ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು ಸುರಂಗ ಮಾರ್ಗ ಯೋಜನೆ ಅಸಾಂವಿಧಾನಿಕ: ಸಾಮಾಜಿಕ ಹೋರಾಟಗಾರರು

“ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾಯಿತ ಕೌನ್ಸಿಲ್ ಮತ್ತು ಮೇಯರ್ ಅನ್ನು ಹೊಂದಿಲ್ಲ. ಬಿಬಿಎಂಪಿ ಕೌನ್ಸಿಲ್ ಇಲ್ಲದ ಕಾರಣ ಪರಿಷ್ಕೃತ ಮಾಸ್ಟರ್ ಪ್ಲಾನ್ 2031 ಅನ್ನು ಅನುಮೋದಿಸಲಾಗಿಲ್ಲ.

ಬೆಂಗಳೂರು: ಸಾರ್ವಜನಿಕರ ಆಕ್ರೋಶ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮಧ್ಯಪ್ರವೇಶದ ನಂತರ ಸ್ಥಗಿತಗೊಂಡಿದ್ದ ವಿವಾದಾತ್ಮಕ ಉಕ್ಕಿನ ಮೇಲ್ಸೇತುವೆಯಂತೆಯೇ, ಈಗ ಸುರಂಗ ಮಾರ್ಗ ಯೋಜನೆಗೂ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಬೆಂಗಳೂರು ಮಹಾನಗರ ಯೋಜನಾ ಸಮಿತಿ(ಎಂಪಿಸಿ) ಮತ್ತು ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ(BMLTA)ದಂತಹ ಸಾಂವಿಧಾನಿಕ ಸಂಸ್ಥೆಗಳನ್ನು ಸಂಪರ್ಕಿಸದೆ, 12,690 ಕೋಟಿ ರೂಪಾಯಿ ವೆಚ್ಚದ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗಿನ 18.5 ಕಿ.ಮೀ ಸುರಂಗ ಮಾರ್ಗಕ್ಕೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿರುವ ಈ ಯೋಜನೆಯು ‘ಅಸಂವಿಧಾನಿಕ’ ಎಂದು ಸಾಮಾಜಿಕ ಹೋರಾಟಗಾರರು ಮತ್ತು ತಜ್ಞರು ಟೀಕಿಸಿದ್ದಾರೆ.

ಉಕ್ಕಿನ ಮೇಲ್ಸೇತುವೆ ಯೋಜನೆಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಬೆಂಗಳೂರು ಪ್ರಜಾ ವೇದಿಕೆಯ ಸಂಸ್ಥಾಪಕ ಸದಸ್ಯ ಎನ್.ಎಸ್.ಮುಕುಂದ ಅವರು, ಈ ಯೋಜನೆಯು ‘ಅಸಂವಿಧಾನಿಕ’ ಎಂದು ಹೇಳಿದ್ದಾರೆ.

ಉಕ್ಕಿನ ಮೇಲ್ಸೇತುವೆಯಂತೆಯೇ ಇದು ಸಹ ಸಾರ್ವಜನಕರಿಂದ ತೀವ್ರ ವಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಮುಕುಂದ ಅವರು, “ಭಾರತದ ಸಂವಿಧಾನವು ನಿಗದಿಪಡಿಸಿದ ಕೆಲವು ತತ್ವಗಳನ್ನು ಯೋಜನೆಗಳನ್ನು ಯೋಜಿಸುವಾಗ ಮತ್ತು ಅವುಗಳನ್ನು ಕಾರ್ಯಗತಗೊಳಿಸುವಾಗ ಅನುಸರಿಸಬೇಕು. ಕನಸಿನಿಂದ ಎಚ್ಚರಗೊಂಡು ಅಲಂಕಾರಿಕ ಕಲ್ಪನೆಯೊಂದಿಗೆ ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ” ಎಂದಿದ್ದಾರೆ.

“ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾಯಿತ ಕೌನ್ಸಿಲ್ ಮತ್ತು ಮೇಯರ್ ಅನ್ನು ಹೊಂದಿಲ್ಲ. ಬಿಬಿಎಂಪಿ ಕೌನ್ಸಿಲ್ ಇಲ್ಲದ ಕಾರಣ ಪರಿಷ್ಕೃತ ಮಾಸ್ಟರ್ ಪ್ಲಾನ್ 2031 ಅನ್ನು ಅನುಮೋದಿಸಲಾಗಿಲ್ಲ. ಸುರಂಗ ರಸ್ತೆ ಯೋಜನೆಗಳಂತಹ ದೊಡ್ಡ ಯೋಜನೆಗಳನ್ನು ಜಾರಿಗೆ ತರುವ ಮುನ್ನ ಬೆಂಗಳೂರು ಮೆಟ್ರೋಪಾಲಿಟನ್ ಯೋಜನಾ ಸಮಿತಿಯನ್ನು(MPC) ಸಂಪರ್ಕಿಸಬೇಕು. ಎಲ್ಲಾ ಸಾರ್ವಜನಿಕ ಯೋಜನೆಗಳನ್ನು ಸಾರ್ವಜನಿಕ ಸಮಾಲೋಚನೆಗಾಗಿ ಇರಿಸಬೇಕು. ಅಭಿಪ್ರಾಯಗಳನ್ನು ಸಂಗ್ರಹಿಸಬೇಕು ಮತ್ತು ಅಗತ್ಯವಿದ್ದರೆ, ಪುನರ್ನಿರ್ಮಾಣ ಮಾಡಬೇಕು ಎಂದು ಅವರು ಹೇಳಿದರು.

