ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್ 
ರಾಜ್ಯ

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಮತ್ತೆ ಹಿನ್ನಡೆ, ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ

Ramyashree GN

ಬೆಂಗಳೂರು: ಬಿಜೆಪಿ ಸದಸ್ಯ ಯೋಗೀಶ್‌ಗೌಡ ಗೌಡರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ವಿಚಾರಣೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದ್ದು, ಕಾಂಗ್ರೆಸ್ ಶಾಸಕ ವಿನಯ್ ವಿನಯ್ ಆರ್ ಕುಲಕರ್ಣಿ ಅವರಿಗೆ ಹಿನ್ನಡೆಯಾಗಿದೆ.

2016ರ ಜೂನ್ 15ರಂದು ಧಾರವಾಡದಲ್ಲಿ ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯ ಗೌಡರನ್ನು ಹತ್ಯೆ ಮಾಡಲಾಗಿತ್ತು.

ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರನ್ನು 15ನೇ ಆರೋಪಿಯನ್ನಾಗಿ ಮಾಡಲಾಗಿದ್ದು, ಡಿಸೆಂಬರ್ 6, 2023ರ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ವಿನಯ್ ಕುಲಕರ್ಣಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಯೋಗೀಶ್‌ಗೌಡ ಅವರು ಧಾರವಾಡದಲ್ಲಿ ನಾಯಕರಾಗಿ ಬೆಳೆಯುವುದು ವಿನಯ್ ಕುಲಕರ್ಣಿ ಅವರಿಗೆ ಇಷ್ಟವಿರಲಿಲ್ಲ. ಅದೇ ಸಮಯದಲ್ಲಿ ಕುಲಕರ್ಣಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಹೀಗಾಗಿಯೇ ಯೋಗೀಶ್‌ಗೌಡ ಅವರನ್ನು ಅವರನ್ನು ಕೊಲ್ಲಲು ಹಣ ನೀಡಿದ್ದರು ಎಂದು ಸಿಬಿಐ ಆರೋಪಿಸಿದೆ.

ಈ ಪ್ರಕರಣದಲ್ಲಿ ಕುಲಕರ್ಣಿ ಅವರ ಪಾತ್ರವಿದೆ ಎಂಬುವುದಕ್ಕೆ ಯಾವುದೇ ಸೂಕ್ತ ಆಧಾರವಿಲ್ಲ. ಕುಲಕರ್ಣಿ ವಿರುದ್ಧ ಆರೋಪಗಳನ್ನು ರೂಪಿಸಲು ವಿಚಾರಣಾ ನ್ಯಾಯಾಲಯ ನೀಡಿದ ಆದೇಶವನ್ನು ಸಮರ್ಪಕವಾಗಿ ತರ್ಕಿಸಲಾಗಿಲ್ಲ. ನ್ಯಾಯಾಲಯದ ತೀರ್ಪಿನಲ್ಲಿ ಸ್ಪಷ್ಟತೆಯ ಕೊರತೆಯಿದೆ ಮತ್ತು ಕುಲಕರ್ಣಿ ವಿರುದ್ಧ ಆರೋಪ ಹೊರಿಸಲು ನಿರ್ಧರಿಸುವ ಮೊದಲು ನ್ಯಾಯಾಲಯವು ಎಲ್ಲಾ ಸಂಬಂಧಿತ ಅಂಶಗಳು ಮತ್ತು ಸಾಕ್ಷ್ಯಗಳನ್ನು ಪರಿಗಣಿಸಿದೆ ಎಂದು ಅನ್ನಿಸುತ್ತಿಲ್ಲ ಎಂದು ಕುಲಕರ್ಣಿ ಪರವಾಗಿ ವಾದಿಸಲಾಯಿತು.

ವಿಚಾರಣಾ ನ್ಯಾಯಾಧೀಶರು ಪ್ರಕರಣದಲ್ಲಿನ ಆರೋಪಿ ಸಂಖ್ಯೆ 17ರ ಹೇಳಿಕೆಯ ಮೇಲೆ ಕುಲಕರ್ಣಿ ಅವರ ವಿರುದ್ಧ ಈ ಆದೇಶ ನೀಡಿದ್ದಾರೆ ಎಂದು ಅವರು ವಾದಿಸಿದರು.

