ರಾಜ್ಯ

ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಗೆಲುವು: ಅಭಿಮಾನಿಗಳು, ಬೆಂಬಲಿಗರಿಂದ ಹರಿದುಬರುತ್ತಿರುವ ಹೂಗುಚ್ಚ, ಹೂಮಾಲೆ, ಶಾಸಕರಿಂದ ಸದುಪಯೋಗ!

Manjula VN

ಬೆಂಗಳೂರು: ರಾಜಕಾರಣಿಗಳು ಮತ್ತು ಗಣ್ಯ ವ್ಯಕ್ತಿಗಳಿಗೆ ಅವರ ಅಭಿಮಾನಿಗಳು, ಬೆಂಬಲಿಗರು ಹೂಗುಚ್ಚ ನೀಡುವುದು, ಹೂಮಾಲೆ ಹಾಕುವುದು ಸಾಮಾನ್ಯ. ಆದರೆ, ಈ ಹೂಮಾಲೆ, ಹೂಗುಚ್ಚಗಳನ್ನು ಕಸದ ತೊಟ್ಟಿಗೆ ಎಸೆಯುವ ಬದಲು, ಸದುದ್ದೇಶಕ್ಕೆ ನೀಡುವ ಮೂಲಕ ಶಾಸಕರೊಬ್ಬರು ಇತರರಿಗೆ ಮಾದರಿಯಾಗಿದ್ದಾರೆ.

ಕೋರಮಂಗಲ 1ನೇ ಬ್ಲಾಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಪದ್ಮಶ್ರೀ ಬಲರಾಮ್ ಅವರು ಅವರು ನಿನ್ನೆ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿದರು.

ಈ ವೇಲೆ ಕೊಠಡಿಯೊಂದರಲ್ಲಿ ಹೂಮಾಲೆ, ಹೂಗುಚ್ಛಗಳಿರುವುದು ಕಂಡು ಬಂದಿದೆ. ಈ ಹೂವುಗಳನ್ನು ವ್ಯರ್ಥ ಮಾಡುವ ಬದಲು ನಿಮ್ಹಾನ್ಸ್ ನಲ್ಲಿರುವ ಗ್ರೀನ್ ಸ್ಕಿಲ್ ಟ್ರೈನಿಂಗ್ ಸೆಂಟರ್ ಗೆ ನೀಡುವಂತೆ ಸಲಹೆ ನೀಡಿದ್ದಾರೆ.

ಗ್ರೀನ್ ಸ್ಕಿಲ್ ಟ್ರೈನಿಂಗ್ ಸೆಂಟರ್ ಬಳಸಿದ ಹೂವುಗಳಿಂದ ಬಣ್ಣ ಬಣ್ಣದ ರಂಗೋಲಿ ಪುಡಿಯನ್ನು ಸಿದ್ಧಪಡಿಸುತ್ತದೆ.

ಗ್ರೀನ್ ಸ್ಕಿಲ್ ಟ್ರೈನಿಂಗ್ ಸೆಂಟರ್ ಮತ್ತು ಅದರ ಕಾರ್ಯಗಳ ಬಗ್ಗೆ ನನಗೆ ಅರಿವಿತ್ತು. ಹೂವುಗಳಿಂದ ಮಾಡಿದ ಹೂಮಾಲೆಗಳು ವ್ಯರ್ಥವಾಗದಂತೆ ಮಾಡಲು ಇದು ಅತ್ಯುತ್ತಮ ಮಾರ್ಗವಾಗಿದೆ ಎಂದು ಪದ್ಮಶ್ರೀ ಅವರು ಹೇಳಿದ್ದಾರೆ.

ಗ್ರೀನ್ ಸ್ಕಿಲ್ ತರಬೇತಿ ಕೇಂದ್ರದ ಬೋಧಕರಾದ ಎನ್.ಬಿ.ಮೈತ್ರೇಯಿ ಮಾತನಾಡಿ, ನಮ್ಮ ಕೇಂದ್ರಕ್ಕೆ ಸಾಮಾನ್ಯವಾಗಿ ದೇವಾಲಯಗಳು ಮತ್ತು ಇತರ ಸ್ಥಳಗಳಿಂದ ದಿನಕ್ಕೆ ಸುಮಾರು 10-15 ಕೆಜಿ ಬಳಸಿದ ಹೂವುಗಳು ಬರುತ್ತವೆ. ನಿಮ್ಹಾನ್ ಕ್ಯಾಂಪಸ್‌ನಲ್ಲಿ ವಾಸಿಸುವ ಮಾನಸಿಕ ರೋಗಿಗಳು ಮತ್ತು ಹಗಲಿನಲ್ಲಿ ಚಿಕಿತ್ಸೆಗೆ ಬರುವವರು ಹೂವುಗಳನ್ನು ಬೇರ್ಪಡಿಸುವ ಕೆಲಸ ಮಾಡುತ್ತಾರೆ. ಈ ಹೂವುಗಳ ಒಣಗಿಸಿ ಪುಡಿ ಮಾಡಿ, ಹೋಳಿಗೆ ಸಾವಯವ ಬಣ್ಣ ಮತ್ತು ರಂಗೋಲಿ ಬಣ್ಣಗಳ ಸಿದ್ಧಪಡಿಸಲಾಗುತ್ತದೆ. ಇದಲ್ಲದೆ, ಮಕ್ಕಳಿಗಾಗಿ ಆರ್ಟ್ ಕಿಟ್‌ಗಳನ್ನು ತಯಾರಿಸಲೂ ಕೂ ಈ ಹೂವುಗಳನ್ನು ಬಳಸಲಾಗುತ್ತದೆ ಎಂದು ಹೇಳಿದ್ದಾರೆ.

ಏಳು ವರ್ಷಗಳ ಹಿಂದೆ ಈ ಕೇಂದ್ರ ಅಸ್ತಿತ್ವಕ್ಕೆ ಬಂದಿದ್ದು, ಇದು ಒಂದು ರೀತಿಯ ಚಿಕಿತ್ಸೆ ಕೂಡ ಆಗಿದೆ, ರೋಗಿಗಳು ಕೌಶಲ್ಯಗಳನ್ನು ಕಲಿಯಲು, ಚುರುಕಾಗಲು ಮತ್ತು ಯೋಚಿಸಲು ಸಹಾಯ ಮಾಡುತ್ತದೆ. ಇದು ಅವರಲ್ಲಿನ ಆತ್ಮವಿಶ್ವಾಸ ಹೆಚ್ಚಿಸಲು ಮತ್ತು ಸ್ವತಂತ್ರವಾಗಿ ಜೀವನ ನಡೆಸಲು ಕೂಡ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

SCROLL FOR NEXT