ರಾಜ್ಯ

'ಸರಿ, ನಾವೆಲ್ಲಾ ಕಳ್ಳರೇ ಒಪ್ಕೊತೀನಿ: ಕುಮಾರಸ್ವಾಮಿಯವರೇ, ನೀವು ಸತ್ಯ ಹರಿಶ್ಚಂದ್ರ, ಏನೂ ತಿಂದಿಲ್ಲ ಅಂತಾ ಆಣೆ ಮಾಡಿ'

Shilpa D

ರಾಮನಗರ: ಸರಿ ನಾವೆಲ್ಲಾ ಕಳ್ಳರೇ.. ಒಪ್ಕೊತೀವಿ. ನಾವೆಲ್ಲಾ ತಿಂದಿದ್ದೀವಿ.. ಹಾಗಾದರೆ ನೀವು ಸತ್ಯ ಹರಿಶ್ಚಂದ್ರ. ಏನೂ ತಿಂದಿಲ್ಲ ಅಂತ ಬಂದು ಆಣೆ ಮಾಡಿ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ.

ಸರ್ಕಾರಿ ನೌಕರರ ವರ್ಗಾವಣೆ, ನೇಮಕಾತಿಯಲ್ಲಿ ಹಣ ಪಡೆದಿಲ್ಲ ಎಂದು ಧರ್ಮಸ್ಥಳ ಅಥವಾ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ಸಿದ್ಧ ಎಂಬ ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಸವಾಲಿಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ಏಯ್, ಥೂ.. ಅವರ ಬಾಲಿಶ ಹೇಳಿಕೆಗೆ ಉತ್ತರ ಕೊಡಲ್ಲ ನಡಿಯಪ್ಪಾ ಎನ್ನುತ್ತಲೇ ಮಾತಿಗಿಳಿದರು.

ನೀವು ಬಂದು ಆಣೆ ಮಾಡಿ ಅಂದ್ರೆ, ಅವರನ್ನು ಕರೆಯಿರಿ, ಇವರನ್ನ ಕರೆಯಿರಿ ಅನ್ನೊದಲ್ಲ. ನೀವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಯಿರಿ ಅಂದರೆ ಆಗುತ್ತದೆಯೇ? ನಾನು ಹೇಳಿರೋದು ನಿಮ್ಮ ಕುಟುಂಬದವರು ತಿಂದಿಲ್ವಾ ಅಂತಾ. ಅವರ ತಂದೆ ಎಚ್.ಡಿ. ದೇವೇಗೌಡ ಅವರನ್ನ ಕರೆಸಿ ಆಣೆ ಮಾಡಿಸ್ತಾರಾ ಕೇಳ್ರಿ ಎಂದು ಪ್ರಶ್ನಿಸಿದರು.

ಒಬ್ಬ ಮಾಜಿ ಮುಖ್ಯಮಂತ್ರಿ ಈ ರೀತಿ ಚಿಲ್ಲರೆಯಾಗಿ ಮಾತನಾಡಬಾರದು ಎಂದು ತಿರುಗೇಟು ನೀಡಿದರು. ಎರಡು ಸಲ‌ ಸಿ.ಎಂ ಆಗಿರುವ ಅವರು ತೂಕವಾಗಿ ಮತ್ತು ಸಮಯೋಚಿತವಾಗಿ ಮಾತನಾಡಬೇಕು ಎಂದರು. ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿದರೆ ಏನಾಗುತ್ತದೆ? ಉಪವಾಸ ಮಾಡೋದು, ಬಿಡೋದು ಅವರಿಗೆ ಬಿಟ್ಟಿದ್ದು. ಸುಮ್ಮನೆ ಏನೇನೋ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.

SCROLL FOR NEXT