ಬೆಂಗಳೂರು: ಹಲವು ಅನುಮಾನಗಳ ಮೇಲೆ ಕಳೆದ ಶನಿವಾರ ಸಿಸಿಬಿ (CCB) ಅಧಿಕಾರಿಗಳು ಬೆಂಗಳೂರು ಕೇಂದ್ರ ಕಾರಾಗೃಹ ಅಂದರೆ ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ನಡೆಸಿದ್ದರು. ಆದರೆ ಏನೂ ಸಿಗದೆ ಖಾಲಿ ಕೈಯಲ್ಲಿ ಅಧಿಕಾರಿಗಳು ವಾಪಸ್ಸಾಗಿದ್ದರು.
ಈ ದಾಳಿ ನಡೆದ ಮರುದಿನ ಅಂದರೆ ಮೊನ್ನೆ ಭಾನುವಾರ ಕೊಲೆ ಆರೋಪದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಜೈಲಿನಲ್ಲಿ ಬಲಗೈಯಲ್ಲಿ ಚಹಾ ಮಗ್ ಮತ್ತು ಎಡಗೈನಲ್ಲಿ ಸಿಗರೇಟ್ ಹಿಡಿದಿರುವ ಫೋಟೋ ವೈರಲ್ ಆಗಿತ್ತು. ಈ ಫೋಟೋ ವೈರಲ್ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳ ದಾಳಿ ಮಾಹಿತಿ ಸೋರಿಕೆಯಾಗಿತ್ತಾ ಎಂಬ ಅನುಮಾನ ವ್ಯಕ್ತವಾಗಿದೆ. ಶನಿವಾರ ಸಿಸಿಬಿ ಅಧಿಕಾರಿಗಳು ಜೈಲಿನೊಳಗೆ ಪ್ರವೇಶಿಸುವ ಮುನ್ನ ಅವರನ್ನು ಅರ್ಧಗಂಟೆ ಹೊರಗೆ ಕಾಯಿಸಲಾಗಿತ್ತು ಎಂಬ ಮಾಹಿತಿ ಸಿಕ್ಕಿದೆ.
ಸಿಸಿಬಿ ಅಧಿಕಾರಿಗಳು ದಾಳಿಗೆ ಬಂದಿದ್ದಾಗ ಜೈಲಧಿಕಾರಿಗಳು ಅರ್ಧ ಗಂಟೆ ಒಳಗೆ ಬಿಡಲಿಲ್ಲ. ಈ ವೇಳೆ ಸಿಸಿಬಿ ಅಧಿಕಾರಿಗಳು ಏಕೆ ಕಾಯಬೇಕು ಎಂದು ಜೈಲು ಸಿಬ್ಬಂದಿಗೆ ಪ್ರಶ್ನೆ ಮಾಡಿದ್ದಾರೆ. ಜೈಲು ಅಧೀಕ್ಷಕ ಬಂದಿಲ್ಲ, ಅವರಿಲ್ಲದೆ ಒಳಗೆ ಬಿಡಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ. ಹೀಗಾಗಿ, ಸಿಸಿಬಿ ಅಧಿಕಾರಿಗಳು ಸುಮಾರು ಅರ್ಧಗಂಟೆ ಜೈಲಿನ ಬಾಗಿಲಿನಲ್ಲೇ ಕಾಯ್ದಿದ್ದರು.
ಈ ಸಂದರ್ಭದಲ್ಲಿ ಬ್ಯಾರಕ್ನಲ್ಲಿ ನಾಲ್ಕು ರಟ್ಟಿನ ಬಾಕ್ಸ್ಗಳನ್ನು ಶಿಫ್ಟ್ ಮಾಡಿದ ಬಗ್ಗೆ ಮಾಹಿತಿ ಸಿಕ್ಕಿದ್ದು, ಸಿಸಿಬಿ ಅಧಿಕಾರಿಗಳಿಗೆ ಇದೀಗ ಸಂದೇಹ ಉಂಟಾಗಿದೆ. ಬಾಕ್ಸ್ಗಳಲ್ಲಿ ಕಸ ಇತ್ತು ಜೈಲು ಸಿಬ್ಬಂದಿ ಹೇಳಿದ್ದಾರೆ. ಆದರೆ, ಜೈಲಿನ ಯಾವ ಬ್ಯಾರಕ್ನಿಂದಲೂ ಕಸ ತೆಗೆದುಕೊಂಡು ಹೋಗಿಲ್ಲ, ಕೇವಲ ಬ್ಯಾರಕ್ ನಂಬರ್ 10 ರಿಂದ ಏಕೆ ಕಸ ತೆಗೆದುಕೊಂಡು ಹೋಗಿರುವ ಬಗ್ಗೆ ಸಿಸಿಬಿ ಪೊಲೀಸರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಸಿಸಿಬಿ ಅಧಿಕಾರಿಗಳು ಪ್ರಾಥಮಿಕ ವರದಿ ನೀಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಅಧಿಕಾರಿಗಳ ದಾಳಿಯ ಮಾಹಿತಿ ಸೋರಿಕೆಯಾಗಿದೆ ಎಂಬ ಅನುಮಾನ ಮೇಲೆ ಆಂತರಿಕ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸಿಸಿಬಿ ಹೆಚ್ಚುವರಿ ಆಯುಕ್ತ ಡಾ.ಚಂದ್ರಗುಪ್ತಗೆ ಸೂಚಿಸಿದ್ದಾರೆ.