ಸಂಗ್ರಹ ಚಿತ್ರ
ಸಂಗ್ರಹ ಚಿತ್ರ 
ರಾಜ್ಯ

ಮಂಗಳೂರು: ರಣಬಿಸಿಲಿನಿಂದ ತಪ್ಪಿಸಿಕೊಳ್ಳಲು ಎಳನೀರು ಕುಡಿದು 137 ಮಂದಿ ಅಸ್ವಸ್ಥ; ಅಡ್ಯಾರ್ ಬೊಂಡ ಫ್ಯಾಕ್ಟರಿ ಬಂದ್‌ಗೆ ಆದೇಶ!

Vishwanath S

ಮಂಗಳೂರು: ಅಡ್ಯಾರ್‌ ಎಳನೀರು ಮತ್ತು ನ್ಯಾಚುರಲ್ ಐಸ್ ಕ್ರೀಂ ಮಾರಾಟ ಸಂಸ್ಥೆಯಾದ ಬೊಂಡ ಫ್ಯಾಕ್ಟರಿ'ಯ ಎಳನೀರು ಸೇವಿಸಿ 137 ಮಂದಿ ಅಸ್ವಸ್ಥರಾಗಿದ್ದು ಈ ಹಿನ್ನೆಲೆಯಲ್ಲಿ ಫ್ಯಾಕ್ಟರಿಯನ್ನು ಬಂದ್ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ತಿಮ್ಮಯ್ಯ ಆದೇಶಿಸಿದ್ದಾರೆ.

ಎಪ್ರಿಲ್ 8ರಂದು ಬೊಂಡ ಫ್ಯಾಕ್ಟರಿ ಎಳನೀರು ಖರೀದಿಸಿದ ಕಣ್ಣೂರು ಮತ್ತು ತುಂಬೆ ನಿವಾಸಿಗಳು ಮರುದಿನ ಬೆಳಿಗ್ಗೆ ವಾಂತಿ-ಭೇದಿಯಾಗಿ ತೀವ್ರವಾಗಿ ಅಸ್ವಸ್ಥರಾಗಿದ್ದರು. ಪ್ರತಿ ಲೀಟರ್‌ಗೆ 40 ರೂ. ಬೆಲೆಯಿದ್ದು, ಬಿಸಿಲಿನ ತಾಪ ತಾಳಿಕೊಳ್ಳಲು ಈ ಭಾಗದ ಹಲವರು ಎಳನೀರು ಕುಡಿಯುತ್ತಿದ್ದರು.

137 ಮಂದಿ ಪೈಕಿ 84 ಮಂದಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದರೆ 53 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಲ್ಲಿಯವರೆಗೆ ಸುಮಾರು 23 ರೋಗಿಗಳನ್ನು ಡಿಸ್ಚಾರ್ಜ್ ಮಾಡಲಾಗಿದೆ. ಎಲ್ಲಾ ರೋಗಿಗಳು ಸ್ಥಿರವಾಗಿದ್ದು, ಆರೋಗ್ಯ ಇಲಾಖೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ತನಿಖೆಯ ದೃಷ್ಟಿಯಿಂದ ಫ್ಯಾಕ್ಟರಿಯನ್ನು ಮುಚ್ಚಲಾಗಿದ್ದು ಆರೋಗ್ಯ ಅಧಿಕಾರಿಗಳು ಸಂತ್ರಸ್ತ ರೋಗಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

SCROLL FOR NEXT