ನವದೆಹಲಿ: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಇತ್ತೀಚಿನ ದಿನಗಳಲ್ಲಿ ಗಲಭೆ, ಅಹಿತಕರ ಘಟನೆಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸರು ಗಣೇಶ ವಿಸರ್ಜನಾ ಮೆರವಣಿಗೆಗೆ ಅನುಮತಿ ನೀಡದೇ ಇರಲು ನಿರ್ಧರಿಸಿದ್ದಾರೆ.
ನರದಾದ್ಯಂತ ಮೆರವಣಿಗೆ, ಡಿಜೆ ನೃತ್ಯಗಳಿಗೆ ಅನುಮತಿ ನೀಡದೇ ಇರಲು ಎಲ್ಲಾ ಪೊಲೀಸ್ ಠಾಣೆಗಳಿಗೆ ಪೊಲೀಸ್ ಆಯುಕ್ತ ಬಿ ದಯಾನಂದ್ ಸೂಚನೆ ನೀಡಿದ್ದಾರೆ.
ಒಂದು ವೇಳೆ ಅನುಮತಿ ಇಲ್ಲದೇ ಗಣೇಶ ಮೆರವಣಿಗೆ ನಡೆದದ್ದೇ ಆದಲ್ಲಿ ಆ ಘಟನೆ ನಡೆದ ವ್ಯಾಪ್ತಿಯ ಇನ್ಸ್ ಪೆಕ್ಟರ್ ನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ದಯಾನಂದ್ ಎಚ್ಚರಿಕೆ ನೀಡಿದ್ದಾರೆ.
ಗಣೇಶ ಮೆರವಣಿಗೆ ವೇಳೆ ನಗರದಲ್ಲಿ ಕೆಲವೆಡೆ ಗದ್ದಲ ಉಂಟಾದ ಘಟನೆಗಳು ಇತ್ತೀಚೆಗೆ ವರದಿಯಾಗಿದ್ದವು. ಹಲಸೂರು, ಯೆಡಿಯೂರು, ಆಡುಗೋಡಿಗಳಲ್ಲಿ ಘರ್ಷಣೆ ಉಂಟಾಗಿದ್ದವು. ಗಣೇಶ ವಿಸರ್ಜನೆಯ ವೇಳೆ ಉಂಟಾದ ಘರ್ಷಣೆಯಲ್ಲಿ ಆಡುಗೋಡಿಯಲ್ಲಿ ಶ್ರೀನಿವಾಸ್ ಎಂಬಾತನನ್ನು ಇರಿದು ಹತ್ಯೆ ಮಾಡಲಾಗಿತ್ತು. ಇದಷ್ಟೇ ಅಲ್ಲದೇ ಮೆರವಣಿಗೆ ವೇಳೆ ಒಂದು ಆಡು ಸಹ ಸಾವನ್ನಪ್ಪಿತ್ತು.
ಹಬ್ಬ ಮುಗಿದರೂ ಘರ್ಷಣೆ ಹಾಗೂ ವ್ಯಕ್ತಿಯ ಹತ್ಯೆಯ ಹಿನ್ನೆಲೆಯಲ್ಲಿ ನಗರದಾದ್ಯಂತ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮೆರವಣಿಗೆಗೆ ಅನುಮತಿ ನೀಡದಿರಲು ಪೊಲೀಸ್ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.