ರಾಜ್ಯ

ಉಡುಪಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ: ಹಂತಕನ ಪತ್ತೆಗೆ ಐದು ತಂಡಗಳನ್ನು ರಚಿಸಿದ ಪೊಲೀಸರು

Ramyashree GN

ಉಡುಪಿ: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ನಡೆದಿದ್ದು, ಹಂತಕನ ಪತ್ತೆಗೆ ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಈ ಆಘಾತಕಾರಿ ಘಟನೆ ಉಡುಪಿಯ ತೃಪ್ತಿ ನಗರದಲ್ಲಿ ಭಾನುವಾರ ನಡೆದಿದೆ. ಕೊಲೆಗಾರ ಮಹಿಳೆ, ಆಕೆಯ ಇಬ್ಬರು ಪುತ್ರಿಯರು ಮತ್ತು ಒಬ್ಬ ಮಗನನ್ನು ಅವರ ನಿವಾಸದಲ್ಲಿ ಎದೆ ಮತ್ತು ಹೊಟ್ಟೆಗೆ ಇರಿದು ಹತ್ಯೆ ಮಾಡಿದ್ದಾನೆ.

ಈ ತಂಡಗಳ ನೇತೃತ್ವವನ್ನು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ಶ್ರೇಣಿಯ ಅಧಿಕಾರಿಗಳು ವಹಿಸಲಿದ್ದಾರೆ.

ಕೃತ್ಯ ನಡೆದ ಸ್ಥಳದ ಬಳಿ ಆರೋಪಿ ಆಟೋದಿಂದ ಕೆಳಗಿಳಿದು ಬೈಕ್‌ನಿಂದ ಬಿದ್ದಿರುವ ವಿಡಿಯೋವನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಹಸೀನಾ (46), ಅವರ ಮಗಳು ಅಫ್ನಾನ್ (23), ಅಯ್ನಾಜ್ (21) ಮತ್ತು ಮಗ ಅಸೀಮ್ (12) ಅವರನ್ನು ಅವರ ನಿವಾಸದಲ್ಲಿ ಕೊಲೆ ಮಾಡಿದ್ದಾನೆ. ಹಸೀನಾ ಅವರ ಪತಿ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ.

ಹಂತಕನು ಮುಖವಾಡ ಧರಿಸಿ ಮನೆಗೆ ನುಗ್ಗಿ ಕುಟುಂಬ ಸದಸ್ಯರನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ವೇಳೆ ಅಸೀಮ್ ಹೊರಗೆ ಆಟವಾಡುತ್ತಿದ್ದು, ಒಳಗೆ ಬಂದಾಗ ಆತನಿಗೂ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

ಹಂತಕ ಹಸೀನಾಳ ಅತ್ತೆ ಮೇಲೂ ಹಲ್ಲೆ ನಡೆಸಿದ್ದಾನೆ. ಇದನ್ನು ಕಂಡ ನೆರೆಹೊರೆಯ ಯುವತಿ ಸಹಾಯಕ್ಕಾಗಿ ಕಿರುಚಿದಾಗ ಮತ್ತು ಸಹಾಯ ಮಾಡಲು ಮುಂದಾದಾಗ ಆಕೆಯನ್ನು ಬೆದರಿಸಿ ಓಡಿ ಹೋಗುವಂತೆ ಮಾಡಿದ್ದಾನೆ.

ಕೊಲೆಗಾರ ಮನೆಯಿಂದ ಯಾವುದೇ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿರಲಿಲ್ಲ. ಮೃತ ಅಫ್ನಾನ್ ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದು, ರಜೆಯ ಮೇಲೆ ಭಾನುವಾರ ಮನೆಗೆ ಬಂದಿದ್ದರು. ಪೊಲೀಸರು ಮಾಹಿತಿ ಕಲೆಹಾಕಿದ್ದು, ಇದು ಭಗ್ನ ಪ್ರೇಮಿಯ ಕೃತ್ಯವೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

SCROLL FOR NEXT