ರಾಜ್ಯ

ಪಿಎಸ್‌ಐ ಪರೀಕ್ಷೆ ಹಗರಣ 2-3 ವಾರಗಳಲ್ಲಿ ಅಂತಿಮ ಘಟ್ಟ ತಲುಪಲಿದೆ: ಸರ್ಕಾರ

Manjula VN

ಬೆಂಗಳೂರು: ಆಕಾಂಕ್ಷಿಗಳ ಹಿತಾಸಕ್ತಿ ಕಾಪಾಡಲು ಸರ್ಕಾರ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದು, ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಪರೀಕ್ಷೆ ಹಗರಣ 2-3 ವಾರಗಳಲ್ಲಿ ಅಂತಿಮ ಘಟ್ಟ ತಲುಪಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೋಮವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು. ಬಿಜೆಪಿ ಅಧಿಕಾರದಲ್ಲಿದ್ದಾಗ ಆ ಪರೀಕ್ಷೆಗಳನ್ನು ಹೇಗೆ ನಡೆಸಿತು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ನೇಮಕಾತಿ ಪರೀಕ್ಷೆಗಳ ಬಗ್ಗೆ ಬಿಜೆಪಿ ಉಪದೇಶ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

“ಬಿಜೆಪಿ ಅಧಿಕಾರದಲ್ಲಿದ್ದಾಗ, ಪಿಎಸ್ಐ ನೇಮಕಾತಿ ಹಗರಣವನ್ನು ಸರಿಯಾಗಿ ತನಿಖೆ ಮಾಡಿದರೆ ನನ್ನನ್ನು ತಪ್ಪಿತಸ್ಥ ಎಂದು ಕಂಡುಹಿಡಿಯಬಹುದು ಎಂದು ಹೇಳಿಕೆಗಳನ್ನು ನೀಡಿದ್ದರು. ಹಾಗಾದರೆ, ಅವರು ಪ್ರಕರಣದ ತನಿಖೆ ನಡೆಸಿ, ನನ್ನ ಕೈವಾಡವನ್ನೇಕೆ ಬಹಿರಂಗಪಡಿಸಲಿಲ್ಲ? ಎದು ಪ್ರಶ್ನಿಸಿದರು.

ಈ ಪ್ರಕರಣವನ್ನು ಸಿಬಿಐ ಅಥವಾ ಯಾವುದೇ ಕೇಂದ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಲು ಅವರಿಗೆ ಎಲ್ವಾ ಸ್ವಾತಂತ್ರ್ಯವಿತ್ತು, ಆದರೆ, ಅವರು ಅದನ್ನು ಏಕೆ ಮಾಡಲಿಲ್ಲ? ಎಂದು ಕೇಳಿದರು.

ಈ ನಡುವೆ ಖರ್ಗೆಯವರ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಅವರು, ಎಫ್'ಡಿಎ ಹಗರಣದ ಪ್ರಮುಖ ಆರೋಪಿ ಆರ್'ಡಿ.ಪಾಟೀಲ್ ಅವರನ್ನು ಬಂಧಿಸಲು ಸರ್ಕಾರ ಕ್ರಮವನ್ನೇಕೆ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಸುಮಾರು 20 ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಹೆಚ್ಚುವರಿ ಸಮಯ ಸಿಕ್ಕಿದ್ದು, ಉನ್ನತ ಅಧಿಕಾರಿಗಳ ಕೈವಾಡವಿಲ್ಲದೆ ಇದು ಸಾಧ್ಯವಾಗುವುದಿಲ್ಲ. ಹಗರಣದ ವಿರುದ್ಧ ಯಾದಗಿರಿ ಮತ್ತು ಕಲಬುರಗಿ ಬಿಜೆಪಿ ಕಾರ್ಯಕರ್ತರು ಒಂದೆರೆಡು ದಿನದಲ್ಲಿ ಪ್ರತಿಭಟನೆ ನಡೆಸಲಿದ್ದಾರೆಂದು ಹೇಳಿದರು.

SCROLL FOR NEXT