ಬೆಂಗಳೂರು: ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಮೇಲಿದ್ದ ಕಳ್ಳತನ ಆರೋಪವೊಂದು ಸಾಬೀತಾಗಿದ್ದು, ಈ ಹಿನ್ನೆಲೆಯಲ್ಲಿ ಚಿತ್ತಾಪುರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಡೆಸಬೇಕಿದ್ದ ಪ್ರಚಾರ ರದ್ದಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಲ್ಲಿ ಮೇ 6 ರಂದು ಪಿಎಂ ಮೋದಿ ಭಾಗವಹಿಸಬೇಕಾಗಿದ್ದ ಸಾರ್ವಜನಿಕ ಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ವಿರುದ್ಧ ಹಲವಾರು ಅಪರಾಧ ಪ್ರಕರಣಗಳಿದ್ದು, ಈ ಬಗ್ಗೆ ಪ್ರತಿಪಕ್ಷಗಳು ಕಿಡಿಕಾರುತ್ತಲೇ ಇವೆ. ಇದೀಗ ಮಣಿಕಂಠನ ಮೇಲಿದ್ದ ಕಳ್ಳತನ ಆರೋಪವೊಂದು ಸಾಬೀತಾಗಿದ್ದು, ಎಚ್ಚೆತ್ತುಕೊಂಡ ಬಿಜೆಪಿ ಚಿತ್ತಾಪುರದಲ್ಲಿ ಮೋದಿಯವರು ಮಣಿಕಂಠ ರಾಠೋಡ್ ಪರ ನಡೆಸಬೇಕಿದ್ದ ಪ್ರಚಾರವನ್ನು ರದ್ದುಪಡಿಸಿದೆ.
ಅಂಗನವಾಡಿ ಮಕ್ಕಳ ಹಾಲಿನ ಪುಡಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ ಪ್ರಕರಣದಲ್ಲಿ ಮಣಿಕಂಠ ರಾಠೋಡ್ ಅವರು ಶಿಕ್ಷೆಗೆ ಗುರಿಯಾಗಿದ್ದು, ಪ್ರಕರಣ ಸಂಬಂಧ ರಾಠೋಡ್ ಅವರು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.
ಈ ಪರಿಸ್ಥಿತಿಯಲ್ಲಿ ಮಣಿಕಂಠನ ಅವರ ಮೋದಿಯವರು ಪ್ರಚಾರ ನಡೆಸಿದ್ದೇ ಆದರೆ, ಬಿಜೆಪಿ ಮುಜುಗರಕ್ಕೊಳಗಾಗಬೇಕಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಖರ್ಗೆ ಪ್ರತಿನಿಧಿಸಿದ್ದ ಚಿತ್ತಾಪುರ ಕಾಂಗ್ರೆಸ್ ಗೆ ಪ್ರತಿಷ್ಠೆಯ ಕಣ: ಬಿಜೆಪಿಗೆ ನೆರವಾಗಲಿದ್ಯಾ ಜಾತಿ ಸಮೀಕರಣ!
ಏಪ್ರಿಲ್ 28 ರಂದು ಚಿತ್ತಾಪುರದಲ್ಲಿ ಮಣಿಕಂಠ ರಾಠೋಡ್ ಪರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೋಡ್ ಶೋ ನಡೆಸಿದ್ದರು.
ಮಣಿಕಂಠನ ಮೇಲೆ ಹಲವಾರು ಪ್ರಕರಣ ಇದೆ. ಸಿಎಂ ಅವರ ಪರ ಮತ ಯಾಚನೆ ಮಾಡುವುದು ದುರಂತ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು.
ಟೀಕೆಗಳ ಬೆನ್ನಲ್ಲೇ ತಮ್ಮ ನಡೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಮರ್ಥಿಸಿಕೊಂಡಿದ್ದರು. ಕಾಂಗ್ರೆಸ್ನ ರಾಷ್ಟ್ರೀಯ-ರಾಜ್ಯ ನಾಯಕರ ಮೇಲೂ ಪ್ರಕರಣಗಳಿವೆ. ಅವರುಗಳೇ ಜಾಮೀನು ಮೇಲೆ ಹೊರಬಂದಿದ್ದಾರೆ. ನಿಮ್ಮ ಮಾತಿನಂತೆಯೇ ನಡೆಯುವುದಾದರೇ ನೀವೆಲ್ಲರೂ ರಾಜಕೀಯದಿಂದಲೇ ಹೊರಗುಳಿಯಬೇಕು ಎಂದು ಹೇಳಿದ್ದರು.