ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ರಾಜ್ಯ

ಬೆಂಗಳೂರು: BBMP ಉದ್ಯಾನವನಗಳ ಸಸ್ಯ ಸಂಕುಲ ಉಳಿಕೆಗೆ BWSSB ಸಂಸ್ಕರಿಸಿದ ನೀರು ಬಳಕೆ!

Manjula VN

ಬೆಂಗಳೂರು: ತಾಪಮಾನ ಏರಿಕೆಯಾಗುತ್ತಿದ್ದಂತೆ ನಗರದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದ್ದು, ಕೇವಲ ಮನುಷ್ಯರಷ್ಟೇ ಅಲ್ಲದೆ, ಗಿಡ-ಮರಗಳಿಗೂ ಕೂಡ ನೀರಿನ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಸ್ಯ ಸಂಕುಲ ಉಳಿಕೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಸಂಸ್ಕರಿಸಿದ ನೀರು ಬಳಸಲು ಬಿಬಿಎಂಪಿ ಮುಂದಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ವಹಿಸುತ್ತಿರುವ ಹಲವು ಉದ್ಯಾನವನಗಳಿಗೆ ಸಂಸ್ಕರಿಸಿದ ನೀರು ಹರಿಸುವ ಮೂಲಕ ಸಸ್ಯವರ್ಗಗಳನ್ನು ಅಧಿಕಾರಿಗಳು ರಕ್ಷಣೆ ಮಾಡುತ್ತಿದ್ದಾರೆ.

ತೋಟಗಾರಿಕೆ ಇಲಾಖೆ ಉಪನಿರ್ದೇಶಕರು (ಬಿಬಿಎಂಪಿ) ಚಂದ್ರಶೇಖರ್ ಅವರು ಮಾತನಾಡಿ. ಸುಮಾರು 23 ವಿಧಾನಸಭಾ ಕ್ಷೇತ್ರಗಳಲ್ಲಿ ಉದ್ಯಾನವನಗಳಲ್ಲಿನ ಸಸ್ಯವರ್ಗಗಳ ರಕ್ಷಣೆಗೆ ಸಂಸ್ಕರಿಸಿದ ನೀರು ಪೂರೈಕೆ ಮಾಡುವಂತೆ ಬಿಡಬ್ಲ್ಯುಎಸ್‌ಎಸ್‌ಬಿಗೆ ಮನವಿ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಪ್ರತಿ ಟ್ಯಾಂಕರ್‌ನಲ್ಲಿ 6,000 ಲೀಟರ್ ನೀರನ್ನು ಸಾಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 1,000 ಉದ್ಯಾನವನಗಳಿದ್ದು, ಹಲವು ಉದ್ಯಾನವನಗಳಲ್ಲಿನ ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಕೆಲವು ಬೋರ್‌ವೆಲ್‌ ನೀರು ಕಡಿಮೆಯಾಗಿದೆ. ಆದ್ದರಿಂದ ನೀರು ಪೂರೈಕೆ ಮಾಡುವಂತೆ ಬಿಡಬ್ಲ್ಯೂಎಸ್‌ಎಸ್‌ಬಿಗೆ ಮನವಿ ಸಲ್ಲಿಸಲಾಗಿದೆ. ಮನವಿ ಹಿನ್ನೆಲೆಯಲ್ಲಿ ಇದೀಗ ನಿತ್ಯ 23 ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ಸಸ್ಯಗಳು ಮತ್ತು ಮರಗಳ ಉಳಿವನ್ನು ಖಚಿತಪಡಿಸಿಕೊಳ್ಳಲು ಬೇಸಿಗೆಯವರೆಗೂ ಈ ವ್ಯವಸ್ಥೆ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.

