿಡಿಎ ಹಂಚಿಕೆ ಮಾಡಿರುವ ನಿವೇಶನಗಳ ಮಾಲಿಕರಿಗೆ ಮನೆ ಕಟ್ಟಲು ಹಲವು ಅಡಚಣೆಗಳಿರುವುದು ಸಾರ್ವಜನಿಕ ಕುಂದುಕೊರತೆಗಳ ಸಭೆಯಲ್ಲಿ ಬಹಿರಂಗವಾಗಿದೆ.
 
ಈ ಪ್ರದೇಶದ ಸನಿಹದಲ್ಲಿ ತುರಹಳ್ಳಿ ಅರಣ್ಯ ಇರುವುದರಿಂದ ಅರಣ್ಯ ಇಲಾಖೆ ನಿವೇಶನದ ಮಾಲಿಕರಿಗೆ ಮನೆ ನಿರ್ಮಾಣ ಕಾಮಗಾರಿಗೆ ಅನುಮತಿ ನೀಡುತ್ತಿಲ್ಲ. ಈ ವಾರದ ಕುಂದುಕೊರತೆಗಳ ಸಭೆಯಲ್ಲಿ ಮೊದಲ ಬಾರಿಗೆ ಹಲವು ಇಲಾಖೆಗಳ ಕೇಸ್ ವರ್ಕರ್ ಗಳನ್ನೂ ಆಹ್ವಾನಿಸಿದ್ದು ಈ ಸಭೆಯ ವಿಶೇಷ ಅಂಶವಾಗಿತ್ತು.
 
2003-04 ರ ಅವಧಿಯಲ್ಲಿ ಒಟ್ಟು 2006 ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು, ಈಗ ಈ ನಿವೇಶನಗಳ ಮಾಲಿಕರು ಅರಣ್ಯ ಇಲಾಖೆಯೊಂದಿಗೆ ಸಮಸ್ಯೆ ಹೊಂದಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಬಿಡಿಎ ಅಧಿಕಾರಿ ಎರಡು ದಶಕಗಳ ಹಿಂದೆ ಬಿಡಿಎ ನಿವೇಶಗಳನ್ನು ಹಸ್ತಾಂತರಿಸಲಾಗಿತ್ತು ಎಂದು ಹೇಳಿದ್ದಾರೆ. 2009 ರಲ್ಲಿ ಅರಣ್ಯ ಇಲಾಖೆ ಈ ಪ್ರದೇಶದಲ್ಲಿನ ಬಹಳಷ್ಟು ಭೂಮಿ ತನ್ನ ವ್ಯಾಪ್ತಿಯಲ್ಲಿ ಬರುತ್ತಿದ್ದು, ಅದನ್ನು ಸ್ವಾಧೀನಕ್ಕೆ ಪಡೆದಿರುವುದಾಗಿ ಹೇಳಿದೆ. ಅದಕ್ಕೆ ಗೋಡೆ ಮೂಲಕ ಬೇಲಿ ಹಾಕಲಾಗಿದೆ. ಆದ್ದರಿಂದ ಈ ಭಾಗದಲ್ಲಿ 849 ನಿವೇಶನಗಳು ನಷ್ಟವಾಗಿದೆ ಎಂದು ಅಧಿಕಾರಿಹಳು ಹೇಳಿದೆ. ಈ ಪೈಕಿ 3, 5, 4 ಬಿ ಬ್ಲಾಕ್ ಹಾಗೂ 4 ಹೆಚ್ ಬ್ಲಾಕ್ ನಿವೇಶನಗಳೂ ಸೇರಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆಲೂರು ಬಿಡಿಎ ಫ್ಲ್ಯಾಟ್​ಗಳ ಕರ್ಮಕಾಂಡ: ನೀರು ಸೋರಿಕೆ, ಬಿರುಕು ಬಿಟ್ಟ ಗೋಡೆಗಳಿಂದ ವಿಲ್ಲಾ ನಿವಾಸಿಗಳು ಕಂಗಾಲು!
 