ಮತ್ತೊಂದೆಡೆ, ಸಿಬಿಐ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪಿ ಪ್ರಸನ್ನ ಕುಮಾರ್ ಅವರು 130 ದಾಖಲೆಗಳೊಂದಿಗೆ 150 ಸಾಕ್ಷಿಗಳ ಹೇಳಿಕೆಗಳನ್ನು ಒಳಗೊಂಡ ಚಾರ್ಜ್ ಶೀಟ್ ಅನ್ನು ಸಲ್ಲಿಸಿದರು. ಆರೋಪಿ ಸಂಖ್ಯೆ 17ರ ಹೇಳಿಕೆಯನ್ನು ಪರಿಗಣಿಸಿದ್ದರೂ, ಅರ್ಜಿದಾರರಾದ ವಿನಯ್ ಕುಲಕರ್ಣಿ ಅವರ ವಿರುದ್ಧ ಪ್ರಕರಣವನ್ನು ಬೆಂಬಲಿಸಲು ಪ್ರಾಸಿಕ್ಯೂಷನ್ ಒಂದಕ್ಕಿಂತ ಹೆಚ್ಚು ಪುರಾವೆಗಳನ್ನು ಹೊಂದಿದೆ ಎಂದು ವಾದಿಸಿದರು.

ಪ್ರಕರಣದ ಚಾರ್ಜ್‌ಶೀಟ್‌ನಲ್ಲಿರುವ ಅಂಶಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್, ವಿಚಾರಣಾ ನ್ಯಾಯಾಲಯವು ಆರೋಪಗಳನ್ನು ರೂಪಿಸುವ ಹಂತದಲ್ಲಿ ಪ್ರಾಥಮಿಕ ಪ್ರಕರಣವನ್ನು ಕಂಡುಹಿಡಿಯುವ ಸೀಮಿತ ಉದ್ದೇಶಕ್ಕಾಗಿ ಮಾತ್ರ ಸಾಕ್ಷ್ಯವನ್ನು ಪರಿಶೀಲಿಸಲು ಅನುಮತಿ ನೀಡಲಾಗಿದೆ. ಸಾಕ್ಷಿಯ ಹೇಳಿಕೆಯನ್ನು ಪರಿಗಣನೆಯಿಂದ ಹೊರಗಿಡಲಾಗಿದ್ದರೂ ಸಹ ವಿಚಾರಣಾ ನ್ಯಾಯಾಲಯದ ಆದೇಶವನ್ನು ಸಮರ್ಥಿಸುವ ಇತರ ಹೆಚ್ಚಿನ ವಿಚಾರಗಳಿವೆ ಎಂದು ನ್ಯಾಯಾಲಯ ಹೇಳಿದೆ.

'ಈ ಘಟನೆಯು 2016 ರಲ್ಲಿ ಸಂಭವಿಸಿದೆ. ಅರ್ಜಿದಾರರು ಮತ್ತು ಇತರ ಆರೋಪಿಗಳು ಈ ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟ್‌ಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದಾರೆ. ಕೆಲವು ಬಾರಿ ಒಂದಿಷ್ಟು ಬಿಡುವು ಪಡೆದಿರುವುದು ನಿಜ. ಅಂದಿನಿಂದ ವರ್ಷಗಳು ಉರುಳಿವೆ. ಆದರೆ, ಏನೂ ಬದಲಾಗಿಲ್ಲ. ದೀರ್ಘಾವಧಿಯ ಕ್ರಿಮಿನಲ್ ಪ್ರಕರಣವು ಕ್ರಿಮಿನಲ್ ನ್ಯಾಯದ ಆಡಳಿತದ ಹಿತಾಸಕ್ತಿಯಿಂದ ದೂರವಿರುತ್ತದೆ. ನಿರ್ದಿಷ್ಟವಾಗಿ, ಈ ರೀತಿಯ ಪ್ರಕರಣಗಳು ಶೀಘ್ರ ಬಗೆಹರಿಯಬೇಕು ಮತ್ತು 'ನೆನಪಿನಿಂದ ಮರೆಯಾಗುವ ಮೊದಲು' ವಿಲೇವಾರಿ ಮಾಡಬೇಕು. ಆದ್ದರಿಂದ, ಈ ಪ್ರಕರಣದ ವಿಚಾರಣೆಯನ್ನು ಯುದ್ಧೋಪಾದಿಯಲ್ಲಿ ನಡೆಸಬೇಕು ಎಂದು ನಾನು ಪರಿಗಣಿಸುತ್ತೇನೆ' ಎಂದು ಹೇಳಿದ ನ್ಯಾಯಾಲಯವು ಮೂರು ತಿಂಗಳೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಲು ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿತು.

SCROLL FOR NEXT