ರಾಜ್ಯ

'ಬುರ್ಖಾ ಧರಿಸಿ ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ: ವಾಟಾಳ್ ನಾಗರಾಜ್ ಏನೆಂದರು?

Sumana Upadhyaya

ಬೆಂಗಳೂರು: ಮಹಿಳೆಯರ ಪರವಾಗಿ, ನ್ಯಾಯ, ಸತ್ಯದ ಪರವಾಗಿ ಒತ್ತಾಯಿಸಿ ಇಂದು ಬುರ್ಖಾ ಧರಿಸಿ ಖಾಲಿ ಕೊಡ ಕೈಯಲ್ಲಿ ಹಿಡಿದು ಕಾವೇರಿ ಜಲಕ್ಕಾಗಿ ಹೋರಾಟ ಮಾಡುತ್ತಿದ್ದೇನೆ ಎಂದು ಕನ್ನಡ ಒಕ್ಕೂಟ ನಾಯಕ ಮಾಜಿ ಶಾಸಕ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಬೆಂಗಳೂರಿನ ಡಾಲರ್ಸ್ ಕಾಲೊನಿಯ ತಮ್ಮ ನಿವಾಸ ಮುಂದೆ ಪ್ರತಿಭಟನೆ ನಡೆಸಿದ ಅವರು, ಕರ್ನಾಟಕ ತಮಿಳು ನಾಡಿಗೆ ಕದ್ದು ನೀರು ಬಿಡುತ್ತಿದೆ ಎಂದು ಸಾಂಕೇತಿಸಲು ಈ ಕಪ್ಪು ಬಣ್ಣ ಧರಿಸಿದ್ದೇನೆ, ಇನ್ನು ಬುರ್ಖಾ ಮಹಿಳೆಯರ ನ್ಯಾಯದ,ಸಮಾನತೆಯ ಸಂಕೇತವಾಗಿದೆ. ನ್ಯಾಯದೇವತೆ ಧರಿಸುವ ಬಟ್ಟೆ ಅಥವಾ ಬುರ್ಖಾ ಎಂದಾದರೂ ಕರೆಯಲಿ. ನ್ಯಾಯದೇವತೆಯ ಸಂದೇಶ ಸಾರುವ ಬುರ್ಖಾ ಧರಿಸಿದ್ದೇನೆ. ಮಹಿಳೆಯರ ಗೌರವದ ಸಂಕೇತ ಸಾರುವ ಬುರ್ಖಾ ಧರಿಸಿದ್ದೇನೆ. ಕಾವೇರಿ ನದಿ ನೀರು ವಿಚಾರವಾಗಿ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇನೆ ಎಂದು ಹೇಳಿದರು.

ಇಂದು ಕರ್ನಾಟಕ ಬಂದ್ ಆಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಕಾವೇರಿ ಜಲಾನಯನ ಜಿಲ್ಲೆಗಳಲ್ಲಿ ಪ್ರತಿಭಟನೆ ತೀವ್ರವಾಗಿದೆ. ಈಗಾಗಲೇ ಹಲವು ಕನ್ನಡಪರ ಹೋರಾಟಗಾರರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಪೊಲೀಸ್ ಭದ್ರತೆ ನಿಯೋಜಿಸಿ ಕರ್ನಾಟಕ ಬಂದ್​ ಅನ್ನು​​ ಹತ್ತಿಕ್ಕುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ಕಾವೇರಿ ನೀರಿಗಾಗಿ ನಾವು ಕರೆ ನೀಡಿರುವ ಬಂದ್​​ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಬಂದ್​ಗೆ ಸಹಕಾರ ನೀಡಿದ ರಾಜ್ಯದ ಜನತೆ ಧನ್ಯವಾದ ತಿಳಿಸುತ್ತೇನೆ. ಪೊಲೀಸರು ನಮ್ಮ ಕಾರ್ಯಕರ್ತರನ್ನು ಬಂಧಿಸುತ್ತಿದ್ದಾರೆ. ಪೊಲೀಸ್ ಗೂಂಡಾಗಿರಿ, ದೌರ್ಜನ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ. ಶಾಂತಿಯುತವಾಗಿ ಪ್ರತಿಭಟನೆ, ಮೆರವಣಿಗೆ ಮಾಡಿದರೇ ತಪ್ಪಾ, ಟೌನ್​​​ಹಾಲ್​ ಮುಂದೆ ಪ್ರತಿಭಟನೆಗೆ ಅವಕಾಶ ನೀಡದೆ ದೌರ್ಜನ್ಯವೆಸಗಿದ್ದಾರೆ. ರಾಜ್ಯ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದರು.

SCROLL FOR NEXT