ರಾಜ್ಯ

ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಪೊಲೀಸ್ ಕಾನ್‌ಸ್ಟೆಬಲ್

Manjula VN

ಕಲಬುರಗಿ: ಲಂಚ ಪಡೆಯುತ್ತಿದ್ದ ವೇಳೆ ಇಲ್ಲಿನ ಸೈಬರ್, ಎಕನಾಮಿಕ್ಸ್ ಆ್ಯಂಡ್ ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಠಾಣೆಯ ಕಾನ್ಸ್'ಟೇಬಲ್ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಕಂಪ್ಯೂಟರ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಲಬುರಗಿಯ ಸಿಇಎನ್ ಅಪರಾಧ ಠಾಣೆಯ ಪೊಲೀಸ್ ಪೇದೆ ಮುತ್ತುರಾಜ್ ಅಲಿಯಾಸ್ ಮಕ್ಕಳಪ್ಪ ನೆಲಜರಿ ಎಂಬಾತನನ್ನು ಲೋಕಾಯುಕ್ತ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಈ ಸಂಬಂಧ ಕಲಬುರಗಿ ಜಿಲ್ಲಾ ಕರ್ನಾಟಕ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎ ಆರ್ ಕರ್ನೂಲ್ ಅವರು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಸಂಜನ್ ಬೀರಪ್ಪ ಹುವಣ್ಣಗೋಳ ಎಂಬುವವರ ವಿರುದ್ಧ ಸೈಬರ್ ಅಪರಾಧಕ್ಕೆ ಸಂಬಂಧಿಸಿದ ದೂರು ಅರ್ಜಿ ದಾಖಲಾಗಿತ್ತು.

ತಾನು ವಿದ್ಯಾರ್ಥಿಯಾಗಿದ್ದರಿಂದ ಹೆಸರನ್ನು ಕೈ ಬಿಡಬೇಕು ಎಂದು ಸಂಜನ್ ಮನವಿ ಮಾಡಿದ್ದರು. ಕಂಪ್ಯೂಟರ್ ವಿಭಾಗದಲ್ಲಿ ಕೆಲಸ ಮಾಡುವ ಮುತ್ತುರಾಜ ಹೆಸರು ಕೈ ಬಿಡಲು ರೂ.15 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ. ಆದರೆ, ಸಂಜನ್ 12 ಸಾವಿರ ರೂ ನೀಡುವುದಾಗಿ ಮನವಿ ಮಾಡಿದ್ದ. ಇದರಂತೆ ಸಂಜನ್ ರೂ.7000 ನೀಡಿದ್ದು, ಬಾಕಿ ಇರುವ ರೂ. 5000ಕ್ಕೆ ಕಾನ್ ಸ್ಟೆಬಲ್ ಪೀಡಿಸುತ್ತಿದ್ದ. ಇದರಿಂದ ಬೇಸತ್ತ‌ ಸಂಜನ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.

ಇದರಂತೆ ಸೋಮವಾರ ರಾತ್ರಿ ‌8.30ರ ಸುಮಾರಿಗೆ ಕಲಬುರಗಿಯ ಐವಾನ್ ಇ ಶಾಹಿ ರಸ್ತೆಯಲ್ಲಿರುವ ಸಿಇಎನ್ ಠಾಣೆಯ ಎದುರು ರೂ.5000 ಹಣವನ್ನು ಪಡೆಯುತ್ತಿರುವಾಗ ಮುತ್ತುರಾಜನನ್ನು ಲೋಕಾಯುಕ್ತ  ಡಿವೈಎಸ್ಪಿ‌ ನಾನಾಗೌಡ ಆರ್. ಪೊಲೀಸ್ ಪಾಟೀಲ ಹಾಗೂ ತಂಡದವರು ಬಂಧನಕ್ಕೊಳಪಡಿಸಿದ್ದಾರೆ.

SCROLL FOR NEXT