ರಾಜ್ಯ

ಹಣಕಾಸಿನ ವಿಚಾರವಾಗಿ ಯೋಧರಿಬ್ಬರ ನಡುವೆ ಜಗಳ: ಗುಂಡಿನ ದಾಳಿ, ಓರ್ವ ಯೋಧನಿಗೆ ತೀವ್ರ ಗಾಯ

Nagaraja AB

ಗೋಕಾಕ್:  ಗಣೇಶ ಹಬ್ಬ ಆಚರಿಸಲು ರಜೆಯ ಮೇಲೆ ಊರಿಗೆ ಬಂದಿದ್ದ ಯೋಧರಿಬ್ಬರ ನಡುವೆ ಹಣಕಾಸಿನ ವಿಚಾರವಾಗಿ ಜಗಳ ನಡೆದು, ಒಬ್ಬಾತ ಮತ್ತೊಬ್ಬನ ಮೇಲೆ ಬಂದೂಕಿನಿಂದ ಗುಂಡು ಹಾರಿಸಿದ್ದರಿಂದ ಆತ ತೀವ್ರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ ಗೋಕಾಕ್ ತಾಲೂಕಿನ ರಾಜನಕಟ್ಟಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. 

ಗಾಯಗೊಂಡ ಯೋಧನನ್ನು ಬಸಪ್ಪ ಮೈಲಪ್ಪ ಬಂಬರ್ಗಾ (32) ಎಂದು ಗುರುತಿಸಲಾಗಿದೆ. ಆರೋಪಿ ನಂಜುಂಡಿ ಲಕ್ಷ್ಮಣ ಬೂದಿಹಾಳ್ (32)ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಬಂಬರ್ಗಾ ಮತ್ತು ಬೂದಿಹಾಳ್ ಇಬ್ಬರೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ತಮ್ಮ ಕುಟುಂಬದೊಂದಿಗೆ ಗಣೇಶ ಹಬ್ಬವನ್ನು ಆಚರಿಸಲು ರಾಜನಕಟ್ಟಿ ಗ್ರಾಮಕ್ಕೆ ಬಂದಿದ್ದರು. ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದು ನಂತರ ಹಿಂಸಾಚಾರಕ್ಕೆ ತಿರುಗಿತ್ತು.

ಇದರಿಂದ ಕುಪಿತಗೊಂಡ ಬೂದಿಹಾಳ್ ತನ್ನ ರಿವಾಲ್ವರ್ ತೆಗೆದು ಆತನ ಹೊಟ್ಟೆಗೆ ಗುಂಡು ಹಾರಿಸಿದ್ದಾನೆ. ಗಾಯಗೊಂಡಿರುವ ಬಂಬರಗಾ ಅವರನ್ನು ಅಕ್ಕಿತಂಗಿಹಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದ್ದು, ಅಲ್ಲಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.

SCROLL FOR NEXT