ಆರ್. ಅಶೋಕ್ 
ರಾಜ್ಯ

ಬಾಣಂತಿಯರ ಸಾವು ಪ್ರಕರಣ: ನ್ಯಾಯಾಂಗ ತನಿಖೆಗೆ ವಿಪಕ್ಷಗಳ ಆಗ್ರಹ

ಇಡೀ ರಾಜ್ಯವನ್ನೆ ಬೆಚ್ಚಿ ಬೀಳಿಸುವ ಘಟನೆ ಇದಾಗಿದೆ. ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಾಗಿದೆ. ಇದರ ಜತೆಗೆ ಚಿತ್ರದುರ್ಗ, ರಾಯಚೂರು, ಬೆಳಗಾವಿ, ಪಾವಗಡ ಹಲವೆಡೆ ಬಾಣಂತಿಯರು ಸತ್ತಿದ್ದಾರೆ.

ಬೆಳಗಾವಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಬಾಣಂತಿಯರ ಸಾವು ಪ್ರಕರಣ ಹೆಚ್ಚಳವಾಗುತ್ತಿರುವ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಬುಧವಾರ ಆಗ್ರಹಿಸಿದರು.

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆದಿರುವ ಬಾಣಂತಿಯರ ಸಾವಿನ ಬಗ್ಗೆ ನಿಯಮ 69 ರಡಿಯಲ್ಲಿ ನಡೆದ ಚರ್ಚೆಯಲ್ಲಿ ಮೊದಲಿಗೆ ಮಾತನಾಡಿದ ಆರ್.ಅಶೋಕ್ ಅವರು, ಇಡೀ ರಾಜ್ಯವನ್ನೆ ಬೆಚ್ಚಿ ಬೀಳಿಸುವ ಘಟನೆ ಇದಾಗಿದೆ. ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಾಗಿದೆ. ಇದರ ಜತೆಗೆ ಚಿತ್ರದುರ್ಗ, ರಾಯಚೂರು, ಬೆಳಗಾವಿ, ಪಾವಗಡ ಹಲವೆಡೆ ಬಾಣಂತಿಯರು ಸತ್ತಿದ್ದಾರೆ. ಇದಕ್ಕೆ ಆರೋಗ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ. ಆರೋಗ್ಯ ಇಲಾಖೆ ರೋಗಪೀಡಿತವಾಗಿದೆ. ಸರಿಯಾದ ಔಷಧಿಗಳಿಲ್ಲ. ಅವಧಿ ಮೀರಿದ ಔಷಧಿಗಳನ್ನು ನೀಡಲಾಗುತ್ತಿದೆ. ಇಲಾಖೆಯ ನಿರ್ಲಕ್ಷ್ಯಕ್ಕೆ ಬಾಣಂತಿಯರು ಬಲಿಯಾಗಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಬಾಣಂತಿಯರ ಸಾವಿನ ಬಗ್ಗೆ ಹಾಲಿ ಹೈಕೋರ್ಟ್‌ನ ನ್ಯಾಯಾಧೀಶರ ಸುಪರ್ದಿಯಲ್ಲಿ ನ್ಯಾಯಾಂಗ ತನಿಖೆಯಾಗಲಿ. ಸತ್ಯ ಜನರಿಗೆ ಗೊತ್ತಾಗಬೇಕಿದೆ ಎಂದು ಒತ್ತಾಯಿಸಿದರು.

ಬಾಣಂತಿಯರ ಸಾವಿನ ಬಗ್ಗೆ ಆರೋಗ್ಯ ಸಚಿವರು ನಿರ್ಲಕ್ಷ್ಯ ತೋರಿದ್ದಾರೆ. ಸಾವಾದ 6 ದಿನದ ನಂತರ ಬಳ್ಳಾರಿಗೆ ಭೇಟಿ ನೀಡಿದ್ದಾರೆ. ನಾನು ಅವರಿಗಿಂತ ಮೊದಲು ಘಟನೆಯಾದ 3 ದಿನದಲ್ಲೇ ಭೇಟಿ ನೀಡಿದ್ದೆ. ಈ ಘಟನೆಯಲ್ಲಿ ವೈದ್ಯರು ನಮ್ಮದೇನು ತಪ್ಪಿಲ್ಲ. ಐವಿಫ್ಲ್ಯೂಯಿಡ್ ಔಷಧಿಯ ತಪ್ಪು. ಈಗ ವರದಿಯಲ್ಲಿ ಬೇರೆ ಬೇರೆ ರೀತಿ ಇದೆ. ಈ ಹಿಂದೆ ಎಷ್ಟು ಸಾವಾಗಿತ್ತು. ಈಗ ಇಷ್ಟು ಸಾವಾಗಿದೆ ಎಂದೆಲ್ಲಾ ಬಾಣಂತಿಯರ ಸಾವನ್ನು ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ. ಬಾಣಂತಿಯರ ಬದುಕಿಗೆ ಗ್ಯಾರಂಟಿ ಕೊಡಿ. ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ಸುಪರ್ದಿಯಲ್ಲಿ ನ್ಯಾಯಾಂಗ ತನಿಖೆ ನಡೆಸಿ ಎಂದು ಆಗ್ರಹಿಸಿದರು.

ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದ ಲೋಕಾಯುಕ್ತರು ಸರ್ಕಾರಿ ಆಸ್ಪತ್ರೆಗಳ ಸ್ಥಿತಿಯನ್ನು ತೆರೆದಿಟ್ಟಿದ್ದಾರೆ. ಕಳಪೆ ಔಷಧಿ, ಅವಧಿ ಮೀರಿದ ಔಷಧಿಗಳ ವಿಲೇವಾರಿ ಮಾಡದಿರುವುದು, ಎಕ್ಸ್‌ರೇ ಯಂತ್ರ ಕೆಟ್ಟಿರುವುದು, ಇಸಿಜಿ ಯಂತ್ರ ಕೆಟ್ಟಿರುವುದು ಎಲ್ಲವೂ ಲೋಕಾಯುಕ್ತರು ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಗೆ ಭೇಟಿ ನೀಡಿದಾಗ ಬಯಲಾಗಿದೆ. ಬೆಂಗಳೂರಿನ ಆಸ್ಪತ್ರೆಯ ಸ್ಥಿತಿಯೇ ಹೀಗಾದರೆ ಇನ್ನು ಬೇರೆ ಆಸ್ಪತ್ರೆಗಳ ಗತಿಯೇನು ಎಂದು ಪ್ರಶ್ನಿಸಿದರು.

ಬಾಣಂತಿಯರ ಸಾವಿಗೆ ಕಾರಣವಾದ ಔಷಧಿಯನ್ನು ಇಲಾಖೆ ಬಳಸಬಾರದು ಎಂದು ಕಳೆದ ಮೇ ತಿಂಗಳಲ್ಲೇ ಸುತ್ತೋಲೆ ಹೊರಡಿಸಿದೆ. ಇಷ್ಟಾದರೂ ಔಷಧ ಪೂರೈಸಿದ ಪಶ್ಚಿಮ ಬಂಗಾಳದ ಕಂಪೆನಿ ನ್ಯಾಯಾಲಯದಲ್ಲಿ ತಡೆ ತಂದಿದೆ. ನೀವು ಅದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಿಲ್ಲ ಏಕೆ, ಜನರ ಪ್ರಾಣದ ವಿಚಾರದಲ್ಲಿ ಈ ರೀತಿ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ ಎಂದು ಹೇಳಿದರು.

ಈ ಸರ್ಕಾರ ಮೆಡಿಕಲ್ ಮಾಫಿಯಾದ ಕಪಿಮುಷ್ಠಿಯಲ್ಲಿ ಸಿಲುಕಿದೆ. ಕ್ಯಾನ್ಸರ್‌ಗೆ ಬಳಸುವ ಔಷಧಿಯನ್ನು ಡ್ರಗ್ಸ್ ರೀತಿಯಲ್ಲಿ ಸೇವಿಸುವ ವಿಡಿಯೋಗಳು ಇವೆ. ಸರ್ಕಾರ ಬದುಕಿದೆಯೋ, ಸತ್ತಿದೆಯೋ, ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಬಾಣಂತಿಯರ ಸಾವಿನ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಹೋಗಬೇಕು. ಹಾಗಾಗಿ ನ್ಯಾಯಾಂಗ ತನಿಖೆ ಮಾಡಿ. ಬಾಣಂತಿಯರಿಗೆ ನೆಮ್ಮದಿ ಒದಗಿಸಿ ಎಂದು ಒತ್ತಾಯಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT