ರಾಜ್ಯ

ಅನಂತಕುಮಾರ್ ಇದ್ದಿದ್ದರೆ ಕಾವೇರಿ ವಿವಾದ ಆಗುತ್ತಿರಲಿಲ್ಲ- ಡಿಕೆ ಶಿವಕುಮಾರ್; ಅವರಿಲ್ಲದೆ ತಬ್ಬಲಿಯಾಗಿದ್ದೇವೆ- ಬಿಎಸ್ ವೈ

Srinivas Rao BV

ಬೆಂಗಳೂರು: "ಅನಂತಕುಮಾರ್ ಅವರು ಇದ್ದಿದ್ದರೇ ಯಾವುದೇ ಕಾರಣಕ್ಕೂ ಕಾವೇರಿ ವಿವಾದ ಇಷ್ಟರಮಟ್ಟಿಗೆ ಹೋಗಲು ಬಿಡುತ್ತಿರಲಿಲ್ಲ. ಅವರು ರಾಜ್ಯದ ಅಭಿವೃದ್ಧಿಗೆ ಪಕ್ಷ ಭೇದ ಮರೆತು ಕಾರ್ಯ ಮಾಡುತ್ತಿದ್ದ "ಅಜಾತಶತ್ರು", ರಾತ್ರಿ ಹಗಲೆನ್ನದೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತಿದ್ದ ವ್ಯಕ್ತಿಯನ್ನು ರಾಜ್ಯ ಕಳೆದುಕೊಂಡಂತೆ ಆಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ನಗರದ ಧೊಂಡುಸಾ ಸಭಾಂಗಣದಲ್ಲಿ ಆಯೋಜಿಸಿದ್ದ ಅನಂತ ನಮನ 64 - ಅನಂತಕುಮಾರ್ ಅವರ 64 ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಹಸಿರು ಭಾನುವಾರ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಬಹಳ ಸಂತೋಷದಿಂದ ಭಾಗಿಯಾಗಿದ್ದನೆ. ನನ್ನ ಆತ್ಮೀಯ ಮಿತ್ರನನ್ನು ಸ್ಮರಿಸುವ ಅವಕಾಶಕ್ಕೆ ದೊರೆತಿದೆ. ದೇವರು ಮತ್ತು ಧರ್ಮದ ಬಗ್ಗೆ ನನಗೆ ಬಹಳ ನಂಬಿಕೆ ಇದೇ. ಆದರೆ ದೇವರು ಅನಂತಕುಮಾರ್ ಅವರ ವಿಷಯದಲ್ಲಿ ಕ್ರೂರಿ ಎನ್ನುವುದು ನನ್ನ ಭಾವನೆ. ಯಾವುದೇ ದುರಭ್ಯಾಸ ಇಲ್ಲದೆ ಇರುವ ಅವರನ್ನು ಇಷ್ಟು ಬೇಗ ಕರೆದು ಕೊಂಡಿದ್ದು ಸರಿಯಲ್ಲ. ಅವಕಾಶ ಇದ್ದಾಗ ಎಲ್ಲರಿಗೂ ಒಳ್ಳೆಯದನ್ನು ಮಾಡುವ ಸ್ವಭಾವ ಅವರದ್ದು. ಅನಂತಕುಮಾರ್ ಅವರ ಜೀವನ ನೋಡಿದರೆ ತಮ್ಮ ಸ್ವಂತಕ್ಕೆ ಏನು ಇಲ್ಲದೆ ಎಲ್ಲವನ್ನೂ ಬೇರೆಯವರಿಗೆ ಮುಡಿಪಾಗಿ ಇಟ್ಟಿದ್ದರೂ ಎಂದು ಹೇಳಿದರು. 