“ರಾಜ್ಯ ಸಚಿವ ಸಂಪುಟ ಸುರಂಗ ಮಾರ್ಗ ಯೋಜನೆಗೆ ಅನುಮೋದನೆ ನೀಡುವುದು ಅಸಾಂವಿಧಾನಿಕ. ಈ ಯೋಜನೆಯನ್ನು ನಗರದ ಎಲ್ಲಾ ಟ್ರಾಫಿಕ್ ಸಮಸ್ಯೆಗಳಿಗೆ ದಿವ್ಯೌಷಧ” ಎಂದು ಬಿಂಬಿಸುತ್ತಿರುವುದು ತಪ್ಪು ಮತ್ತು ಅದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್‌ಸಿ) ಸುಸ್ಥಿರ ಸಾರಿಗೆ ಪ್ರಯೋಗಾಲಯದ ಸಂಚಾಲಕ ಪ್ರೊ.ಆಶಿಶ್ ವರ್ಮಾ ಮಾತನಾಡಿ, “ಸುರಂಗ ಮಾರ್ಗ ಯೋಜನೆಯನ್ನು ಸರ್ಕಾರ ಸಮರ್ಥಿಸಿಕೊಳ್ಳಲು ಒಂದೇ ಒಂದು ಕಾರಣ ಇಲ್ಲ. ಇದರಿಂದ ರಸ್ತೆಗಿಳಿಯುವ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಲಿದೆ. ಇದು ಪಳೆಯುಳಿಕೆ ಇಂಧನ ಬಳಕೆ ಮತ್ತು ಟೈಲ್ ಪೈಪ್ ಹೊರಸೂಸುವಿಕೆಯನ್ನು ಹೆಚ್ಚಿಸುತ್ತದೆ. ವಿವಿಧ ಸಾರಿಗೆ ವಿಧಾನಗಳನ್ನು ತುಲನೆ ಮಾಡಿ ಕಾರ್ಯಸಾಧ್ಯತೆಯ ಅಧ್ಯಯನ ನಡೆಸಬೇಕು. ಇಲ್ಲದಿದ್ದರೆ ಕೋರ್ಟ್ ಮಧ್ಯ ಪ್ರವೇಶಿಸಬಹುದು' ಎಂದಿದ್ದಾರೆ.

ಸುರಂಗ ಮೆಟ್ರೋ ಅದೇ ಪ್ರಮಾಣದ ಹೂಡಿಕೆಯೊಂದಿಗೆ ಸುರಂಗ ರಸ್ತೆಗಿಂತ 40 ಪಟ್ಟು ಹೆಚ್ಚು ಜನರನ್ನು ಸಾಗಿಸಬಲ್ಲದು. ಸಾರ್ವಜನಿಕ ಸಾರಿಗೆ ಮೂಲಸೌಕರ್ಯದಲ್ಲಿ ಭಾರಿ ಹೂಡಿಕೆ ಮಾಡುವುದು ನಗರದ ಸಂಚಾರ ದಟ್ಟಣೆಯನ್ನು ಪರಿಹರಿಸಲು ಪ್ರಮುಖ ಅಸ್ತ್ರ ಎಂದು ವರ್ಮಾ ಸಲಹೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಟ್ರಾಫಿಕ್ ಕಡಿಮೆ ಮಾಡಲು ಸುರಂಗ ರಸ್ತೆ ನಿರ್ಮಿಸುವ ರಾಜ್ಯ ಸರ್ಕಾರದ ಕ್ರಮ ದೂರದೃಷ್ಟಿಯಿಂದ ಕೂಡಿಲ್ಲ ಎಂದು ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆಯ ವಕೀಲ ಮತ್ತು ಸದಸ್ಯ ವಿನಯ್ ಶ್ರೀನಿವಾಸ ಹೇಳಿದ್ದಾರೆ.

ನಗರದಲ್ಲಿ ಫ್ಲೈಓವರ್, ಸಿಗ್ನಲ್ ರಹಿತ ಕಾರಿಡಾರ್, ಅಂಡರ್ ಪಾಸ್ ಗಳ ಸಂಖ್ಯೆ ಹೆಚ್ಚಿದ್ದರೂ ಸಂಚಾರ ದಟ್ಟಣೆ ಹೆಚ್ಚಿದೆ. ಏಕೆಂದರೆ ಖಾಸಗಿ ವಾಹನಗಳು 2015 ರಲ್ಲಿ 11.44 ಲಕ್ಷದಿಂದ ಮಾರ್ಚ್ 2024 ರಲ್ಲಿ 23.92 ಲಕ್ಷಕ್ಕೆ ಏರಿದೆ ಎಂದು ಅವರು ಗಮನ ಸೆಳೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

SCROLL FOR NEXT