ರಾಜ್ಯ

ರಾಮನಗರ: ಎಸ್‌ಐ ತನ್ವೀರ್ ಹುಸೇನ್ ಅಮಾನತಿಗೆ ಆಗ್ರಹಿಸಿ ವಕೀಲರಿಂದ ಪ್ರತಿಭಟನೆ, ನಾಳೆ ‘ವಿಧಾನಸೌಧ ಚಲೋ’

Lingaraj Badiger

ರಾಮನಗರ: ಪೊಲೀಸ್ ಸಬ್-ಇನ್ಸ್ ಪೆಕ್ಟರ್(ಎಸ್‌ಐ) ತನ್ವೀರ್ ಹುಸೇನ್ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ವಕೀಲರು ಮಂಗಳವಾರ ರಾಮನಗರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ಮುಂದುವರೆಸಿದ್ದಾರೆ.

ಸೋಮವಾರ ತಡರಾತ್ರಿ ನೂರಾರು ವಕೀಲರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ, ಕಟ್ಟಡದ ಪ್ರವೇಶ ಮತ್ತು ನಿರ್ಗಮನ ಎರಡೂ ದ್ವಾರಗಳಿಗೆ ದಿಗ್ಭಂಧನ ಹಾಕಿದರು. ಧರಣಿ ನಿರತ ವಕೀಲರು ಎಸ್‌ಐ ಅವರನ್ನು ಅಮಾನತು ಮಾಡುವವರೆಗೂ ಇಲ್ಲಿಂದ ಕದಲುವುದಿಲ್ಲ ಮತ್ತು ಬುಧವಾರ ‘ವಿಧಾನಸೌಧ ಚಲೋ’ ಚಳವಳಿ ನಡೆಸುವುದಾಗಿ ಹೇಳಿದ್ದಾರೆ.

ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ತೀರ್ಪು ನೀಡಿದ ವಾರಣಾಸಿ ನ್ಯಾಯಾಧೀಶರ ವಿರುದ್ಧ ವಕೀಲ ಮತ್ತು ಎಸ್‌ಡಿಪಿಐ ಕಾರ್ಯಕರ್ತ ಚಾಂದ್ ಪಾಷಾ ಅವಹೇಳನಕಾರಿ ಪೋಸ್ಟ್ ಮಾಡಿದ ಘಟನೆಗೆ ಸಂಬಂಧಿಸಿದಂತೆ ಎಸ್ಐ ಹುಸೇನ್ ಅವರು 40 ವಕೀಲರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ.

ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ''ಸಾವಿರಾರು ವಕೀಲರು ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಅವರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಪೊಲೀಸ್ ಇಲಾಖೆಯ ವೈಫಲ್ಯದ ವಿರುದ್ಧ ಕ್ರಮ ಕೈಗೊಳ್ಳಬೇಕು. ಒಂದು ಸಮುದಾಯದ ಹಿತಾಸಕ್ತಿ ಕಾಪಾಡಲು ಸರ್ಕಾರ ರಚಿಸಿಲ್ಲ ಎಂದರು.

ಇನ್ನು ಬೆಂಗಳೂರಿನ ವಿಧಾನಸೌಧದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಮನಗರದಲ್ಲಿ ನಡೆಯುತ್ತಿರುವುದು ರಾಜಕೀಯ. ಅದನ್ನು ಅವರೇ ಮಾಡಲಿ. ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸುತ್ತಿದ್ದು, ಗೃಹ ಸಚಿವರು ಉತ್ತರ ನೀಡಲಿದ್ದಾರೆ. ಅಧಿಕಾರಿಗಳು ಕಾನೂನಿನ ಪ್ರಕಾರ ಎಲ್ಲರಿಗೂ ರಕ್ಷಣೆ ನೀಡಬೇಕು ಎಂದರು.

“ಅವರು ಸಂಧಾನ ಸಭೆಗೆ ಬರಲು ಬಯಸಿದರೆ ನಾವು ಮಾತನಾಡಲು ಸಿದ್ಧರಿದ್ದೇವೆ. ಅವರು ರಾಜಕೀಯ ಮಾಡಲು ಬಯಸಿದರೆ ರಾಜಕೀಯ ಮಾಡಲಿ. ನಮ್ಮದೇನೂ ಆಕ್ಷೇಪ ಇಲ್ಲ,’’ ಎಂದು ಡಿಸಿಎಂ ಹೇಳಿದ್ದಾರೆ.

SCROLL FOR NEXT