ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ 
ರಾಜ್ಯ

ಕೊಡಗು: ಅರಣ್ಯ ವಲಯದಲ್ಲಿ ತಾಪಮಾನ ಏರಿಕೆ; ಬಿಸಿಲಿನ ಝಳಕ್ಕೆ ಬೇಸತ್ತು ಹಳ್ಳಿಗಳತ್ತ ನುಗ್ಗುತ್ತಿವೆ ಆನೆಗಳು!

Ramyashree GN

ಮಡಿಕೇರಿ: ಅರಣ್ಯ ವಲಯದಲ್ಲಿ ಹೆಚ್ಚುತ್ತಿರುವ ತಾಪಮಾನ ಹಾಗೂ ನೀರಿನ ಮಟ್ಟ ಕುಸಿತದಿಂದಾಗಿ ಆನೆಯ ಹಿಂಡುಗಳು ನೀರು ಮತ್ತು ಮೇವನ್ನು ಅರಸಿ ಸೋಮವಾರಪೇಟೆ ತಾಲೂಕಿನ ಕಾಜೂರು ಗ್ರಾಮದ ಎಸ್ಟೇಟ್‌ಗಳಿಗೆ ಆಗಾಗ್ಗೆ ಭೇಟಿ ನೀಡುತ್ತಿವೆ. ಇದು ನಿವಾಸಿಗಳಲ್ಲಿ ಭಯ ಹುಟ್ಟಿಸಿದೆ.

ಅರಣ್ಯ ವಲಯದಲ್ಲಿ ಆನೆಗಳಿಗೆ ಸಾಕಷ್ಟು ನೀರು ಅಥವಾ ಮೇವು ಸಿಗುತ್ತಿಲ್ಲ, ಇದರಿಂದಾಗಿ ಅವುಗಳು ಎಸ್ಟೇಟ್‌ಗಳಿಗೆ ಆಗಾಗ್ಗೆ ನುಗ್ಗುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ಆದರೂ, ಈ ವಲಯದಲ್ಲಿ ಆನೆಗಳ ಓಡಾಟ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಮಡಿಕೇರಿ ಡಿಸಿಎಫ್ ಭಾಸ್ಕರ್ ಭರವಸೆ ನೀಡಿದ್ದಾರೆ.

ಗದಗದಲ್ಲಿ 41 ಡಿಗ್ಲಿ ಸೆಲ್ಸಿಯಸ್: ಹೊಸ ದಾಖಲೆ

ಕರ್ನಾಟಕದಾದ್ಯಂತ ತಾಪಮಾನ ಏರಿಕೆಯಾಗುತ್ತಿದ್ದು, ಗದಗದಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಸ್ಲಿಯಸ್ ದಾಖಲಾಗಿದೆ. 2016ರ ಏಪ್ರಿಲ್‌ನಲ್ಲಿ 40 ಡಿಗ್ರಿ ಸೆಸ್ಲಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು. ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಬರಗಾಲ ಆವರಿಸಿದ್ದು, ಮಳೆಯ ಸುಳಿವೇ ಇಲ್ಲದಂತಾಗಿದೆ.

ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಇನ್ನೂ ಮೂರು ದಿನಗಳ ಕಾಲ ಬಿಸಿಗಾಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಗದಗ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಸಾಕಷ್ಟು ಪ್ರಮಾಣದ ನೀರು, ಎಳನೀರು, ಹಣ್ಣಿನ ರಸ ಮತ್ತು ನಿಂಬೆ ರಸವನ್ನು ಕುಡಿಯಲು ಜನರಿಗೆ ಸೂಚಿಸಿದ್ದಾರೆ. ತುರ್ತು ಸಂದರ್ಭಗಳಲ್ಲಿ ಗ್ಲೂಕೋಸ್ ಪ್ಯಾಕೆಟ್‌ಗಳನ್ನು ಇಟ್ಟುಕೊಳ್ಳಿ ಎಂದು ಇಲಾಖೆ ತಿಳಿಸಿದೆ. ಸಿಗ್ನಲ್‌ಗಳಲ್ಲಿ ಕಾಯುವ ದ್ವಿಚಕ್ರ ವಾಹನ ಸವಾರರನ್ನು ರಕ್ಷಿಸಲು ಎಲ್ಲಾ ಟ್ರಾಫಿಕ್ ಸಿಗ್ನಲ್‌ಗಳು ಇದೀಗ ಹಸಿರು ಛಾಯೆಯನ್ನು ಹೊಂದಿವೆ.

ಕರಾವಳಿ ಕರ್ನಾಟಕದಲ್ಲಿ ಬಿಸಿಲಿನ ತಾಪ ಹೆಚ್ಚಳ

ಕರ್ನಾಟಕದ ಒಳನಾಡಿನ ಪ್ರತ್ಯೇಕ ಭಾಗಗಳಲ್ಲಿ ತಾಪಮಾನ ಮುಂದುವರಿಯುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕದಲ್ಲಿ ಬಿಸಿ ಮತ್ತು ಆರ್ದ್ರ ವಾತಾವರಣವು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಕಳೆದ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ 38.1 ಡಿಗ್ರಿ ಸೆಲ್ಸಿಯಸ್ ನಿಂದ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇನ್ನೂ ಕೆಲವು ದಿನ ಇದು ಮುಂದುವರಿಯುವ ಮುನ್ಸೂಚನೆ ಇದೆ.

ಅರಣ್ಯ ನಾಶವೇ ಮುಖ್ಯ ಕಾರಣ

ಕಳೆದ ಬೇಸಿಗೆಯಲ್ಲಿ ಶಿವಮೊಗ್ಗದಲ್ಲಿ ದಾಖಲಾದ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಈ ವರ್ಷ ಇದು 1 ರಿಂದ 1.5 ಡಿಗ್ರಿ ಸೆಸ್ಲಿಯಸ್‌ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಅಭಿವೃದ್ಧಿ ಹೆಸರಿನಲ್ಲಿ ಹೆಚ್ಚಿದ ಅರಣ್ಯನಾಶ ಮತ್ತು ಕಡಿಮೆಯಾದ ಹಸಿರು ಹೊದಿಕೆಯೇ ತಾಪಮಾನ ಏರಿಕೆಗೆ ಮುಖ್ಯ ಕಾರಣ ಎಂದು ಪರಿಸರವಾದಿಗಳು ಪರಿಗಣಿಸುತ್ತಾರೆ.

SCROLL FOR NEXT