ರಾಜ್ಯ

ಉಡುಪಿ: ನಾಪತ್ತೆಯಾಗಿದ್ದ ಕಾರ್ಕಳ ಪೊಲೀಸ್ ಠಾಣೆಯ ಹೆಡ್‌ ಕಾನ್‌ಸ್ಟೆಬಲ್ ಶವವಾಗಿ ಪತ್ತೆ

Ramyashree GN

ಉಡುಪಿ: ಕಾರ್ಕಳ ನಗರ ಪೊಲೀಸ್ ಠಾಣೆಯಿಂದ ನಾಪತ್ತೆಯಾಗಿದ್ದ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ. 

ಕಾರ್ಕಳದ ಲಕ್ಷ್ಮೀದೇವಿ ಕಲ್ಯಾಣ ಮಂಟಪದ ಬಳಿ ಶೃತಿನ್ ಶೆಟ್ಟಿ (35) ಅವರ ಮೃತದೇಹ ಪತ್ತೆಯಾಗಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ, ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.

ಕಾಪು ಜನಾರ್ದನ ದೇವಸ್ಥಾನದ ಬಳಿಯ ಅಂಗಡಿಮನೆ ನಿವಾಸಿಯಾದ ಶೃತಿನ್ ಅವರು ಅಕ್ಟೋಬರ್ 19 ರಂದು ನಾಪತ್ತೆಯಾಗಿದ್ದರು. ಮರುದಿನ ಅವರ ಪತ್ನಿ ಪಡುಬಿದ್ರಿ ಪೊಲೀಸರಿಗೆ ದೂರು ನೀಡಿದ್ದಾರೆ. ಶೃತಿನ್ ಅವರು ಮನೆಗೆ ಬರುವುದಾಗಿ ತಿಳಿಸಲು ತನಗೆ ಕರೆ ಮಾಡಿದ್ದರು. ಆದರೆ, ಅವರು ಮನೆಗೆ ಬಂದಿಲ್ಲ. ಕರ್ತವ್ಯಕ್ಕೂ ತೆರಳಿಲ್ಲ. ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು ಎಂದು ಪತ್ನಿ ತಿಳಿಸಿದ್ದಾರೆ. 

ಇದರ ಬೆನ್ನಲ್ಲೇ ಪೊಲೀಸರು ಶ್ರತಿನ್ ಅವರ ಪತ್ತೆಗೆ ತನಿಖೆ ಆರಂಭಿಸಿದ್ದರು.

ಶ್ರುತಿನ್ ಅಕ್ಟೋಬರ್ 18 ರಂದು ವಾರದ ರಜೆ ತೆಗೆದುಕೊಂಡು ಅಕ್ಟೋಬರ್ 19 ರಂದು ಸಿಎಲ್ ಪಡೆದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಅವರು 2008ರ ಬ್ಯಾಚ್‌ನಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದರು ಮತ್ತು ಎರಡು ತಿಂಗಳ ಹಿಂದೆ ಕಾರ್ಕಳ ಟೌನ್ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಆಗಿ ಬಡ್ತಿ ಪಡೆದಿದ್ದರು.

ನಾಪತ್ತೆಯಾದ ಬಳಿಕ ಮಣಿಪಾಲದ ಎಟಿಎಂನಿಂದ ಹಣ ಡ್ರಾ ಮಾಡಿದ್ದಾರೆ ಎನ್ನಲಾಗಿದೆ.

SCROLL FOR NEXT