ರಾಜ್ಯ

ರೈತರ ಕಲ್ಯಾಣಕ್ಕಾಗಿ ರಸಗೊಬ್ಬರ ಸಹಾಯಧನ 1.08 ಲಕ್ಷ ಕೋಟಿಗೆ ಏರಿಕೆ- ಸಂಸದ ಈರಣ್ಣ ಕಡಾಡಿ

Nagaraja AB

ಬೆಂಗಳೂರು: ರೈತರ ಕಲ್ಯಾಣಕ್ಕಾಗಿ ರಸಗೊಬ್ಬರಕ್ಕೆ ಹೆಚ್ಚುವರಿಯಾಗಿ 38 ಸಾವಿರ ಕೋಟಿ ರೂ. ಸಹಾಯಧನ ನೀಡಲು ಕೇಂದ್ರ ಸಚಿವ ಸಂಪುಟದಲ್ಲಿ ನಿರ್ಧರಿಸಿದೆ. ಇದರಿಂದ 2023-24ನೇ ಸಾಲಿನಲ್ಲಿ ರಸಗೊಬ್ಬರದ ಸಹಾಯಧನ ಒಟ್ಟು 1.08 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಈ ಸಹಾಯಧನದಿಂದ 12 ಕೋಟಿ ರೈತರು ಪ್ರಯೋಜನೆ ಪಡೆದುಕೊಳ್ಳಲಿದ್ದಾರೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ತಿಳಿಸಿದ್ದಾರೆ.

 ಕೇಂದ್ರ ಸರ್ಕಾರ ಯೂರಿಯಾ ರಸಗೊಬ್ಬರ ಸಹಾಯಧನಕ್ಕಾಗಿ 2023-24ರ ಬಜೆಟ್‍ನಲ್ಲಿ 70 ಸಾವಿರ ಕೋಟಿ ರೂ. ಘೋಷಣೆ ಮಾಡಿದೆ. ಇದೀಗ ಹೆಚ್ಚುವರಿಯಾಗಿ 38 ಸಾವಿರ ಕೋಟಿ ರೂ. ಸಹಾಯಧನ ಘೋಷಣೆ ಮಾಡಿದೆ. ಅಲ್ಲದೇ ಪ್ರಸ್ತುತ ಯೂರಿಯಾ ಬೆಲೆ ಪ್ರತಿ ಬ್ಯಾಗ್‍ಗೆ 276 ಹಾಗೂ ಡಿಎಪಿಗೆ 1350 ರೂ. ಇದ್ದು, ಈ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ ಮತ್ತು ನೈಟ್ರೋಜನ್‍ಗೆ ಪ್ರತಿ ಕೆಜಿಗೆ 76 ರೂ, ಫಾಸ್ಪೇಟ್‍ಗೆ 41 ರೂ, ಪೊಟಾಶ್ಗೆ 15 ರೂ, ಸಲ್ಫರ್ ಗೆ 2.8 ರೂ. ಸಹಾಯಧನ ನೀಡಲಾಗುತ್ತಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ಕೇಂದ್ರ ಸರ್ಕಾರದ ‘ಒಂದು ದೇಶ ಒಂದು ಗೊಬ್ಬರ’ ಯೋಜನೆಯಡಿ ಭಾರತವು ರಸಗೊಬ್ಬರ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುತ್ತಿದೆ. ರೈತರಿಗೆ ಅಗ್ಗದ ಮತ್ತು ಗುಣಮಟ್ಟದ ಪೋಷಕಾಂಶಗಳ ಯೂರಿಯಾ ಉತ್ಪಾದನೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ದೇಶದ ಬೆನ್ನೆಲುಬಾಗಿರುವ ರೈತರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ.

SCROLL FOR NEXT