ರಾಜ್ಯ

ಯುದ್ಧಪೀಡಿತ ಇಸ್ರೇಲ್ ನಿಂದ ತವರಿಗೆ ಮರಳಿದ 6 ಮಂದಿ ಕನ್ನಡಿಗರು

Manjula VN

ಬೆಂಗಳೂರು: ಯುದ್ಧಪೀಡಿತ ಇಸ್ರೇಲ್‌ನಲ್ಲಿ ಸಿಲುಕಿದ್ದ ರಾಜ್ಯದ 6 ಮಂದಿ ಕನ್ನಡಿಗರು ಕೊನೆಗೂ ಸುರಕ್ಷಿತವಾಗಿ ತವರಿಗೆ ಮರಳಿದ್ದಾರೆ.

ಪಿಎಚ್‌ಡಿ ಮಾಡುತ್ತಿದ್ದ ಸಿಂದಗಿ ತಾಲೂಕಿನ ಚಂದಕವಟೆ ಗ್ರಾಮದ ನಿವಾಸಿ ಈರಣ್ಣ ಉಡಚಣ ಹಾಗೂ ವಿಜಯಪುರದ ಕೃಷಿ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಸುಮೇಶ ಗೋವಿಂದ್ ಇಸ್ರೇಲ್‌ನಿಂದ ವಾಪಸ್ಸಾಗಿದ್ದಾರೆ.

ತಮ್ಮ ಅನುಭವವನ್ನು ಹಂಚಿಕೊಂಡ ಡಾ.ಸುಮೇಶ್ ಅವರು, ಯುದ್ಧ ಪ್ರಾರಂಭವಾದ ನಂತರ ಆರಂಭದಲ್ಲಿ ಭೀತಿ ಹರಡಿತು. ನಮಗೂ ಆತಂಕ ಶುರುವಾಗಿತ್ತು. ಆದರೆ, ನಾನು ತರಬೇತಿಗಾಗಿ ಉಳಿದುಕೊಂಡಿದ್ದ ಜೆರುಸಲೆಮ್‌ನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸರ್ಕಾರ ನಮಗೆ ಎಲ್ಲಾ ಬೆಂಬಲವನ್ನು ನೀಡಿತ್ತು ಎಂದು ಹೇಳಿದ್ದಾರೆ.

ಯುದ್ಧಪೀಡಿತ ಪ್ರದೇಶದಿಂದ ಬಹಳ ದೂರದಲ್ಲಿ ನಾವಿದ್ದೆವು. ಹೀಗಾಗಿ ಅಲ್ಲಿನ ಪರಿಸ್ಥಿತಿ ಸಾಮಾನ್ಯವಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ಜನರು ಹಿಂದಿರುವಿಕೆಯನ್ನು ಮೇಲ್ವಿಚಾರಣೆ ಮಾಡುತ್ತಿರುವ ಕಾಂಗ್ರೆಸ್ ನಾಯಕ ಟಿ.ಬಿ. ಜಯಚಂದ್ರ ಅವರು ಮಾತನಾಡಿ, ತವರಿಗೆ ಮರಳಿದ ಬಳಿಕ ಎಲ್ಲರೂ ನಿಟ್ಟಿಸಿರು ಬಿಟ್ಟಿದ್ದಾರೆ. ಎರಡನೇ ಬ್ಯಾಚ್ ನಲ್ಲಿ ಭಾರತೀಯರನ್ನು ಮತ್ತೊಂದು ವಿಮಾನ ಆಗಮಿಸುತ್ತಿದ್ದು, ಆ ವಿಮಾನದ ಆಗಮನಕ್ಕಾಗಿ ಕಾಯಲಾಗುತ್ತಿದೆ. ಆ ವಿಮಾನದಲ್ಲಿಯೂ ರಾಜ್ಯಕ್ಕೆ ಸೇರಿದವರು ಇರುತ್ತಾರೆಂದು ಹೇಳಿದ್ದಾರೆ.

ಇಸ್ರೇಲ್‌ನಲ್ಲಿ ಸುಮಾರು 4,000 ರಿಂದ 5,000 ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಕೇಂದ್ರ ಸರ್ಕಾರವು ಆಪರೇಷನ್ ಅಜಯ್ ಅನ್ನು ಪ್ರಾರಂಭಿಸಿತ್ತು. ಮೊದಲ ವಿಮಾನವು 212 ಭಾರತೀಯರನ್ನು ಹೊತ್ತು ಸುರಕ್ಷಿತವಾಗಿ ತವರಿಗೆ ಮರಳಿದೆ.

SCROLL FOR NEXT