ರಾಜ್ಯ

ಗಣಿ-ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣ: ಎಲ್ಲಾ ಆಯಾಮಗಳಲ್ಲೂ ತನಿಖೆ ಎಂದ ಸಚಿವ

Manjula VN

ದಾವಣಗೆರೆ: ಭೂ ಮತ್ತು ಗಣಿ ವಿಜ್ಞಾನ‌ ಇಲಾಖೆಯ ಬೆಂಗಳೂರು ಗ್ರಾಮಾಂತರ ಉಪ ನಿರ್ದೇಶಕಿ ಪ್ರತಿಮಾ ಹತ್ಯೆ ಪ್ರಕರಣದಲ್ಲಿ ಹಲವಾರು ಸಂಶಯಗಳಿದ್ದು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ ಎಂದು ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಭಾನುವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಅಕ್ರಮ ಗಣಿಗಾರಿಕೆ ಬಗ್ಗೆ ಆರೋಪ ಕೇಳಿ ಬಂದಿದೆ. ‌ಹೀಗಾಗಿ ಈ ಸಾವಿನ ಬಗ್ಗೆ ತನಿಖೆ ಆದ ಮೇಲೆ ಸ್ಪಷ್ಟವಾಗಿ ಹೇಳಲಾಗುವುದು. ಜೊತೆಗೆ ನಿನ್ನೆಯೇ ಇಲಾಖೆಯ ವಿಡಿಯೋ ಕಾನ್ಪರೆನ್ಸ್ ನಲ್ಲಿ ಪ್ರತಿಮಾ ಅವರು ಭಾಗಿ ಆಗಿದ್ದರು. ಅವರು ಒಳ್ಳೆಯ ಅಧಿಕಾರಿಯಾಗಿದ್ದರು'' ಎಂದು ಹೇಳಿದರು.

''ಹತ್ಯೆಗೆ ಸಂಬಂಧಿಸಿದಂತೆ ಯಾರಿಗೂ ನಿಖರವಾದ ಮಾಹಿತಿ ಗೊತ್ತಾಗಿಲ್ಲ. ಕೆಲವರು ಕೌಟುಂಬಿಕವಾಗಿ ಸಮಸ್ಯೆಗಳಿದ್ದವು ಎಂದು ಹೇಳಿದರೆ, ಮತ್ತೆ ಕೆಲವರು ಸಮಸ್ಯೆ ಇರಲಿಲ್ಲ ಎಂದೂ ಮಾಹಿತಿ ನೀಡುತ್ತಿದ್ದಾರೆ. ಹತ್ಯೆ ಕುರಿತಂತೆ ಪೂರ್ತಿ ತನಿಖೆ ನಡೆದ ಬಳಿಕವಷ್ಟೇ ಸತ್ಯಾಸತ್ಯತೆ ಗೊತ್ತಾಗಲಿದೆ'' ಎಂದು ತಿಳಿಸಿದರು.

ಅಧಿಕಾರಿಗಳಿಗೆ ಭದ್ರತೆ ಇಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ''ಎಲ್ಲರಿಗೂ ಪೊಲೀಸ್ ಭದ್ರತೆ ಕೊಡಲು ಆಗುವುದಿಲ್ಲ. ಈ ಪ್ರಕರಣವೇ ಬೇರೆ. ತನಿಖೆ ಆಗಲಿ'' ಎಂದರು.

ಕೌಟುಂಬಿಕ ಕಲಹದಿಂದ ಕೊಲೆ ನಡೆದಿದೆ: ವರದಿ ನಿರಾಕರಿಸಿದ ಪ್ರತಿಮಾ ಕುಟುಂಬ
ಈ ನಡುವೆ ಕೌಟುಂಬಿಕ ಕಲಹದಿಂದ ಕೊಲೆ ನಡೆದಿದೆ ಎಂಬ ವರದಿಯನ್ನು ಪ್ರತಿಮಾ ಅವರ ಕುಟುಂಬಸ್ಥರು ನಿರಾಕರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಮಾ ಅವರ ಸಹೋದರ ಕೆ.ಪ್ರವೀಶ್ ಅವರು, ಪ್ರತಿಮಾ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಮಗ ಶಾಲೆಗೆ ತೆರಳು ಮನೆಯಿಂದ ಹೊರಡುತ್ತಿದ್ದಂತೆ ಪ್ರತಿದಿನ ಅವರಿಗೆ ಫೋನ್ ಮಾಡುತ್ತಿದ್ದಳು. ಇದ್ದಕ್ಕಿದ್ದಂತೆ ಆಕೆ ಸಾವನ್ನಪ್ಪಿರುವುದು ಆಘಾತ ತಂದಿದೆ, ಆಕೆಗೆ ಯಾರೂ ಶತ್ರುಗಳಿರಲಿಲ್ಲ ಎಂದು ಹೇಳಿದ್ದಾರೆ.

ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಪ್ರತಿಮಾ ನಂತರ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಎಂಎಸ್ಸಿ ಮುಗಿಸಿದ್ದರು, 2008 ರಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಭೂವಿಜ್ಞಾನಿಯಾಗಿ ಸೇರಿದರು. ನಂತರ ಅವರು ಬೆಂಗಳೂರಿನ ರಾಮನಗರದಲ್ಲಿರುವ ಕೇಂದ್ರ ಕಚೇರಿಯಲ್ಲಿ ಕೆಲಸ ಪ್ರಾರಂಭಿಸಿದ್ದರು.

ಇತ್ತೀಚೆಗಷ್ಟೇ ಹಿರಿಯ ಭೂವಿಜ್ಞಾನಿಯಾಗಿ ಬಡ್ತಿ ಪಡೆದು ಬೆಂಗಳೂರು ಗ್ರಾಮಾಂತರದಲ್ಲಿ ಉಪ ನಿರ್ದೇಶಕಿಯಾಗಿ ನೇಮಕಗೊಂಡಿದ್ದರು. ಪ್ರತಿಮಾ ಅವರ ಪುತ್ರ ತೀರ್ಥಹಳ್ಳಿ ಶಾಲೆಯಲ್ಲಿ ಎಸ್ಎಸ್ಎಲ್'ಸಿ ವಿದ್ಯಾರ್ಥಿಯಾಗಿದ್ದಾನೆ.

SCROLL FOR NEXT