ರಾಜ್ಯ

ಈದ್ ಮಿಲಾದ್ ಮೆರವಣಿಗೆಯಲ್ಲಿ ಯತ್ನಾಳ್ ಭಾವಚಿತ್ರದ ಬ್ಯಾನರ್ ಗೆ ಹಾನಿ; ಮೂವರ ಬಂಧನ!

Nagaraja AB

ವಿಜಯಪುರ: ನಗರದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಬ್ಯಾನರ್ ಹರಿದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಂಧಿತರನ್ನು ಯಾಸೀನ್, ಮೊಹಮ್ಮದ್ ಮತ್ತು ಸೊಹೈಲ್ ಎಂದು ಗುರುತಿಸಲಾಗಿದೆ.

ಬಿಜೆಪಿ ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಚಿತ್ರವಿದ್ದ ಬ್ಯಾನರ್ ನ್ನು ಆರೋಪಿಗಳು ಹರಿದು ಹಾಕಿದ್ದರು. ಗಣೇಶ ಹಬ್ಬದ ಶುಭಾಶಯ ಕೋರಲು ಇದನ್ನು ಹಾಕಲಾಗಿತ್ತು. ಬ್ಯಾನರ್‌ನಲ್ಲಿ ಗಣೇಶ ಮತ್ತು ಶಿವಾಜಿ ಮಹಾರಾಜರ ಚಿತ್ರಗಳಿದ್ದವು. ಬ್ಯಾನರ್ ಹರಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಶಾಸಕ ಯತ್ನಾಳ್ ಬೆಂಬಲಿಗ ರಘು ವಿಜಯಪುರದ ಗಾಂಧಿ ಚೌಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದ ಬಿಜೆಪಿ ಮುಖಂಡರು, ನಗರದಲ್ಲಿ ಕೋಮು ಸೌಹಾರ್ದ ಹಾಳು ಮಾಡುವ ಪ್ರಯತ್ನವಾಗಿದೆ ಎಂದು ದೂರಿದ್ದರು. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಗಣೇಶ ಚತುರ್ಥಿ ಆಚರಿಸಿದ್ದು, ಈದ್ ಆಚರಣೆ ವೇಳೆ ಯುವಕರ ಗುಂಪು ಉದ್ದೇಶಪೂರ್ವಕವಾಗಿ ಹಿಂದೂ ದೇವರುಗಳ ಫೋಟೋ ಇರುವ ಬ್ಯಾನರ್ ಹರಿದು ಅವಮಾನ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು. ಈ ಸಂಬಂಧ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

SCROLL FOR NEXT