ಚುನಾವಣೆ ಖರ್ಚಿಗೆ ಹಣ ನೀಡಿ ಪ್ರೋತ್ಸಾಹ ನೀಡಿದ್ದರು- ಡಿಕೆ ಶಿವಕುಮಾರ್ 

1985 ರಲ್ಲೀ ನಾನು ಪದವಿ ಶಿಕ್ಷಣದ ಅಂತಿಮ ವರ್ಷದಲ್ಲಿ ಇದ್ದಾಗ ನನಗೆ ವಿಧಾನ ಸಭೆಗೆ ಸ್ಪರ್ಧಿಸುವ ಅವಕಾಶ ದೊರೆಯಿತು. ವಿದ್ಯಾರ್ಥಿ ಹೋರಾಟದ ಮೂಲಕ ಪರಿಚಯವಿದ್ದ ಅನಂತಕುಮಾರ್ ಅವರು ತಮ್ಮ ಸ್ನೇಹಿತರೊಂದಿಗೆ ಸೇರಿಕೊಂಡು ಆ ದಿನಗಳಲ್ಲಿ ದೊಡ್ಡ ಮೊತ್ತವಾದ 5 ಸಾವಿರ ರೂಪಾಯಿಗಳನ್ನು ನೀಡಿ ಪ್ರೋತ್ಸಾಹಿಸಿದ್ದರು ಎಂದು ನೆನಪಿಸಿಕೊಂಡರು.

ಬೆಂಗಳೂರಿಗೆ ಮೆಟ್ರೋ ತಂದಿದ್ದೆ ಅನಂತಕುಮಾರ್:
ಮೊನೊ ರೈಲೋ ಅಥವಾ ಮೆಟ್ರೋ ರಿಲೋ ಎನ್ನುವ ಗೊಂದಲ ಇದ್ದ ಸಂದರ್ಭದಲ್ಲಿ ಆಗಿನ ಕೇಂದ್ರ ನಗರಾಭಿವೃದ್ಧಿ ಸಚಿವರಾಗಿದ್ದ ಅನಂತಕುಮಾರ್ ಅವರು, ರಾಜ್ಯ ನಗರಾಭಿವೃದ್ಧಿ ಸಚಿವನಾಗಿದ್ದ ನನ್ನನ್ನು ಹಾಗೂ ಇನ್ನಿತರ 5 ಜನ ಸಚಿವರು ಮತ್ತು ಅಧಿಕಾರಿಗಳನ್ನು ಹೊರದೇಶಗಳಿಗೆ ಆಧ್ಯಯನ ಮಾಡಲು ಕಳುಹಿಸಿ ಕೊಟ್ಟಿದ್ದರು. ಆ ಅಧ್ಯಯನ ಪ್ರವಾಸದ ನಂತರ ಹಾಗೂ ದೆಹಲಿಯ ಮೆಟ್ರೋ ನೋಡಿ ಕೊನೆಯಲ್ಲಿ ಬೆಂಗಳೂರಿಗೆ ಮೆಟ್ರೋ ರೈಲೇ ಒಳ್ಳೆಯದು ಎಂದು ನಿರ್ಧಾರಕ್ಕೆ ಬರಲಾಯಿತು. ಬೆಂಗಳೂರಿಗೆ ಮೆಟ್ರೋ ತರಲು ನೂರು ಜನರು ತಾವೇ ಕಾರಣ ಎಂದು ಹೇಳಿದರು. ಅದು ತಪ್ಪು ಅದಕ್ಕೆ ಮೂಲ ಕಾರಣ ಅನಂತಕುಮಾರ್ ಕಾರಣ ಎಂದು ಹೇಳಿದರು. 