ಬೋರ್‌ವೆಲ್‌ಗಳನ್ನು ದುರಸ್ತಿ ಮಾಡಲು, ಇನ್ನೂ 100 ರಿಂದ 200 ಅಡಿಗಳಷ್ಟು ಆಳಕ್ಕೆ ಹೋಗಲು ರಿಡ್ರಿಲ್ ಮಾಡುವ ಕಾರ್ಯಗಳನ್ನು ನಡೆಸಲಾಗುತ್ತಿದೆ. ಉದ್ಯಾನವನ ನಿರ್ವಹಣೆಗೆ ಮಾತ್ರ ನೀರು ತೆಗೆಯಲು ಅನುಮೋದನೆ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಎಂದು ಬಿಬಿಎಂಪಿ ಕೇಂದ್ರ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ನಡುವೆ ಕೆಆರ್ ಪುರಂ ಹಾಗೂ ಸುತ್ತಮುತ್ತಲಿನ ಕೆಲವು ಸ್ವಯಂಸೇವಕರು ಪ್ಲಾಸ್ಟಿಕ್ ಕುಂಡಗಳ ಮೂಲಕ ಗಿಡಗಳಿಗೆ ನೀರು ಹಾಯಿಸುವ ಕೆಲಸ ಮಾಡುತ್ತಿದ್ದಾರೆ.

ಮಹದೇವಪುರ ವಲಯದ ಕೆರೆ ಪಾರ್ಕ್ ಆವರಣದಲ್ಲಿ ಸಸ್ಯಗಳಿಗೆ ಬಿಬಿಎಂಪಿ ಅಥವಾ ಬಿಡಬ್ಲ್ಯುಎಸ್‌ಎಸ್‌ಬಿ ನೀರುಣಿಸದ ಹಿನ್ನೆಲೆಯಲ್ಲಿ ಕೆಲ ಸ್ವಯಂಸೇವಕರು ನೀರು ಹಾಯಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಫ್ರೆಂಡ್ಸ್ ಆಫ್ ಲೇಕ್ಸ್‌ನ ಸಹ ಸಂಸ್ಥಾಪಕ ರಾಮ್ ಪ್ರಸಾದ್ ಹೇಳಿದ್ದಾರೆ.

ಮಹದೇವಪುರದ ವಾರಣಾಸಿ ಪಾರ್ಕ್‌ನಲ್ಲಿ ಕಳೆದ ವರ್ಷ ಸುಮಾರು 400 ಸಸಿಗಳನ್ನು ಸ್ವಯಂಸೇವಕರು ನೆಟ್ಟಿದ್ದರು. ಈ ವರ್ಷ ನೀರು ಪೂರೈಕೆ ಸಮಸ್ಯೆಯಾಗಿದ್ದರಿಂದ ಜನರು ಮನೆಯಿಂದ ನೀರು ತಂದು ಪ್ರತಿನಿತ್ಯ ನೀರು ಹಾಯಿಸುತ್ತಿದ್ದಾರೆಂದು ತಿಳಿಸಿದ್ದಾರೆ.

ಸರ್ಕಾರಿ ಸಂಸ್ಥೆಗಳಲ್ಲಿ 4,000 ಏರೇಟರ್‌ಗಳ ಅಳವಡಿಕೆ

ನೀರು ವ್ಯರ್ಥವಾಗುವುದನ್ನು ತಪ್ಪಿಸಲು ನಲ್ಲಿಗಳಲ್ಲಿ ಏರೇಟರ್‌ಗಳನ್ನು ಅಳವಡಿಸಬೇಕು ಎಂಬ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಿರ್ದೇಶನವನ್ನು ಅನುಸರಿಸುತ್ತಿರುವ ಅಧಿಕಾರಿಗಳು, ಸರ್ಕಾರಿ ಸಂಸ್ಥೆಗಳಲ್ಲಿ ಇದುವರೆಗೆ 4,000 ಏರೇಟರ್‌ಗಳನ್ನು ಅಳವಡಿಸಿದ್ದಾರೆ.

