ಬೆಂಗಳೂರು: ವಿಧಾನ ಮಂಡಲ ಜಂಟಿ ಅಧಿವೇಶನ ಫೆಬ್ರವರಿ 12ರಿಂದ ಆರಂಭಗೊಳ್ಳಲಿದ್ದು, 23ರವರೆಗೆ ನಡೆಯಲಿದೆ. ಫೆ.12ರಂದು ರಾಜ್ಯಪಾಲರು ಜಂಟಿ ಸದನ ಉದ್ದೇಶಿಸಿ ಮಾತನಾಡಲಿದ್ದು, ಫೆ.16ರಂದು ಬಜೆಟ್ ಮಂಡನೆ ನಿರೀಕ್ಷೆಯಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಸೋಮವಾರ ಮಾಹಿತಿ ನೀಡಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಫೆಬ್ರವರಿ 12ರಿಂದ 23ರವರೆಗೆ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಮೊದಲ ದಿನ ಅಂದರೆ ಫೆಬ್ರವರಿ 12ರಂದು ಸದನ ಉದ್ದೇಶಿಸಿ ರಾಜ್ಯಪಾಲ ಭಾಷಣ ಇರಲಿದೆ. ಬಳಿಕ ಫೆ.16ರಂದು ಸಿಎಂ ಸಿದ್ದರಾಮಯ್ಯ 2024-25ರ ಆಯವ್ಯಯ ಮಂಡನೆ ಮಾಡುತ್ತಾರೆ. ಅದಕ್ಕೂ ಮೊದಲು ಫೆಬ್ರವರಿ 9ರಂದು ಶಾಸಕರಿಗೆ ಬಜೆಟ್ ಬಗ್ಗೆ ತರಬೇತಿ ನೀಡುತ್ತೇವೆ. ಬಜೆಟ್ ನಲ್ಲಿ ಹೇಗೆ ಭಾಗವಹಿಸಬೇಕು ಎಂಬ ಟ್ರೈನಿಂಗ್ ಕ್ಯಾಂಪ್ ಆಯೋಜಿಸಲಾಗಿದ್ದು, ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತರಬೇತಿ ನಡೆಯಲಿದೆ. ಇನ್ನು ಒಟ್ಟು 8 ದಿನಗಳ ಕಾಲ ಪ್ರಶ್ನೋತ್ತರ ಕಲಾಪ ನಡೆಯಲಿದೆ ಎಂದು ವಿವರಿಸಿದರು.
ಇದನ್ನೂ ಓದಿ: 'ಜನರಿಲ್ಲದೆ ವಿಧಾನ ಸೌಧವಿಲ್ಲ, ಯುವ ಶಾಸಕರಿಗೆ ಆಡಳಿತ ತರಬೇತಿ ಅತ್ಯಗತ್ಯ': ಸ್ಪೀಕರ್ ಯು ಟಿ ಖಾದರ್ (ಸಂದರ್ಶನ)
ಗಮನ ಸೆಳೆಯುವ ಸೂಚನೆ, ಶೂನ್ಯವೇಳೆ, ನಿಲುವಳಿ ಸೂಚನೆ ಸೇರಿ ಕಾರ್ಯಕಲಾಪ ನಡೆಸಲಾಗುವುದು. ಶಾಸಕರು ಸರಿಯಾದ ಸಮಯಕ್ಕೆ ಬರುವಂತೆ ಮಾಡಲು ಉಚಿತ ಊಟ. ತಿಂಡಿ ವ್ಯವಸ್ಥೆ ಮಾಡುತ್ತಿದ್ದೇವೆ. ಒಂದೊಂದು ದಿನ ಒಂದೊಂದು ಹೋಟೆಲ್ ನಿಂದ ತಿಂಡಿ ವ್ಯವಸ್ಥೆ ಮಾಡಲಾಗುತ್ತದೆ. ಬೆಳಗ್ಗೆ 9 ಗಂಟೆಗೆ ತಿಂಡಿ ವ್ಯವಸ್ಥೆ ಇರಲಿದೆ. ಶಾಸಕರು ಬಂದು ಇಲ್ಲೇ ತಿಂಡಿ ಸೇವಿಸಿ ಸದನಕ್ಕೆ ಬರಬಹುದು ಎಂದು ಹೇಳಿದರು.