ರಾಜ್ಯ

ಬೆಂಗಳೂರು: ನಾಳೆ ಇಡೀ ದಿನ ಸಿಎಂ ಸಿದ್ದರಾಮಯ್ಯ ಜನತಾ ದರ್ಶನ

Nagaraja AB

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ  ಇಡೀ ದಿನ ಜನತಾ ದರ್ಶನ ನಡೆಸಲಿದ್ದಾರೆ. 

ಸೋಮವಾರ ಬೆಳಗ್ಗೆ 9-30 ರಿಂದ ಜನತಾ ದರ್ಶನ ಆರಂಭವಾಗಲಿದ್ದು, ಅಹವಾಲು ಸಲ್ಲಿಸುವವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೃಷ್ಣಾ ಆವರಣದಲ್ಲಿ 20 ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಎರಡು ಪ್ರತ್ಯೇಕ ಕೌಂಟರ್ ಗಳು ಇರಲಿವೆ.

ಜನರಿಂದ ಸ್ವೀಕರಿಸಿದ ಅಹವಾಲುಗಳನ್ನು ಇಲಾಖಾವಾರು ವಿಂಗಡಿಸಿ, ತಂತ್ರಾಂಶದಲ್ಲಿ ದಾಖಲಿಸಿ ಅರ್ಜಿದಾರರಿಗೆ ಸ್ವೀಕೃತಿ ನೀಡಲಾಗುತ್ತದೆ. ಬಳಿಕ ಜನರ ಅಹವಾಲನ್ನು ನೇರವಾಗಿ ಆಲಿಸಲಿರುವ ಸಿದ್ದರಾಮಯ್ಯ, ಪರಿಹಾರ ಸೂಚಿಸುವರು.

ಎಲ್ಲಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಆಯುಕ್ತರು ಖುದ್ದು ಹಾಜರಿರುವಂತೆ ಸೂಚಿಸಲಾಗಿದೆ. ಸುಮಾರು 100 ಅಧಿಕಾರಿಗಳು ಸ್ಥಳದಲ್ಲಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ಯತ್ನ ಮಾಡಲಿದ್ದಾರೆ ಎಂದು  ಮುಖ್ಯಮಂತ್ರಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಅಹವಾಲು ಸಲ್ಲಿಸುವವರು ತಮ್ಮ ಗುರುತಿಗಾಗಿ ಆಧಾರ್ ಸಂಖ್ಯೆ ಅಥವಾ ಪಡಿತರ ಚೀಟಿ ತರುವಂತೆ ಕೋರಲಾಗಿದೆ. ಇದರಿಂದ ತಂತ್ರಾಂಶದಲ್ಲಿ ದಾಖಲಿಸುವ ಅರ್ಜಿಗಳ ಸ್ಥಿತಿಗತಿಯನ್ನು ಪತ್ತೆ ಹಚ್ಚಲು ಅನುಕೂಲವಾಗಲಿದೆ ಎಂದು ಹೇಳಲಾಗಿದೆ. 

SCROLL FOR NEXT