ಬೆಂಗಳೂರು: ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್'ಗೆ ಅನುಮತಿ ನೀಡಿರುವುದಕ್ಕೆ ಸಚಿವ ದಿನೇಶ್ ಗುಂಡೂರಾವ್ ಅವರು ತೀವ್ರವಾಗಿ ಕಿಡಿಕಾರಿದ್ದು, ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಹಾಗೂ ರಾಜ್ಯಪಾಲರಿಗೆ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ರಾಜ್ಯಪಾಲರ ಬಳಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ನಿರಾಣಿ ಹಾಗೂ ಜನಾರ್ಧನ ರೆಡ್ಡಿಯವರ ವಿರುದ್ದ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ಲೋಕಾಯುಕ್ತ ಹಾಗೂ ಖಾಸಗಿ ವ್ಯಕ್ತಿಗಳ ದೂರು ಇದೆ. ಅವುಗಳ ಪ್ರಾಸಿಕ್ಯೂಷನ್ಗೆ ಅನುಮತಿ ಕೊಡದ ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ತರಾತುರಿಯಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ಹುನ್ನಾರವೇನು.? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧದ ಪ್ರಕರಣಗಳ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ಸಲ್ಲಿಸಿರುವ ದೂರಿನ ಪ್ರತಿಗಳು ರಾಜಭವನದಲ್ಲಿ ಕೊಳೆಯುತ್ತಾ ಕುಳಿತಿವೆ. ಆದರೆ ರಾಜ್ಯಪಾಲರಿಗೆ ಸಿದ್ದರಾಮಯ್ಯ ವಿರುದ್ಧದ ದೂರಿನ ಪ್ರತಿ ಮಾತ್ರ ಕಾಣಿಸಲು ಅವರು ಧರಿಸಿದ್ದ ಭೂತಗನ್ನಡಿ ಯಾವುದು.?
ಮುಡಾದಲ್ಲಿ 50-50ರ ಅನುಪಾತ ತಂದಿದ್ದೇ ಬಿಜೆಪಿ ಸರ್ಕಾರ. ಈ ನಿಯಮದ ಅನುಸಾರವೇ ಸಿದ್ದರಾಮಯ್ಯರ ಪತ್ನಿ ಬದಲಿ ನಿವೇಶನ ಪಡೆದಿದ್ದಾರೆ. ಇದರಲ್ಲಿ ಕಾನೂನು ಬಾಹಿರವಾದದ್ದು ಏನಿದೆ.? ಸಿದ್ದರಾಮಯ್ಯರ ಪತ್ನಿ ಬದಲಿ ನಿವೇಶನ ಪಡೆದಿದ್ದು ಕಾನೂನು ಬಾಹಿರವೆಂದರೆ 50-50ರ ಅನುಪಾತದ ನಿಯಮ ತಂದ ಬಿಜೆಪಿ ಸರ್ಕಾರದ ಕ್ರಮವೂ ಕಾನೂನು ಬಾಹಿರವಲ್ಲವೇ.? ಸಿದ್ದರಾಮಯ್ಯರ ಪತ್ನಿಗೆ ಬದಲಿ ನಿವೇಶನ ನೀಡಿದ್ದು 2021ರಲ್ಲಿ. ಆಗ ಅಧಿಕಾರದಲ್ಲಿದಿದ್ದು ಬಿಜೆಪಿ ಸರ್ಕಾರ. ಸಿದ್ದರಾಮಯ್ಯರ ಪತ್ನಿ ಬದಲಿ ನಿವೇಶನ ಪಡೆದಿದ್ದು ಅಪರಾಧ ಎನ್ನುವುದಾದರೆ, ಬದಲಿ ನಿವೇಶನ ಮಂಜೂರು ಮಾಡಿದ ಬಿಜೆಪಿ ಸರ್ಕಾರವೂ ಅಪರಾಧಿ ಸ್ಥಾನದಲ್ಲಿ ಇರಬೇಕಲ್ಲವೇ.?
ಸಿದ್ದರಾಮಯ್ಯರ ವಿರುದ್ಧ ಸ್ವಜನಪಕ್ಷಪಾತದ ಆರೋಪ ಮಾಡುತ್ತಿರುವವರು, ಇದೇ ಮುಡಾದಲ್ಲಿ ಕುಮಾರಸ್ವಾಮಿ ಕೈಗಾರಿಕಾ ನಿವೇಶನ ಪಡೆದಿದ್ದಾರೆ. ಅವರ ಕುಟುಂಬದ ಅನೇಕರ ಬಳಿ ಮುಡಾ ಸೈಟ್ಗಳಿವೆ. ಸಿದ್ದರಾಮಯ್ಯರದ್ದು ಸ್ವಜನ ಪಕ್ಷಪಾತವಾದರೆ, ಕುಮಾರಸ್ವಾಮಿಯವರದ್ದು ಪರಮ ಜನ ಹಿತವೋ.?
