ರಾಜ್ಯ

ಮೈಸೂರು ದಸರಾ 2023ಕ್ಕೆ ಮುನ್ನುಡಿ: ನಾಗರಹೊಳೆಯಿಂದ ದಸರಾ ಗಜಪಯಣಕ್ಕೆ ಚಾಲನೆ

Sumana Upadhyaya

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ(Mysuru Dasara 2023) ಆರಂಭಕ್ಕೆ ಇನ್ನು ಒಂದೂವರೆ ತಿಂಗಳು ಬಾಕಿ ಇದೆಯಷ್ಟೆ. ದಸರಾದ ಮುಖ್ಯವಾದ ಗಜಪಯಣಕ್ಕೆ ಇಂದು ಶುಕ್ರವಾರ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯ ನಾಗರಹೊಳೆ ಹೆಬ್ಬಾಗಿಲಿನಲ್ಲಿ ಚಾಲನೆ ನೀಡಲಾಗಿದೆ.

ಇಂದು ಶುಕ್ರವಾರ ಬೆಳಗ್ಗೆ 9.45ರಿಂದ 10.15ರ ತುಲಾ ಲಗ್ನದಲ್ಲಿ ಮೈಸೂರು ದಸರಾ-2023ರ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಗಜಪಯಣಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ಈ ಮೂಲಕ ವಿಶ್ವ ವಿಖ್ಯಾತ ಮೈಸೂರು ದಸರಾ-2023ಕ್ಕೆ ನಾಂದಿ ಹಾಡಲಾಗಿದೆ.

ಇಂದು ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮಹಾದೇವಪ್ಪ ಸೇರಿದಂತೆ ಗಣ್ಯರು, ಅಧಿಕಾರಿಗಳು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಹೆಬ್ಬಾಗಿಲು ವೀರನಹೊಸಳ್ಳಿಯ ಬಳಿ ಅಭಿಮನ್ಯು ನೇತೃತ್ವದ 9 ಗಜಪಡೆಗಳಾದ ಮಹೇಂದ್ರ, ಅರ್ಜುನ, ವರಲಕ್ಷ್ಮಿ, ಧನಂಜಯ, ಗೋಪಿ, ವಿಜಯ, ಪಾರ್ಥಸಾರಥಿ, ರೋಹಿತ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು.

ನಾಡಿದ್ದು ಸೆಪ್ಟೆಂಬರ್ 4ರವರೆಗೆ ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಲಿರುವ ಗಜಪಡೆಯನ್ನು ನಂತರ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅರಮನೆಗೆ ಸ್ವಾಗತಿಸಲಾಗುವುದು. 

ಕಲಾತಂಡಗಳಿಂದ ಸ್ವಾಗತ: ಇಂದು ನಾಗರಹೊಳೆಯ ಹೆಬ್ಬಾಗಿಲಿನಲ್ಲಿ ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ, ಪೂಜಾಕುಣಿತ, ಆದಿವಾಸಿ ಮಕ್ಕಳ ನೃತ್ಯ ಸೇರಿದಂತೆ ಹತ್ತಕ್ಕೂ ಹೆಚ್ಚಿನ ಕಲಾತಂಡಗಳು ಗಜಪಡೆಯ ಮುಂಭಾಗದಲ್ಲಿ ಪ್ರದರ್ಶನ ನೀಡಿದವು. 

ಅಭಿಮನ್ಯು ನೇತೃತ್ವದ 9 ಗಜಪಡೆ: ಗಜಪಯಣದ ಮೊದಲ ತಂಡದಲ್ಲಿ ಈ ಬಾರಿ ಅಂಬಾರಿ ಹೊರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳು ಆಗಮಿಸಲಿವೆ. ಇದರಲ್ಲಿ ಎರಡು ಹೆಣ್ಣಾನೆಗಳಿವೆ. ಅವುಗಳಲ್ಲಿ ಮತ್ತಿಗೋಡು ಆನೆ ಶಿಬಿರದಿಂದ ಕ್ಯಾಪ್ಟನ್ ಅಭಿಮನ್ಯು, ಮಹೇಂದ್ರ, ಬಳ್ಳೆ ಆನೆ ಶಿಬಿರದಿಂದ ಅರ್ಜುನ, ಭೀಮನಕಟ್ಟೆ ಆನೆ ಶಿಬಿರದಿಂದ ವರಲಕ್ಷ್ಮಿ, ದುಬಾರೆ ಆನೆ ಶಿಬಿರದಿಂದ ಧನಂಜಯ, ಗೋಪಿ ಹಾಗೂ ಹೆಣ್ಣಾನೆ ವಿಜಯಾ, ರಾಂಪುರ ಆನೆ ಶಿಬಿರದಿಂದ ಪಾರ್ಥಸಾರಥಿ, ರೋಹಿತ್, ಹಿರಣ್ಯಾ ಮೊದಲ ಹಂತದ ಗಜಪಯಣದಲ್ಲಿ ಭಾಗವಹಿಸಲಿವೆ.

ಗಜಪಯಣಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವ ಡಾ.ಎಚ್.ಸಿ.ಮಹದೇವಪ್ಪ, 'ಗಜಪಯಣಕ್ಕೆ ವಿಜೃಂಭಣೆಯಿಂದ ಚಾಲನೆ ನೀಡಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಎಲ್ಲರ ನೇತೃತ್ವದಲ್ಲಿ ಆನೆಗಳನ್ನು ಮೈಸೂರಿಗೆ ಕರೆತರಲಾಗುವುದು. ದಸರಾ ಯಶಸ್ವಿಯಾಗಲಿ' ಎಂದು ಶುಭ ಹಾರೈಸಿದರು.

SCROLL FOR NEXT