ರಾಜ್ಯ

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ: ಮಲ್ಲಿಕಾರ್ಜುನ ಖರ್ಗೆ

Sumana Upadhyaya

ಮಂಗಳೂರು: ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ ಜಿಲ್ಲೆ ಮಂಗಳೂರಿನಲ್ಲಿ ಕಾಂಗ್ರೆಸ್ ತನ್ನ ಲೋಕಸಭಾ ಚುನಾವಣೆಯ ರಣಕಹಳೆ ಮೊಳಗಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿನ್ನೆ ಮಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂದು ಜನತೆಗೆ ಮನವಿ ಮಾಡಿದರು, ಬಿಜೆಪಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಮೋದಿ ಮತ್ತು ಅವರ ತಂಡ ಸರ್ವಾಧಿಕಾರಿಗಳಂತೆ ವರ್ತಿಸುತ್ತಾರೆ. ಭವಿಷ್ಯದಲ್ಲಿ ದೇಶದಲ್ಲಿ ಚುನಾವಣೆಗಳು ನಡೆಯಲು ಸಾಧ್ಯವಾಗುವುದಿಲ್ಲ ಎಂದರು.

ಮೋದಿ ಅವರು ನ್ಯಾಯಾಂಗ, ಮಾಧ್ಯಮ, ಇಡಿ ಮತ್ತು ಐಟಿ ಇಲಾಖೆಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಖರ್ಗೆ, ಅವರನ್ನು ಶಕ್ತಿಯುತರನ್ನಾಗಿ ಮಾಡಬೇಡಿ ಎಂದು ಜನರನ್ನು ಕೇಳಿಕೊಂಡರು. ಕಾಂಗ್ರೆಸ್ ಅನ್ನು ಶಕ್ತಿಯುತಗೊಳಿಸಿದರೆ ಮಾತ್ರ ದೇಶ ಪ್ರಗತಿ ಹೊಂದುತ್ತದೆ ಎಂದರು.

ಎಐಸಿಸಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಖಾತೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದುಡಿದ ಹಣವಿದೆ. ಬಿಜೆಪಿಯವರು ಕಪ್ಪುಹಣ ಹೊಂದಿರುವವರಿಂದ 6 ಸಾವಿರ ಕೋಟಿ ರೂಪಾಯಿಗಳನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಇಂದಿರಾಗಾಂಧಿ ಜಾರಿಗೆ ತಂದ ಒಕ್ಕಲು ಕಾಯ್ದೆಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಹೆಚ್ಚಿನ ಲಾಭವಾಗಿದೆ ಎಂದು ಹೇಳಿದ ಖರ್ಗೆ, ಈ ಜಿಲ್ಲೆಗಳ ಜನರು ಅದನ್ನು ಮರೆತು ಕೇಸರಿ ಪಕ್ಷದೊಂದಿಗೆ ಕೈಜೋಡಿಸಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಮಂಗಳೂರಿನಲ್ಲಿ ಬಿಜೆಪಿ ಧ್ವಜಗಳನ್ನು ಹಾಕಿರುವುದನ್ನು ಉಲ್ಲೇಖಿಸಿದ ಅವರು, ಮೋದಿಯವರು ನೀಡಿದ ಭರವಸೆಯಂತೆ ಇಲ್ಲಿನ ಜನರ ಬ್ಯಾಂಕ್ ಖಾತೆ 15 ಲಕ್ಷ ರೂಪಾಯಿ ಬಂದಿದೆಯೇ, ಅವರು ನೀಡಿದ್ದ ಉದ್ಯೋಗ ಮತ್ತು ಅಭಿವೃದ್ಧಿ ಭರವಸೆ ಈಡೇರಿದೆಯೇ ಎಂದು ಕೇಳಿದರು.

ಭರವಸೆ ಈಡೇರಿಸುವಲ್ಲಿ ಮೋದಿ ವಿಫಲ: ಸಿದ್ದರಾಮಯ್ಯ, ಕರಾವಳಿ ಜನರು ಪ್ರಜ್ಞಾವಂತರು, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ, ವಿದೇಶಗಳಲ್ಲಿ ಅಡಗಿರುವ ಕಪ್ಪುಹಣ ವಾಪಸ್ ತರುವುದು, ರೈತರ ಆದಾಯ ದ್ವಿಗುಣಗೊಳಿಸದ ಮೋದಿ ಭರವಸೆ ಈಡೇರಿಸಲು ವಿಫಲರಾಗಿರುವ ಮೋದಿಯವರನ್ನು ಈ ಬಾರಿ ಚುನಾವಣೆಯಲ್ಲಿ ಸೋಲಿಸಿ, ತಮ್ಮ ಸರ್ಕಾರ ಜಾರಿಗೆ ತಂದಿರುವ ಖಾತ್ರಿ ಯೋಜನೆಗಳು ಲಕ್ಷಾಂತರ ಜನರಿಗೆ ಸಹಾಯ ಮಾಡಿದೆ. ರಾಜ್ಯದ 28 ಲೋಕಸಭಾ ಸ್ಥಾನಗಳಲ್ಲಿ ಕನಿಷ್ಠ 20 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ಇದಕ್ಕೆ ಜನರ ಸಹಕಾರ ಬೇಕು ಎಂದು ಕೇಳಿಕೊಂಡರು.

SCROLL FOR NEXT