ರಾಜ್ಯ

ಕಾವೇರಿ ಹೋರಾಟ: ಸುತ್ತೂರು ಮಠದ ಶ್ರೀಗಳ ಬೆಂಬಲ

Manjula VN

ಮೈಸೂರು: ಕಾವೇರಿ ನದಿ ನೀರು ವಿವಾದ ಸಂಬಂಧ ರಾಜ್ಯದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಬೆಂಬಲ ವ್ಯಕ್ತಪಡಿಸಿದ್ದು, ನೆರೆ ರಾಜ್ಯ  ತಮಿಳುನಾಡಿಗೆ ನೀರು ಬಿಡುವ ಮೊದಲು ರಾಜ್ಯದ ನೀರಿನ ಅವಶ್ಯಕತೆಗಳನ್ನು ಪೂರೈಸಬೇಕು ಎಂದು ಹೇಳಿದ್ದಾರೆ.

ಕಾವೇರಿ ವಿವಾದ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಶತಮಾನಗಳಿಂದ ಕಾವೇರಿ ನೀರು ಜ್ವಲಂತ ಸಮಸ್ಯೆಯಾಗಿದೆ. ಪ್ರಾರಂಭದ ದಿನಗಳಿಂದಲೂ ತಮಿಳುನಾಡು ತನಗೆ ಅಗತ್ಯವಾದುದಕ್ಕಿಂತ ಹೆಚ್ಚಿನ ನೀರನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಲೇ ಇದೆ. ಕರ್ನಾಟಕದ ಕಾವೇರಿ ನದಿ ಪಾತ್ರದ ರೈತರು ಸಂಕಷ್ಟಕ್ಕೆ ಒಳಗಾಗುತ್ತಲೇ ಇದ್ದಾರೆ. ಮೈಸೂರು-ಬೆಂಗಳೂರು ಹಾಗು ಇತರೆಡೆಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ತಲೆದೋರುತ್ತಿದೆ. ಇದಕ್ಕೆ ಅಂತಿಮ ಪರಿಹಾರ ಯಾವಾಗ ಎಂಬುದೇ ಪ್ರಶ್ನಾರ್ಥಕ ಎಂದು ಹೇಳಿದರು.

ರಾಜ್ಯ ಸರಕಾರ ಎಲ್ಲ ಸಂದರ್ಭಗಳಲ್ಲಿಯೂ ನೆರೆರಾಜ್ಯದ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಲೇ ಬಂದಿದೆ. ತನಗೆ ಎಷ್ಟೇ ತೊಂದರೆಯಾದರೂ ನ್ಯಾಯಾಧಿಕರಣ ಮತ್ತು ನ್ಯಾಯಾಲಯಗಳ ತೀರ್ಪುಗಳನ್ನು ಜನಾಭಿಪ್ರಾಯದ ಕಡು ವಿರೋಧದ ನಡುವೆಯೂ ಗೌರವಿಸಿ ಪಾಲಿಸುತ್ತಿದೆ. ಇದನ್ನು ತಮಿಳುನಾಡಾಗಲಿ ಅಥವಾ ಸಂಬಂಧಪಟ್ಟವರು ಯಾರೇ ಆಗಲೀ ದೌರ್ಬಲ್ಯವೆಂದು ಭಾವಿಸಬಾರದು. ಈ ಸಮಸ್ಯೆಗೆ ಅಂತಿಮ ಪರಿಹಾರದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಮಳೆ ಆಧರಿಸಿ ನೀರಿನ ಸಂಗ್ರಹದ ಆಧಾರದಡಿ ನೀರು ಹಂಚಿಕೆಯ ಬಗ್ಗೆ ಪ್ರತಿವರ್ಷವೂ ಕ್ರಮ ತೆಗೆದುಕೊಳ್ಳಬೇಕಾದುದು ಅಗತ್ಯ. ಪ್ರತಿವರ್ಷ ಆಯಾ ಕಾಲಕ್ಕೆ ಸರಿಯಾಗಿ ಮಳೆಯಾದರೆ ಈ ಸಮಸ್ಯೆ ಉಂಟಾಗುವುದಿಲ್ಲ. ಆದರೆ, ಅನಾವೃಷ್ಟಿಯಾದಾಗಲೆಲ್ಲ ಸಹಜವಾಗಿ ಸಮಸ್ಯೆ ತಲೆದೋರುತ್ತದೆ. ಇದೀಗ ಉಲ್ಬಣಿಸಿರುವ ಸಮಸ್ಯೆಗೆ ಭಾರತ ಸರ್ಕಾರ, ಸರ್ವೋಚ್ಚ ನ್ಯಾಯಾಲಯ ಮತ್ತು ನ್ಯಾಯಾಧಿಕರಣಗಳು ಸಮಾಲೋಚಿಸಿ ಕರ್ನಾಟಕ-ತಮಿಳುನಾಡು ಹೊರತಾದ ಹೊರ ರಾಜ್ಯಗಳ ನೀರಾವರಿ ತಜ್ಞರ ಸಮಿತಿ ರಚಿಸಿ ನೀರಿನ ಸಂಗ್ರಹಣೆಯ ವಾಸ್ತವಾಂಶ ಅಧ್ಯಯನ ಮಾಡಿ ಸಮಸ್ಯೆಗೆ ಪರಿಹಾರ ಸೂಚಿಸುವುದು ಇಂದಿನ ತುರ್ತು ಎಂದು ಹೇಳಿದರು.

ಕರ್ನಾಟಕದ ಜನರ ಕುಡಿಯುವ ನೀರಿಗೆ, ರೈತರ ಬೆಳೆಗಳಿಗೆ ಹಾಗೂ ಜಾನುವಾರುಗಳಿಗೆ ಅಗತ್ಯವಾಗುವ ನೀರನ್ನು ಬಳಸಿಕೊಂಡು ನಂತರ ಹೆಚ್ಚಿನ ನೀರನ್ನು ತಮಿಳುನಾಡಿಗೂ ಅನುಕೂಲವಾಗುವಂತೆ ಹರಿಸಲು ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರೆಲ್ಲರೂ ಮುಂದಾಗಬೇಕು ಎಂದು ಒತ್ತಾಯಿಸಿದರು.

SCROLL FOR NEXT