ಕಾಳಿ ಮಾತೆಗೆ ಕೈಬೆರಳು ಅರ್ಪಿಸಿದ ಅರುಣ್ ವರ್ಣೇಕರ್.
ಕಾಳಿ ಮಾತೆಗೆ ಕೈಬೆರಳು ಅರ್ಪಿಸಿದ ಅರುಣ್ ವರ್ಣೇಕರ್. 
ರಾಜ್ಯ

'ಮೋದಿ ಮತ್ತೆ ಪ್ರಧಾನಿಯಾಗಬೇಕು': ಕಾಳಿ ಮಾತೆಗೆ ತನ್ನ ಕೈ ಬೆರಳನ್ನೇ ನೈವೇದ್ಯವಾಗಿ ಅರ್ಪಿಸಿದ ಅಭಿಮಾನಿ!

Manjula VN

ಕಾರವಾರ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಪ್ರಾರ್ಥಿಸಿರುವ ಮೋದಿ ಅಭಿಮಾನಿಯೊಬ್ಬ ಕಾಳಿ ಮಾತೆಗೆ ತನ್ನ ಬೆರಳನ್ನೇ ಅರ್ಪಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸೋನಾರವಾಡದಲ್ಲಿ ನಡೆದಿದೆ.

ಅರುಣ್ ವರ್ಣೇಕರ್, ಕಾಳಿ ಮಾತೆಗೆ ಎಡಗೈ ಬೆರಳನ್ನು ಅರ್ಪಿಸಿದ ಅಭಿಮಾನಿ. ಸೋನಾರವಾಡ ವಾಸಿಯಾಗಿರುವ ಅರುಣ್ ವರ್ಣೇಕರ್ ಅವಿವಾಹಿತನಾಗಿದ್ದು, ಪ್ರಧಾನಿ ಮೋದಿಯವರ ಅಪ್ಪಟ ಅಭಿಮಾನಿಯಾಗಿದ್ದಾನೆ.

ಮನೆಯಲ್ಲಿ ಮೋದಿಗಾಗಿ ಗುಡಿಯನ್ನು ನಿರ್ಮಿಸಿ ದಿನಾಲೂ ಪೂಜೆ ಮಾಡುತ್ತಾ ಬಂದಿರುವ ಅರುಣ್. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂದು ಕಾಳಿಮಾತೆಗೆ ಬೇಡಿಕೊಂಡಿದ್ದಾರೆ. ಇದೇ ವೇಳೆ ತನ್ನ ಕೈ ಬೆರಳು ತುಂಡು ಮಾಡಿ, ನೈವೇದ್ಯವಾಗಿ ದೇವಿಗೆ ಅರ್ಪಿಸಿದ್ದಾನೆ.

ದೇಶ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಮೋದಿ ಪರಿಹರಿಸಿದ್ದಾರೆ. ಅವರಿಂದಲೇ ನಮ್ಮ ದೇಶಕ್ಕೆ ಜಾಗತಿಕ ಮನ್ನಣೆ ದೊರೆತಿದೆ. ಇತರ ಹಲವರಂತೆ ನಾನು ಕೂಡ ಮೋದಿಯವರು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕೆಂದು ಬಯಸುತ್ತಿದ್ದೇನೆ. ರಾಷ್ಟ್ರದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅವರು ಅಧಿಕಾರದಲ್ಲಿರಬೇಕೆಂದು ನಾನು ಬಯಸುತ್ತೇನೆ ಎಂದು ಅರುಣ್ ವರ್ಣೇಕರ್ ಹೇಳಿದ್ದಾರೆ.

ಮುಂಬೈನಲ್ಲಿದ್ದ ವೆರ್ಣೇಕರ್, ತಾಯಿಯನ್ನು ನೋಡಿಕೊಳ್ಳುವ ಸಲುವಾಗಿ ಇತ್ತೀಚೆಗೆ ಕಾರವಾರಕ್ಕೆ ವಾಪಸ್ಸಾಗಿದ್ದ ಎಂದು ತಿಳಿದುಬಂದಿದೆ.

ಕಾರವಾರದ ಬಿಜೆಪಿ ಕಾರ್ಯಕರ್ತ ಜಗದೀಶ ನಾಯ್ಕ್ ಎಂಬುವವರು ಮಾತನಾಡಿ, ಇದು ಹುಚ್ಚುತನ. ಇಂತಹ ಕೆಲಸಗಳನ್ನು ಮಾಡುವ ಬದಲು ಮೋದಿಯವರ ಸಾಧನೆಗಳನ್ನು ಜನರಿಗೆ ತಿಳಿಸಬೇಕು. ಇದರಿಂದ ಮೋದಿಯವರಿಗೂ ಖುಷಿಯಾಗುತ್ತದೆ’ ಎಂದು ಹೇಳಿದ್ದಾರೆ.

ಸ್ಥಳೀಯ ಬಿಜೆಪಿ ಮುಖಂಡ ನಂದ ಕಿಶೋರ್ ಮಾತನಾಡಿ, ಇದು ನಿಜವಾಗಿಯೂ ಆಘಾತ ತಂದಿದೆ. ಇಂತಹ ಕೃತ್ಯಗಳು ಮರುಕಳಿಸಬಾರದು ಎಂದು ಯುವಕರಲ್ಲಿ ಮನವಿ ಮಾಡುತ್ತೇನೆ. ನಾವೆಲ್ಲರೂ ಮೋದಿ ಗೆಲ್ಲಬೇಕೆಂದು ಬಯಸುತ್ತೇವೆ. ನೀವು ಮೋದಿಯ ಮೇಲಿನ ಪ್ರೀತಿಯನ್ನು ಇತರರು ಮೆಚ್ಚುವ ರೀತಿಯಲ್ಲಿ ತೋರಿಸಬಹುದು. ಆದರೆ ಈ ರೀತಿಯಲ್ಲಿ ಅಲ್ಲ ಎಂದು ತಿಳಿಸಿದ್ದಾರೆ.

SCROLL FOR NEXT