ರಾತ್ರೋ ರಾತ್ರಿ ಅಫಿಡವಿಟ್ ತಿದ್ದಿಸಿದ್ದ ಅನಂತಕುಮಾರ್:
ರಾಜ್ಯ ನಾಯಕರು ದೆಹಲಿಗೆ ಯಾವುದೇ ಕೆಲಸಕ್ಕೆ ಹೋದರು ತಮ್ಮ ಕಚೇರಿಯಲ್ಲೇ ಸಂಬಂದ ಪಟ್ಟ ಸಚಿವರನ್ನು ಕರೆಯಿಸಿ ಕೆಲಸ ಆಗುವಂತೆ ನಿರ್ವಹಣೆ ಮಾಡುತ್ತಿದ್ದರು. ಇದೇ ರೀತಿ ಕೆಲವು ವರ್ಷಗಳ ಹಿಂದೆ ಕಾವೇರಿ ವಿವಾದ ಆದಾಗ, ಆಗಿನ ಜಲಸಂಪನ್ಮೂಲ ಸಚಿವರಾದ ಉಮಾ ಭಾರತಿ ಅವರು ನ್ಯಾಯಾಲಯಕ್ಕೆ ಸಲ್ಲಿಸಬೇಕಾದ ಅಫಿಡವಿಟ್ ಅನ್ನು ತಿದ್ದಿಸಿ ಸಲ್ಲಿಸುವಂತೆ ಮಾಡಿದ್ದರು. ಈ ಬಾರಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನೆಯಲ್ಲಿ ಕುಳಿತಾಗ ಅನಂತಕುಮಾರ್ ಇದ್ದಿದ್ದರೆ ನಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ನೆನಪಿಸಿಕೊಂಡಿದ್ದನ್ನು ಸ್ಮರಿಸಿದರು. ರಾಜ್ಯದ ಅಭಿವೃದ್ಧಿ ವಿಷಯ ಬಂದಾಗ ಪಕ್ಷ ಭೇದ ಮರೆತು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದರು. ಇಂದು ಅನಂತಕುಮಾರ್ ಇದ್ದಿದ್ದರೆ ನಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮಾತನಾಡಿ, ನನ್ನ ಮತ್ತು ಅನಂತಕುಮಾರ್ ಅವರ ಸ್ನೇಹ ರಾಜಕೀಯ ಮೀರಿದ್ದು. ಜೊತೆಯಲ್ಲಿಯೇ ರಾಜ್ಯ ಸುತ್ತಿ ಪಕ್ಷವನ್ನು ಬೆಳೆಸಿದೆವು. ಇಂದು ನಮ್ಮ ಪಕ್ಷ ಈ ಹಂತಕ್ಕೆ ಬರಲು ಪ್ರಮುಖ ಕಾರಣ ಅನಂತಕುಮಾರ್. ಅವರು ಇನ್ನೂ ಹೆಚ್ಚಿನ ಕಾಲ ಇರಬೇಕಾಗಿತ್ತು. ರಾಜ್ಯಕ್ಕೆ ಹಾಗೂ ಪಕ್ಷಕ್ಕೆ ಅವರ ಮಾರ್ಗದರ್ಶನ ಅಗತ್ಯವಿತ್ತು. ನಾವು ಅವರನ್ನು ಕಳೆದುಕೊಂಡು ತಬ್ಬಲಿಗಳಾಗಿದ್ದೇವೆ. ಅವರು ಇದ್ದಿದ್ದರೆ ರಾಜ್ಯದ ಚಿತ್ರಣವೇ ಬದಲಾಗುತ್ತಿತ್ತು. ತೇಜಸ್ವಿನಿ ಅನಂತ ಕುಮಾರ್ ಅವರು ಅದಮ್ಯ ಚೇತನ ಸಂಸ್ಥೆಯ ಮೂಲಕ ದಿವಂಗತ ಅನಂತಕುಮಾರ್ ಅವರ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ದೇವರು ಕೊಡಲಿ ಎಂದರು. 

ಅದಮ್ಯ ಚೇತನ ಶೂನ್ಯ ತ್ಯಾಜ್ಯ ಅಡುಗೆ ಮನೆಗೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ನೈಸರ್ಗಿಕ ಸಾಬೂನು ಗಳನ್ನೂ ಉದ್ಘಾಟಿಸಿದರು. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅನಂತ ನಮನ ಪುಸ್ತಕ ಲೋಕಾರ್ಪಣೆ ಗೊಳಿಸಿದರು.

SCROLL FOR NEXT