ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಿದ ವಿಚಾರಕ್ಕೆ ಸಂಬಂಧಿಸಿ ವಿವಾದವೆದ್ದು 12 ಮಂದಿ ಅಧಿಕಾರಿಗಳ ಅಮಾನತ್ತಿಗೂ ಕಾರಣವಾಗಿ ನಟ ದರ್ಶನ್ ರನ್ನು ಇಂದು ಗುರುವಾರ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, 8 ರಿಂದ 10 ಜನರನ್ನು ಬೇರೆ ಬೇರೆ ಜೈಲಿಗೆ ಸ್ಥಳಾಂತರಿಸಲಾಗಿದೆ. ಭದ್ರತಾ ದೃಷ್ಠಿಯಿಂದ ಶಿಫ್ಟ್ ಮಾಡಲಾಗಿದೆ. ಯಾರನ್ನು ಯಾವ ಜೈಲಿಗೆ ಶಿಫ್ಟ್ ಮಾಡಬೇಕೆಂಬುದನ್ನು ಪೊಲೀಸರೇ ನಿರ್ಧಾರ ಮಾಡಿದ್ದಾರೆ, ದರ್ಶನ್ ಸ್ಥಳಾಂತರ ಮಾಡಿರುವುದು ಅಧಿಕಾರಿಗಳ ತೀರ್ಮಾನವಾಗಿದೆ ಎಂದರು.
ದರ್ಶನ್ ಅವರ ಬಗ್ಗೆ ಕಟ್ಟುನಿಟ್ಟಾಗಿ ಮತ್ತು ಜಾಗರೂಕರಾಗಿರಲು ಬಳ್ಳಾರಿ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆಯೇ ಎಂಬ ಪ್ರಶ್ನೆಗೆ ಗೃಹ ಸಚಿವರು, ಈ ಬಗ್ಗೆ ಜೈಲು ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರೆ, ಅದು ಅವರ ಕೆಲಸ, ಸರ್ಕಾರದ ಕೆಲಸವಲ್ಲ. ಇದೆಲ್ಲವನ್ನೂ ನೋಡಿಕೊಳ್ಳಲು ನಾವು ಸಾಮಾನ್ಯವಾಗಿ ಸೂಚನೆಗಳನ್ನು ನೀಡುತ್ತೇವೆ. ದರ್ಶನ್ ವಿಚಾರದಲ್ಲಿ ನಿಷ್ಠುರವಾಗಿ ಅಧಿಕಾರಿಗಳು ನಡೆದುಕೊಳ್ಳುತ್ತಾರೆ ಎಂಬ ನಂಬಿಕೆಯಿದೆ ಎಂದರು.
ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರು ಜಮೀರ್ ಅಹ್ಮದ್, ಅವರು ನಟ ದರ್ಶನ್ ಗೆ ಆಪ್ತರು ಅದಕ್ಕಾಗಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆಯೇ ಎಂದು ಕೇಳಿದ್ದಕ್ಕೆ. ಪ್ರತಿ ಜಿಲ್ಲೆಗೂ ಒಬ್ಬ ಉಸ್ತುವಾರಿ ಸಚಿವರಿದ್ದಾರೆ. ಯಾರೇ ಇದ್ದರೂ ಪರವಾಗಿಲ್ಲ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ, ಸಚಿವ ಜಮೀರ್ ಗೂ ನಟ ದರ್ಶನ್ ನನ್ನು ಬಳ್ಳಾರಿ ಕಾರಾಗೃಹಕ್ಕೆ ಕಳುಹಿಸಿದ್ದಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.
ದರ್ಶನ್ ಗೆಳತಿ ಹಾಗೂ ಅಪಹರಣ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿಯೇ ಇದ್ದಾರೆ. ಪ್ರಕರಣದಲ್ಲಿ ದರ್ಶನ್ ಸಹಚರರಾದ ಪವನ್, ರಾಘವೇಂದ್ರ ಮತ್ತು ನಂದೀಶ್ ಅವರನ್ನು ಮೈಸೂರು ಜೈಲಿಗೆ, ಜಗದೀಶ್ ಮತ್ತು ಲಕ್ಷ್ಮಣನನ್ನು ಶಿವಮೊಗ್ಗ ಜೈಲಿಗೆ, ಧನರಾಜ್ ಧಾರವಾಡ ಜೈಲಿಗೆ, ವಿನಯ್ ವಿಜಯಪುರ ಜೈಲಿಗೆ, ನಾಗರಾಜ್ ಕಲಬುರಗಿ ಜೈಲಿಗೆ, ಪ್ರದೂಶನನ್ನು ಬೆಳಗಾವಿ ಜೈಲಿಗೆ ಕಳುಹಿಸಲಾಗಿದ್ದು, ಅನುಕುಮಾರ್ ಮತ್ತು ದೀಪಕ್ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಉಳಿಯಲಿದ್ದಾರೆ.
ನಾಲ್ವರು ಆರೋಪಿಗಳಾದ ರವಿ, ಕಾರ್ತಿಕ್, ನಿಖಿಲ್ ಮತ್ತು ಕೇಶವ ಮೂರ್ತಿಯನ್ನು ಈ ಹಿಂದೆ ತುಮಕೂರು ಜೈಲಿಗೆ ಸ್ಥಳಾಂತರಿಸಲಾಗಿತ್ತು.