ರಾಜ್ಯ

ವೈಟ್'ಫೀಲ್ಡ್ ಒಂದು ಬಡಾವಣೆಯಲ್ಲಿದೆ 40 ಅನಧಿಕೃತ ಕಟ್ಟಡಗಳು: ಕ್ರಮಕ್ಕೆ ಬಿಬಿಎಂಪಿ ಮುಂದು

Manjula VN

ಬೆಂಗಳೂರು: ವೈಟ್‌ಫೀಲ್ಡ್‌ನಲ್ಲಿ ಅನಧಿಕೃತ ಕಟ್ಟಡಗಳ ಪತ್ತೆ ಕಾರ್ಯಾಚರಣೆ ಮುಂದುವರೆದಿದ್ದು, ನಗರ ಯೋಜನಾ ಜಂಟಿ ನಿರ್ದೇಶಕ (ಜೆಡಿಟಿಪಿ) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎಂಜಿನಿಯರ್‌ಗಳು ಒಂದೇ ಬಡಾವಣೆಯಲ್ಲಿ 40 ಅಕ್ರಮ ಕಟ್ಟಡಗಳ ಗುರ್ತಿಸಿ, 27 ಕಟ್ಟಡಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಇನ್ನುಳಿದ 13 ಕಟ್ಟಡಗಳಿಗೆ ಶೀಘ್ರದಲ್ಲೇ ನೋಟಿಸ್ ಜಾರಿ ಮಾಡಲಿದ್ದು, ನಿಯಮಾನುಸಾರ 102 ದಿನಗಳಲ್ಲಿ ಕಟ್ಟಡಗಳನ್ನು ತೆರವುಗೊಳಿಸಲುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ನಾಗರಿಕ ಕಾರ್ಯಕರ್ತ ಸಂದೀಪ್ ಅನಿರುಧನ್ ಅವರ ಮಾತನಾಡಿ, ವೈಟ್‌ರೋಸ್ ಲೇಔಟ್‌ನಲ್ಲಿರುವ ಈ ಕಟ್ಟಡಗಳನ್ನು ಹೊರ ರಾಜ್ಯದ ನಿವಾಸಿಗಳು ನಿರ್ಮಿಸಿದ್ದಾರೆ. ಅವರ ಗುರಿ ಕೇವಲ ಲಾಭ ಗಳಿಸುವುದು ಮಾತ್ರವೇ ಆಗಿದೆ. ಈ ಕಟ್ಟಡಗಳಿಗೆ ನಾಗರಿಕ ಸಂಸ್ಥೆಗಳಿಂದ ಅಗತ್ಯ ಅನುಮತಿಗಳನ್ನು ಪಡೆದಿರುವುದಿಲ್ಲ. ಎರಡು ಅಂತಸ್ತುಗಳಿರಬೇಕಾದ ಅನೇಕ ಕಟ್ಟಡಗಳು ಕನಿಷ್ಠ ಆರು ಮಹಡಿಗಳನ್ನು ಹೊಂದಿವೆ ಎಂದು ಹೇಳಿದ್ದಾರೆ.

ಸರಿಯಾದ ರಸ್ತೆಗಳಿಲ್ಲ, ಚರಂಡಿಗಳಿಲ್ಲ, ಭೂಗತ ಸಂಪರ್ಕಗಳಿಲ್ಲ ಮತ್ತು ನೀರು ಸರಬರಾಜಿಗೆ ಮಾರ್ಗಗಳಿಲ್ಲ. ಅಧಿಕಾರಿಗಳು ಅಂತಹ ಮಾಲೀಕರು ಮತ್ತು ಬಿಲ್ಡರ್‌ಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬೇಕು, ಇಂತಹ ಉಲ್ಲಂಘನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಇಲ್ಲಿನ ರಸ್ತೆಗಳಲ್ಲಿ ಕೊಳಚೆ ನೀರು ಹರಿದು ಬರುತ್ತಿದ್ದು, ಇದು ನೆರೆಹೊರೆಯ ಎಲ್ಲಾ ಪ್ರದೇಶಗಳಲ್ಲಿರುವ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಂತರ್ಜಲವನ್ನೂ ಕಲುಷಿತಗೊಳಿಸುತ್ತಿದೆ ಎಂದು ಅನಿರುಧನ್ ಹೇಳಿದ್ದಾರೆ.

ಈ ನಡುವೆ ಅಧಿಕಾರಿಗಳು ಹೈಕೋರ್ಟ್ ಆದೇಶದಂತೆ ಕ್ರಮ ಕೈಗೊಳ್ಳಬೇಕೆಂದು ಮಹದೇವಪುರ ವಲಯದ ಜಂಟಿ ಆಯುಕ್ತೆ ಡಾ.ದಾಕ್ಷಾಯಿಣಿ ಕೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅಕ್ರಮ ಕಟ್ಟಡಗಳ ನಿರ್ಮಾಣ ತಡೆಯಲು ಕ್ರಮಕೈಗೊಳ್ಳುವಂತೆ ಜೆಡಿಟಿಪಿ ಮತ್ತು ಬಿಬಿಎಂಪಿ ಮಾರ್ಷಲ್‌ಗಳಿಗೆ ಸೂಚನೆ ನೀಡಿದ್ದೇನೆ. ಮಾರತ್ತಹಳ್ಳಿ ಮತ್ತು ಸುತ್ತಮುತ್ತಲಿನ ಕೆಲವು ಮಾಲೀಕರ ದುರಾಸೆ ಮತ್ತು ಹೆಚ್ಚಿನ ಬಾಡಿಗೆ ಹಣದ ಆಸೆಗೆ ನಿಯಮಗಳ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಸ್ಪಷ್ಟ ಸೂಚನೆ ನೀಡಿದ್ದು, ಅಂತಹ ಕಟ್ಟಡಗಳನ್ನು ಗುರುತಿಸಿ ನೆಲಸಮಮಾಡಲು ಹೈಕೋರ್ಟ್ ನಿರ್ದೇಶನವನ್ನು ಪಾಲಿಸುವಂತೆ ಸೂಚಿಸಿದ್ದಾರೆ ಎಂದು ದಾಕ್ಷಾಯಿಣಿ ಅವರು ಹೇಳಿದ್ದಾರೆ.

SCROLL FOR NEXT