ರಾಜ್ಯ

ಬೇಡಿಕೆಗಳ ಈಡೇರಿಕೆಗೆ ಬಿಸಿಯೂಟ ನೌಕರರ ಅನಿರ್ದಿಷ್ಟಾವಧಿ ಧರಣಿ: ಹಲವು ಜಿಲ್ಲೆಗಳಲ್ಲಿ ಹಸಿವಿನಿಂದ ಕುಳಿತ ಮಕ್ಕಳು!

Sumana Upadhyaya

ಬೆಂಗಳೂರು: ಕಳೆದ ವರ್ಷ ಡಿಸೆಂಬರ್ ನಿಂದ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿಕೊಂಡು ಪ್ರತಿಭಟನೆ ನಡೆಸಿದರೂ ಸಹ ಮಧ್ಯಾಹ್ನದ ಬಿಸಿಯೂಟ ಕಾರ್ಮಿಕರ ಇನ್ನೂ ದೀರ್ಘಾವಧಿಯ ಬೇಡಿಕೆಗಳನ್ನು ಸರ್ಕಾರ ಈಡೇರಿಸಿಲ್ಲ. 

ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯಲು ಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರವನ್ನು ಘೋಷಿಸಿದ್ದಾರೆ. ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (CIT) ಆಶ್ರಯದಲ್ಲಿ ನಿನ್ನೆ ಸೋಮವಾರ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಂಡಿದ್ದಾರೆ. ಪ್ರತಿಭಟನೆಯಿಂದಾಗಿ ಕೊಪ್ಪಳ ಮತ್ತು ಕೋಲಾರ ಜಿಲ್ಲೆಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಪೂರೈಕೆಗೆ ತೊಂದರೆಯಾಗಿದೆ.

ಸುಮಾರು 1,19,000 ಬಿಸಿಯೂಟ ತಯಾರಿಕೆ ಕಾರ್ಮಿಕರು 55,80,000 ವಿದ್ಯಾರ್ಥಿಗಳಿಗೆ ನಿಯಮಿತವಾಗಿ ಸೇವೆ ಸಲ್ಲಿಸುತ್ತಾರೆ. ಜಿಲ್ಲಾವಾರು ಮುಷ್ಕರವನ್ನು ಆಯೋಜಿಸಿದ್ದು, ಕೊಪ್ಪಳ ಮತ್ತು ಕೋಲಾರದಿಂದ 450 ಕ್ಕೂ ಹೆಚ್ಚು ಕಾರ್ಮಿಕರು ನಗರದಲ್ಲಿ ತಮ್ಮ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಜಿಲ್ಲೆಗಳ ಶಾಲೆಗಳಲ್ಲಿ ಮಧ್ಯಾಹ್ನದ ಊಟವನ್ನು ನೀಡಲಾಗಿಲ್ಲ. ಬಾಗಲಕೋಟೆಯ ಕಾರ್ಮಿಕರು ಪ್ರತಿಭಟನೆ ನಡೆಸಲಿದ್ದು, ಜಿಲ್ಲೆಯ ಶಾಲೆಗಳಲ್ಲಿ ನಿನ್ನೆ ಮಕ್ಕಳಿಗೆ ಊಟ ವಿತರಣೆಯಾಗಿಲ್ಲ. 

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆ ಮಾತನಾಡಿದ ಅಕ್ಷರ ದಾಸೋಹ ನೌಕರರ ಸಂಘ ರಾಜ್ಯಾಧ್ಯಕ್ಷೆ ಎಸ್‌.ವರಲಕ್ಷ್ಮಿ, ದೀಪಾವಳಿಯವರೆಗೆ ಪ್ರತಿ ಜಿಲ್ಲೆಯಿಂದ ಕಾರ್ಮಿಕರು ಬಂದು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಸರ್ಕಾರ ಇನ್ನೂ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ಇಡೀ ರಾಜ್ಯದ ಮಧ್ಯಾಹ್ನದ ಊಟದ ಕಾರ್ಮಿಕರು ಹಬ್ಬದ ನಂತರ ತಮ್ಮ ಕೆಲಸವನ್ನು ನಿಲ್ಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಸರ್ಕಾರ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಲು ಕಿರಿಯ ಅಧಿಕಾರಿಗಳನ್ನು ಮಾತ್ರ ಕಳುಹಿಸುತ್ತದೆ. ಒಮ್ಮೆ ಬಂದು ಚರ್ಚೆ ಮಾಡಿ ಹೋಗುತ್ತಾರೆ ಹೊರತು ನಂತರ ಏನೂ ಪ್ರಯೋಜನವಾಗುವುದಿಲ್ಲ. 60 ವರ್ಷ ತುಂಬಿದ ಹುದ್ದೆಯಿಂದ ವಜಾಗೊಂಡವರಿಗೆ 1 ಲಕ್ಷ ರೂಪಾಯಿ ಪಿಂಚಣಿ, ಕೆಲಸದ ಸ್ಥಳದಲ್ಲಿ ಮರಣ ಹೊಂದಿದಲ್ಲಿ 25 ಲಕ್ಷ ರೂಪಾಯಿ ಪರಿಹಾರ ಮತ್ತು ಹೊಸ ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ವೇತನ ಹೆಚ್ಚಳವನ್ನು ಜನವರಿಯಿಂದ ಜಾರಿಗೊಳಿಸಬೇಕು ಎಂಬುದು ನಮ್ಮ ಬೇಡಿಕೆಗಳಾಗಿವೆ ಎಂದರು.

ಯೋಜನೆ ಸ್ಥಾಪನೆಯಾಗುವವರೆಗೆ 45 ಮತ್ತು 46 ನೇ ಭಾರತೀಯ ಕಾರ್ಮಿಕ ಕಾನೂನುಗಳ ಅಡಿಯಲ್ಲಿ ಸರ್ಕಾರವು ಕಾರ್ಮಿಕರನ್ನು ಗುರುತಿಸಬೇಕು ಮತ್ತು ಶಾಲೆಗಳಲ್ಲಿ ಅಡುಗೆಯವರನ್ನು ಗ್ರೂಪ್ ಡಿ ಕಾರ್ಮಿಕರಾಗಿ ನೇಮಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

SCROLL FOR NEXT