ರಾಜ್ಯ

ಬೆಂಗಳೂರು ಉಪನಗರ ರೈಲು ಯೋಜನೆ: 12 ನಿಲ್ದಾಣಗಳ ನಿರ್ಮಾಣಕ್ಕೆ ಟೆಂಡರ್'ಗೆ ಆಹ್ವಾನ

Manjula VN

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯನ್ನು (ಬಿಎಸ್‌ಆರ್‌ಪಿ) ಅನುಷ್ಠಾನಗೊಳಿಸುವ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ಮಲ್ಲಿಗೆ ಕಾರಿಡಾರ್‌ನಲ್ಲಿ (ಬೈಯಪ್ಪನಹಳ್ಳಿ– ಚಿಕ್ಕಬಾಣಾವರ) 12 ನಿಲ್ದಾಣಗಳ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಿದೆ.

ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್‌ನ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಬೆನ್ನಿಗಾನಹಳ್ಳಿ, ಕಸ್ತೂರಿ ನಗರ, ಸೇವಾ ನಗರ, ಬಾಣಸವಾಡಿ, ನಾಗವಾರ, ಕನಕನಗರ, ಹೆಬ್ಬಾಳ, ಮತ್ತಿಕೆರೆ, ಯಶವಂತಪುರ, ಶೆಟ್ಟಿಹಳ್ಳಿ, ಮೈದರಹಳ್ಳಿ, ಚಿಕ್ಕಬಾಣಾವರ ನಿಲ್ದಾಣಗಳ ವಿನ್ಯಾಸ ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದೆ.

12 ನಿಲ್ದಾಣಗಳಲ್ಲಿ ಎರಡು ಎತ್ತರಿಸಿದ ನಿಲ್ದಾಣಗಳು, ಎರಡು ಎತ್ತರಿಸಿದ ಇಂಟರ್ ಚೇಂಜ್ ನಿಲ್ದಾಣಗಳು, ಎಂಟು ನೆಲಸ್ತರದ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ.

ಎತ್ತರಿಸಿದ ಪಾದಚಾರಿ ಉಕ್ಕಿನ ಮಾರ್ಗ, ಮೇಲ್ಚಾವಣಿಗಳ ರಚನೆ, ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ನಿರ್ಮಿಸಲು ಉದ್ದೇಶಿಸಿದೆ. ಬಿಡ್‌ ಸಲ್ಲಿಸಲು ಆಗಸ್ಟ್‌ 8 ಕೊನೆಯ ದಿನಾವಾಗಿದೆ ಎಂದು ಕೆ–ರೈಡ್ ವಿವರಿಸಿದೆ.

ಬೆಂಗಳೂರಿನಲ್ಲಿ ಉಪನಗರ ರೈಲು ಯೋಜನೆಯಡಿ ನಾಲ್ಕು ಕಾರಿಡಾರ್‌ಗಳು ನಿರ್ಮಾಣವಾಗುತ್ತಿವೆ. ಮೊದಲ ಹಂತದಲ್ಲಿ ಮಲ್ಲಿಗೆ ಕಾರಿಡಾರ್‌ನಲ್ಲಿ ಕಾಮಗಾರಿ ಆರಂಭವಾಗಿದೆ. ಬಾಕಿ ಮೂರು ಕಾರಿಡಾರ್‌ನಲ್ಲಿ ಕಾಮಗಾರಿ ಇನ್ನೂ ಆರಂಭವಾಗಿಲ್ಲ.

ಕೆಎಸ್‌ಆರ್‌ ರೈಲು ನಿಲ್ದಾಣದಿಂದ ದೇವನಹಳ್ಳಿಗೆ ಸಂಪರ್ಕ ಕಲ್ಪಿಸುವ ಸಂಪಿಗೆ (ಕಾರಿಡಾರ್‌–1) ಕಾರಿಡಾರ್‌ಗೆ ಮೊದಲ ಆದ್ಯತೆ ನೀಡಬೇಕು ಎಂಬ ಒತ್ತಡ ಇತ್ತು. ಆದರೂ, ಕಾರಿಡಾರ್–2 ಕಾಮಗಾರಿ ಆರಂಭಿಸಲು ಕೆ–ರೈಡ್ ಉತ್ಸುಕತೆ ತೋರಿಸಿದೆ.

ಗುತ್ತಿಗೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 8 ಕೊನೆಯ ದಿನವಾಗಿದ್ದು, ಅಂದು ಮಧ್ಯಾಹ್ನ 3 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳು http://eproc.karnataka.gov.in ಅಥವಾ www.kride.in ನಲ್ಲಿ ಲಭ್ಯವಿದೆ.

SCROLL FOR NEXT