.BWSSB ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು ಮಾತನಾಡಿ, ಮೊದಲ ಹಂತದಲ್ಲಿ, ಸಾರ್ವಜನಿಕರನ್ನು ಉತ್ತೇಜನ ನೀಡಲು BWSSB ಯ ಎಲ್ಲಾ ಕಚೇರಿಗಳಲ್ಲಿ ಏರೇಟರ್‌ಗಳನ್ನು ಅಳವಡಿಸುವ ಕೆಲಸ ಮಾಡಲಾಗಿದೆ. ಎರಡನೇ ಹಂತದಲ್ಲಿ ಬಿಡಿಎ, ಬಿಎಸ್‌ಎನ್‌ಎಲ್, ಇಂದಿರಾ ಕ್ಯಾಂಟೀನ್‌ಗಳು, ಆದಾಯ ತೆರಿಗೆ, ಬಿಬಿಎಂಪಿ ಶಾಲೆಗಳು, ಇಸ್ರೋ, ಬೆಗ್ಗರ್ಸ್ ಕಾಲೋನಿ, ಎಚ್‌ಎಎಲ್, ಬಿಇಎಂಎಲ್, ಸಿಲ್ಕ್ ಬೋರ್ಡ್, ಕೇಂದ್ರೀಯ ಸದನ್, ರಕ್ಷಣಾ, ವಿವಿ ಟವರ್, ಐಎಎಸ್ ಅಧಿಕಾರಿಗಳ ಸಂಘ, ಪ್ರಾದೇಶಿಕ ಸಾರಿಗೆ ಕಚೇರಿ ಮತ್ತು ಪೊಲೀಸ್ ಠಾಣೆಗಳಲ್ಲಿ 4,000 ಏರೇಟರ್‌ಗಳನ್ನು ಅಳವಡಿಸಲಾಗಿದೆ. ಯಾವುದೇ ಹೊಸ ನಿಯಮಗಳನ್ನು ಮೊದಲು ನಾವು ಕಡ್ಡಾಯವಾಗಿ ಅನುಸರಿಸಿದರೆ ನಂತರ ಜನರು ಅದನ್ನು ಅನುಸರಿಸುತ್ತಾರೆಂದು ಹೇಳಿದ್ದಾರೆ.

ವ್ಯಾಪಾರ ಸಂಸ್ಥೆಗಳೊಂದಿಗೆ BWSSB ಸಭೆ

ನಗರದಲ್ಲಿ ಸಂಸ್ಕರಿಸಿದ ನೀರು ವಿಫುಲವಾಗಿ ಲಭ್ಯವಿದ್ದು, ಅದರ ಮಾರುಕಟ್ಟೆ ಹೆಚ್ಚಿಸುವ ನಿಟ್ಟಿನಲ್ಲಿ ಸಣ್ಣ ಕೈಗಾರಿಕಗಳು, FKCCI ಮತ್ತು KASSIA ನಂತರ ವ್ಯಾಪಾರ ಸಂಸ್ಥೆಗಳೊಂದಿಗೆ ಸಭೆ ನಡೆಸಲು BWSSB ಮುಂದಾಗಿದೆ.

ಅಲ್ಲದೆ, ನೀರು ಸಂರಕ್ಷಣೆಯ ಭಾಗವಾಗಿ ನಿನ್ನೆ ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಅವರು, 20 ಲಕ್ಷದಿಂದ 40 ಲಕ್ಷ ಲೀಟರ್ ನೀರು ಬಳಕೆದಾರರೊಂದಿಗೆ ಸಭೆ ನಡೆಸಿದರು.

ಸಭೆಯಲ್ಲಿ 20-40 ಲಕ್ಷ ಲೀಟರ್ ನೀರು ಬಳಕೆ ಮಾಡುವ ಸುಮಾರು 18,000 ಗ್ರಾಹಕರು ನಗರದಲ್ಲಿದ್ದಾರೆ. ಇವರು ಉತ್ತಮ ಸಂರಕ್ಷಣಾ ಪದ್ಧತಿಗಳನ್ನು ಅಳವಡಿಸಿಕೊಂಡರೆ, ನೀರನ್ನು ಉಳಿಸಲು ಸಾಧ್ಯ. ನಗರದಲ್ಲಿ ಸಂಸ್ಕರಿಸಿದ ನೀರು ಲಭ್ಯವಿದ್ದು, ಅದನ್ನು ಸಮರ್ಪಕವಾಗಿ ಬಳಸುವುದರಿಂದ ಕಾವೇರಿ ನೀರಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು ಎಂದು ಹೇಳಿದರು.

ಸಂಸ್ಕರಿಸಿದ ನೀರಿನ ಮಾರುಕಟ್ಟೆಯನ್ನು ಹೆಚ್ಚಿಸಲು ಅನೇಕ ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗುತ್ತಿದೆ. ಶುಕ್ರವಾರ ಸಣ್ಣ ಕೈಗಾರಿಕೆಗಳು, ಎಫ್‌ಕೆಸಿಸಿಐ ಮತ್ತು ಕೆಎಸ್‌ಎಸ್‌ಐಎ ಜತೆ ಸಭೆ ನಡೆಸಿ ಸಂಸ್ಕರಿತ ನೀರು ಬಳಕೆಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

SCROLL FOR NEXT