ಚಿತ್ರದುರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಚಿತ ಯೋಜನೆಗಳನ್ನು ಟೀಕಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್ ಹಾಕಿದ್ದ ಸರ್ಕಾರಿ ಶಾಲೆಯ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ.
ಮೇ 20 ರಂದು ಸಿದ್ದರಾಮಯ್ಯ ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನವೇ ಚಿತ್ರದುರ್ಗ ಜಿಲ್ಲೆಯ ಕಾನುಬೇನಹಳ್ಳಿಯ ಸರ್ಕಾರಿ ಶಾಲೆಯ ಶಿಕ್ಷಕ ಶಾಂತಮೂರ್ತಿ ಎಂಜಿ ಅವರನ್ನು ಮಾನತುಗೊಳಿಸಲಾಗಿದೆ.
ಸಿದ್ದರಾಮಯ್ಯ ಅವರು 2,42,000 ಕೋಟಿ ಸಾಲ ಮಾಡಿದ್ದಾರೆ. ಬಿಟ್ಟಿ ಭಾಗ್ಯ ಕೊಡದೆ ಇನ್ನೇನು ಎಂದು ಶಾಂತಮೂರ್ತಿ ಅವರು ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು.
ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ 3,590 ಕೋಟಿ ರೂ., ಧರಂ ಸಿಂಗ್ ಅವರು 15,635 ಕೋಟಿ ರೂ., ಎಚ್.ಡಿ.ಕುಮಾರಸ್ವಾಮಿ ಅವರು 3,545 ಕೋಟಿ ರೂ., ಬಿ.ಎಸ್.ಯಡಿಯೂರಪ್ಪ ಅವರ ಅವಧಿಯಲ್ಲಿ 25,653 ಕೋಟಿ ರೂ., ಡಿ.ವಿ.ಸದಾನಂದಗೌಡ ಅವಧಿಯಲ್ಲಿ 9,464 ಕೋಟಿ ರೂ., ಜಗದೀಶ್ ಶೆಟ್ಟರ್ ಅಧಿಕಾರದ ಅವಧಿಯಲ್ಲಿ 13,464, ಸಿದ್ದರಾಮಯ್ಯ ಅವರ ಅವಧಿಯಲ್ಲಿ 2,42,000 ಕೋಟಿ ಸಾಲ ಮಾಡಲಾಗಿದೆ.
ಇದನ್ನು ಓದಿ: ಕಾಂಗ್ರೆಸ್ ಗೆಲ್ಲಿಸಿದ ಗ್ಯಾರಂಟಿ ಕಾರ್ಡ್: ಉಚಿತ ಭರವಸೆಗಳು ಜಾರಿಯಾಗುವುದೇ..? ಆರ್ಥಿಕ ತಜ್ಞರು ಹೇಳೋದೇನು...?
ಎಸ್ಎಂ ಕೃಷ್ಣ ಅವರಿಂದ ಹಿಡಿದ ಜಗದೀಶ್ ಶೆಟ್ಟರ್ ವರೆಗೆ ಮಾಡಿದ ಒಟ್ಟು ಸಾಲ 71,331 ಕೋಟಿ ರೂಪಾಯಿ. ಆದರೆ ಸಿದ್ದರಾಮಯ್ಯ ಅವರು ಮಾಡಿದ ಸಾಲ 2,42,000 ಕೋಟಿ. ಬಿಟ್ಟಿ ಭಾಗ್ಯ ಕೊಡದೆ ಇನ್ನೇನು ಎಂದು ಫೇಸ್ಬುಕ್ನಲ್ಲಿ ಶಾಂತಮೂರ್ತಿ ಅವರು ಬರೆದುಕೊಂಡಿದ್ದರು.
ಶಿಕ್ಷಕ ಶಾಂತಮೂರ್ತಿ ಎಂಜಿ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಂಡ ನಂತರ ಅವರು ನಾಗರಿಕ ಸೇವಾ ನೀತಿ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಹೊಸದುರ್ಗ ಬಿಇಒ ಜಯಪ್ಪ ಅವರು ಶಿಕ್ಷಕನನ್ನು ಅಮಾನತು ಮಾಡಿದ್ದಾರೆ. ಅಲ್ಲದೆ, ಶಾಂತಮೂರ್ತಿ ಅವರ ಕಾರ್ಯವೈಖರಿ ಬಗ್ಗೆ ಇಲಾಖಾ ಮಟ್ಟದ ತನಿಗೂ ಆದೇಶಿಲಾಗಿದೆ ಎಂದು ತಿಳಿದು ಬಂದಿದೆ.