ಬಿಎಂಟಿಸಿ ಬಸ್ ನಲ್ಲಿ ಮಹಿಳೆ ಮೇಲೆ ಹಲ್ಲೆ
ಬಿಎಂಟಿಸಿ ಬಸ್ ನಲ್ಲಿ ಮಹಿಳೆ ಮೇಲೆ ಹಲ್ಲೆ 
ರಾಜ್ಯ

ಕಂಡಕ್ಟರ್‌ಗೆ ಜಾಮೀನು ನೀಡದ BMTC ವಿರುದ್ಧ KSRTC ನೌಕರರ ಸಂಘ ಕಿಡಿ

Manjula VN

ಬೆಂಗಳೂರು: ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ನಿರ್ವಾಹಕ ಜಾಮೀನಿನ ಮೇಲೆ ಹೊರ ಬರಲು ಸಹಕರಿಸದ ಬಿಎಂಟಿಸಿ ಆಡಳಿತ ಮಂಡಳಿ ವಿರುದ್ಧ ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಈ ಸಂಬಂಧ ಫೆಡರೇಶನ್ ಅಧ್ಯಕ್ಷ ಎಚ್.ವಿ.ಅನನಾಥ ಸುಬ್ಬರಾವ್ ಅವರು ಬಿಎಂಟಿಸಿ ಎಂಡಿ ರಾಮಚಂದ್ರನ್ ಆರ್ ಅವರಿಗೆ ಪತ್ರ ಬರೆದಿದ್ದಾರೆ,

ಕಂಡಕ್ಟರ್ ಹೊನಪ್ಪ ನಾಗಪ್ಪ ಅಗಸರ್ ಅವರನ್ನು ಜಾಮೀನಿನ ಮೇಲೆ ಹೊರಗೆ ತರಲು ಪ್ರಯತ್ನಿಸುವ ಬದಲು ಬಿಎಂಟಿಸಿ ಆಡಳಿತವು ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿದೆ. ನಮ್ಮ ಒಕ್ಕೂಟದ ಕಾರ್ಯಕರ್ತರ ಪ್ರಯತ್ನದಿಂದ ಅವರು ಜಾಮೀನಿನ ಮೇಲೆ ಹೊರಬಂದಿದ್ದಾರೆ.

ನಾವೂ ಕೂಡ ಬಸ್ಸಿನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇವೆ. ದೃಶ್ಯಾವಳಿಗಳಲ್ಲಿ, ಬಸ್ ಟಿಕೆಟ್‌ಗೆ ಸಂಬಂಧಿಸಿದಂತೆ ಮಹಿಳೆ ಕಂಡಕ್ಟರ್‌ನೊಂದಿಗೆ ಜಗಳವಾಡುತ್ತಿರುವುದು ಕಂಡು ಬಂದಿದೆ. ಮಹಿಳೆಯೇ ಮೊದಲು ಕಂಡಕ್ಟರ್‌ಗೆ ಹೊಡೆದಿದ್ದಾರೆ. ಈ ಹಲ್ಲೆಗೆ ಅವರು ಪ್ರತಿಕ್ರಿಯಿಸಿದ್ದಾರೆ. ಆದರೆ, ಮಹಿಳೆಯ ದೂರಿಗೂ ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿರುವ ಸಾಕ್ಷ್ಯಕ್ಕೂ ಹೊಂದಾಣಿಕೆಯಾಗುತ್ತಿಲ್ಲ. ಬಸ್ ಟಿಕೆಟ್ ನೀಡಲು ಕಂಡಕ್ಟರ್ ನಿರಾಕರಿಸಿದ್ದರಿಂದ ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಮಹಿಳೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಆದರೆ, ಬಿಎಂಟಿಸಿ ಆಡಳಿತ ಮಂಡಳಿಯು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಂಡಕ್ಟರ್‌ನನ್ನು ವಿಚಾರಿಸುವ ಬದಲು, ತಕ್ಷಣವೇ ಅವರನ್ನು ಅಮಾನತುಗೊಳಿಸಿದೆ, ಇದು ಕೈಗಾರಿಕಾ ಒಪ್ಪಂದದ ಉಲ್ಲಂಘನೆಯಾಗಿದೆ. ಕೂಡಲೇ ಅಧಿಕಾರಿಗಳು ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

SCROLL FOR NEXT