ರಾಜ್ಯ

ಹಣದ ಕೊರತೆ: ಹೊಸ ಜಿಲ್ಲೆ, ತಾಲ್ಲೂಕುಗಳ ರಚನೆಗೆ ಸರ್ಕಾರ ಮುಂದಾಗಿಲ್ಲ- ಸಿಎಂ ಸಿದ್ದರಾಮಯ್ಯ 

Nagaraja AB

ಮಧುಗಿರಿ: ತುಮಕೂರು ಜಿಲ್ಲೆಯ ಮಧುಗಿರಿ ಉಪವಿಭಾಗಕ್ಕೆ ಪ್ರತ್ಯೇಕ ಜಿಲ್ಲಾ ಸ್ಥಾನಮಾನ ನೀಡಬೇಕೆಂಬ ಬಹುಕಾಲದ ಬೇಡಿಕೆಗೆ ಸಿಎಂ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ. ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ‘ಕ್ಷೀರಭಾಗ್ಯ’ ಯೋಜನೆಯ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಈ ಹಿಂದೆ ರಚನೆಯಾದ ತಾಲ್ಲೂಕುಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹಣದ ಅಗತ್ಯವಿದ್ದು, ಹೊಸ ಜಿಲ್ಲೆಗಳು ಅಥವಾ ತಾಲ್ಲೂಕುಗಳ ರಚನೆಗೆ ಸರ್ಕಾರ ಮುಂದಾಗದಿರುವುದಕ್ಕೆ ಹಣದ ಕೊರತೆಯೇ ಕಾರಣ ಎಂದರು.

ಮಧುಗಿರಿ ವಿಧಾನಸಭಾ ಕ್ಷೇತ್ರವನ್ನು ಮೂರು ಅವಧಿಗೆ ಪ್ರತಿನಿಧಿಸಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಹಾಲಿ ಶಾಸಕ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ,  ಮಧುಗಿರಿ, ಸಿರಾ, ಪಾವಗಡ, ಕೊರಟಗೆರೆ ಉಪವಿಭಾಗವನ್ನು ಮಧುಗಿರಿ ಕೇಂದ್ರ ಕಚೇರಿಯನ್ನಾಗಿಸಿ ನೂತನ ಜಿಲ್ಲೆಯನ್ನು ಮಾಡಬೇಕೆಂದು ಒತ್ತಾಯಿಸಿದರು. 

ಒಂದು ವೇಳೆ ಮಧುಗಿರಿಯನ್ನು ಹೊಸ ಜಿಲ್ಲೆಯಾಗಿ ಘೋಷಿಸಬೇಕಾದರೆ ಕೆ.ಷಡಕ್ಷರಿ ಸೇರಿದಂತೆ ಜಿಲ್ಲೆಯ ಇತರ ಶಾಸಕರ ವಿರೋಧವಿದ್ದು, ತಿಪಟೂರು ಕೂಡ ಹೊಸ ಜಿಲ್ಲೆ ಘೋಷಣೆ ಮಾಡುವಂತೆ ಒತ್ತಾಯಿಸಬಹುದು ಎಂದರು. ಇದಕ್ಕೆ ಉತ್ತರಿಸಿದ ರಾಜಣ್ಣ, ತುರುವೇಕೆರೆ ಹಾಗೂ ಇತರ ಅಕ್ಕಪಕ್ಕದ ತಾಲೂಕುಗಳನ್ನು ಸೇರಿಸಿ ತಿಪಟೂರು ಕೂಡ ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ ಮಾಡಬಹುದು ಎಂದರು. ಆದರೆ ಸಿದ್ದರಾಮಯ್ಯ ಈ ತರ್ಕವನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ.

ಇದೇ ವೇಳೆ ಮಧುಗಿರಿಯಲ್ಲಿ ಏಷ್ಯಾದ ಅತಿ ದೊಡ್ಡ ಏಕಶಿಲಾ ಬಂಡೆಯ ಮೇಲೆ ರೋಪ್ ವೇ ಅಥವಾ ಕೇಬಲ್ ಕಾರ್ ಯೋಜನೆ ಬೇಡಿಕೆಗೆ ಸಮ್ಮತಿಸಿದ ಸಿಎಂ,  ಸರ್ಕಾರ ಯೋಜನೆಯನ್ನು ಜಾರಿಗೊಳಿಸಲಿದೆ ಎಂದು ಭರವಸೆ ನೀಡಿದರು. ಕನ್ನಡ ಭವನ ಉದ್ಘಾಟನೆ ಹಾಗೂ 150 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಮೂರು ತಿಂಗಳ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಇಷ್ಟು ಮೊತ್ತದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿಲ್ಲ. ಇದು ದಾಖಲೆ ಎಂದರು. 

SCROLL FOR NEXT