ರಾಜ್ಯ

ತುಮಕೂರು: ವಿದ್ಯಾರ್ಥಿನಿಯರಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ, ಮುಖ್ಯೋಪಾಧ್ಯಾಯ ಅಮಾನತು

Ramyashree GN

ತುಮಕೂರು: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶಿಕ್ಷಣ ಇಲಾಖೆ ಮಂಗಳವಾರ ತುಮಕೂರು ಜಿಲ್ಲೆಯ ಶಾಲೆಯೊಂದರ ಶಿಕ್ಷಕ ಮತ್ತು ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸಿದೆ.

ಮೂಲಗಳ ಪ್ರಕಾರ, ಬೋರಗುಂಟೆ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಮಂಜುನಾಥ, ವಿದ್ಯಾರ್ಥಿನಿಯರೊಂದಿಗೆ ಪ್ರತಿದಿನ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ.

ಇದೇ ವೇಳೆ ಕರ್ತವ್ಯಲೋಪ ಆರೋಪದಡಿ ಮುಖ್ಯಶಿಕ್ಷಕ ನಟರಾಜ್ ಅವರನ್ನು ಅಮಾನತುಗೊಳಿಸಲಾಗಿದೆ.

ಅಪರಾಧದ ಬಗ್ಗೆ ಮಾಹಿತಿ ಪಡೆದ ಸಂತ್ರಸ್ತರ ಪೋಷಕರು, ಇತರ ಸ್ಥಳೀಯ ನಿವಾಸಿಗಳೊಂದಿಗೆ ಶಾಲೆಯ ಆವರಣಕ್ಕೆ ನುಗ್ಗಿ ಆರೋಪಿ ಶಿಕ್ಷಕನ ಕೃತ್ಯದ ಬಗ್ಗೆ ಪ್ರಶ್ನಿಸಿದರು. ಅಲ್ಲದೆ, ಗುಂಪು ಮಂಜುನಾಥನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿತ್ತು.

ಘಟನೆ ನಂತರ ಬ್ಲಾಕ್ ಶಿಕ್ಷಣಾಧಿಕಾರಿ (ಬಿಇಒ) ತಿಮ್ಮರಾಜು, ಬಡವನಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಹನುಮಂತರಾಯಪ್ಪ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಅನಿತಾ ಅವರನ್ನೊಳಗೊಂಡ ತಂಡ ಆರೋಪಿ ಶಿಕ್ಷಕನಿಂದ ಲೈಂಗಿಕ ಕಿರುಕುಳದ ಕುರಿತು ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿತು.

ಸದ್ಯ ಮಂಜುನಾಥ ಬಡವನಹಳ್ಳಿ ಪೊಲೀಸರ ವಶದಲ್ಲಿದ್ದಾರೆ.

SCROLL FOR NEXT