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯರ ವಿರುದ್ಧ ಯಾವುದೇ ಸಾಕ್ಷ್ಯವಿಲ್ಲ, ಅವರ ಪಾತ್ರದ ಬಗ್ಗೆ ದಾಖಲೆಯಿಲ್ಲ, ಯಾವ ತನಿಖಾ ಸಂಸ್ಥೆಗಳು ಅವರ ಪಾತ್ರದ ಬಗ್ಗೆ ಉಲ್ಲೇಖಿಸಿಲ್ಲ. ಹೀಗಿದ್ದರೂ ರಾಜ್ಯಪಾಲರು ಸಿದ್ದರಾಮಯ್ಯರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿರುವುದು ರಾಜಕೀಯ ಷಡ್ಯಂತ್ರವಲ್ಲವೇ.?
ಯಡಿಯೂರಪ್ಪರಂತೆ ಸಿದ್ದರಾಮಯ್ಯ ಕೂಡ ರಾಜೀನಾಮೆ ನೀಡಬೇಕು ಎಂದು ಕೇಳುತ್ತಿರುವವರು ಇತಿಹಾಸ ಮರೆತಿದ್ದಾರೆಯೇ.? ಯಡಿಯೂರಪ್ಪ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದರೂ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರಲಿಲ್ಲ. ಆದರೆ, ರಾಚೇನಹಳ್ಳಿ ಡಿ-ನೋಟಿಫೆಕೇಶನ್ ಹಾಗೂ ಗಣಿ ಅಕ್ರಮದಲ್ಲಿ ನ್ಯಾ.ಸಂತೋಷ್ ಹೆಗ್ಡೆ ವರದಿ ಬಳಿಕ ಬಂಧನದ ಭೀತಿಯಿಂದ ರಾಜೀನಾಮೆ ಕೊಟ್ಟರು. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯರ ವಿರುದ್ದ ಅಂತಹ ಯಾವ ವರದಿಯಿದೆ.? ಯಾವ ದಾಖಲೆಯಿದೆ.?
ಸಿದ್ದರಾಮಯ್ಯರ ನಾಲ್ಕು ದಶಕದ ರಾಜಕೀಯ ಜೀವನ ನಿಷ್ಕಳಂಕ ಎಂಬುದು BJP-JDS ನಾಯಕರಿಗೂ ಗೊತ್ತು. ಆದರೂ ಸಿದ್ದರಾಮಯ್ಯರ ವಿರುದ್ಧ ದ್ವೇಷ ಕಾರಲು ಅವರು ಅಹಿಂದ ಸಮುದಾಯದ ಹಾಗೂ ಶೋಷಿತ ವರ್ಗದ ಧ್ವನಿಯಾಗಿದ್ದಾರೆ ಎಂಬ ಕಾರಣಕ್ಕಲ್ಲವೇ.?
ತಮಿಳುನಾಡು ರಾಜ್ಯಪಾಲ ರವಿ, ಕೇರಳ ರಾಜ್ಯಪಾಲ ಆರೀಫ್ ಮಹಮ್ಮದ್ ಖಾನ್, ಪ.ಬಂಗಾಳ ರಾಜ್ಯಪಾಲ ಆನಂದ್ ಬೋಸ್ರಂತೆ ಕರ್ನಾಟಕದ ರಾಜ್ಯಪಾಲರೂ ರಾಜಭವನವನ್ನು ಬಿಜೆಪಿಯ ಹೆಡ್ ಆಫೀಸ್ ಮಾಡಿಕೊಂಡಿದ್ದಾರೆ. ರಾಜಕೀಯ ಪಕ್ಷದ ಕಾರ್ಯಕರ್ತರಂತೆ ವರ್ತಿಸುತ್ತಿರುವ ಇಂತಹವರಿಂದ ರಾಜ್ಯಪಾಲ ಹುದ್ದೆಯ ಘನತೆ ಉಳಿಯಲು ಸಾಧ್ಯವೇ.? ರಾಜ್ಯಪಾಲರು ಸಂವಿಧಾನದ ಪ್ರತಿನಿಧಿ. ಆದರೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ BJPಯ ಏಜೆಂಟ್ರಂತೆ ಆಗಿದ್ದಾರೆ. BJPಯ ಏಜೆಂಟ್ ಆಗಿರುವ ರಾಜ್ಯಪಾಲರು ತಮ್ಮ ರಾಜಭವನದ ಕಚೇರಿಯನ್ಯಾಕೆ ಮಲ್ಲೇಶ್ವರದಲ್ಲಿರುವ BJPಯ ಕಚೇರಿ ಜಗನ್ನಾಥ ಭವನಕ್ಕೆ ವರ್ಗಾಯಿಸಿಕೊಳ್ಳಬಾರದು.?