ಇದೇ ವೇಳೆ ಇನ್ನೂ ಕೆಲವು ಉಳಿದ ನಿವೇಶನದ ಮಾಲಿಕರು ತನ್ನ ನಿವೇಶನದಲ್ಲಿ ಮನೆ ನಿರ್ಮಿಸಲು ಯತ್ನಿಸಿದ್ದಾರೆ. ಆದರೆ 2 ವರ್ಷಗಳ ಹಿಂದೆ, ಈ ಪೈಕಿ ಹಲವು ನಿವೇಶನಗಳು ತನ್ನ ಗಡಿಯ 100 ಮೀಟರ್ ಗಳ ವ್ಯಾಪ್ತಿಯಲ್ಲಿದ್ದು, ಇದು ಬಫರ್ ಜೋನ್ ಆಗಿರುವುದರಿಂದ ಮನೆ ನಿರ್ಮಾಣ ಮಾಡಬಾರದು ಎಂದು ಅರಣ್ಯ ಇಲಾಖೆ ತಗಾದೆ ತೆಗೆದಿದೆ. ಇದರಿಂದಾಗಿ ಒಟ್ಟು 1,157 ನಿವೇಶನಗಳು, ಎರಡು ನಾಗರಿಕ ಸೌಕರ್ಯ ನಿವೇಶನಗಳು ಪರಿಣಾಮ ಎದುರಿಸಬೇಕಾಗಿ ಬಂದಿದೆ. ನಿವೇಶನದ ಮಾಲಿಕರಿಗೆ ಮನೆಯನ್ನು ನಿರ್ಮಿಸಲು ಅರಣ್ಯ ಇಲಾಖೆ ಬಿಡುತ್ತಿಲ್ಲ ಎಂದು ಬಿಡಿಎ ಅಧಿಕಾರಿಗಳು ಹೇಳಿದ್ದಾರೆ. 

ಈ ಬಗ್ಗೆ ಕೇಳಿದ್ದಕ್ಕೆ ಬಿಡಿಎ ಆಯುಕ್ತ ಕುಮಾರ್ ಜಿ ನಾಯ್ಕ್ ಪ್ರತಿಕ್ರಿಯೆ ನೀಡಿದ್ದು, ಅರಣ್ಯ ಇಲಾಖೆ 30 ಮೀಟರ್ ವ್ಯಾಪ್ತಿಯಲ್ಲಿ ಬಫರ್ ಜೋನ್ ನ್ನು ಗುರುತಿಸುವಂತೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಮೂಲಕ ಹಲವು ನಿವೇಶನಗಳನ್ನು ಉಳಿಸಿಕೊಳ್ಳಬಹುದಾಗಿದೆ, ಇದಕ್ಕೆ ಅನುಮೋದನೆ ಸಿಕ್ಕಿದಲ್ಲಿ ಹಲವು ಮಂದಿಗೆ ರಿಲೀಫ್ ದೊರೆಯಲಿದೆ ಎಂದು ಹೇಳಿದ್ದಾರೆ.
 
ಇನ್ನು ಸಾರ್ವಜನಿಕ ಕುಂದುಕೊರತೆಗಳ ಸಭೆಯಲ್ಲಿ ಬಿಡಿಎ ನಿವೇಶನ ಹಾಗೂ ಫ್ಲ್ಯಾಟ್ ಗಳ ನೋಂದಣಿ ವಿಳಂಬವಾಗುತ್ತಿರುವುದು ಹಾಗೂ ಡಿನೋಟಿಫಿಕೇಶನ್ ಪರಿಣಾಮ ನಿವೇಶನ ಕಳೆದುಕೊಂಡ ಅರ್ಕಾವತಿ ಲೇಔಟ್ ನ ಹಂಚಿಕೆದಾರರಿಗೆ ಪರ್ಯಾಯ ನಿವೇಶನ ಹಂಚಿಕೆಯ ವಿಷಯಗಳು ಹೆಚ್ಚು ಪ್ರಸ್ತಾಪವಾದ ವಿಷಯಗಳಾಗಿವೆ.

SCROLL FOR NEXT