ಸಂಗ್ರಹ ಚಿತ್ರ
ಸಂಗ್ರಹ ಚಿತ್ರ 
ರಾಜ್ಯ

ವಿಶ್ವ ಪ್ರಸಿದ್ಧ ಮುಳ್ಳಯ್ಯನಗಿರಿ ಗುಡ್ಡದಲ್ಲಿ ಕಾಡ್ಗಿಚ್ಚು: ನೂರಾರು ಎಕರೆ ಸಸ್ಯ ಸಂಪತ್ತು ನಾಶ, ಬೆಂಕಿ ನಂದಿಸಲು ಹರಸಾಹಸ

Manjula VN

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ವಿಶ್ವ ಪ್ರಸಿದ್ಧ ಮುಳ್ಳಯ್ಯನಗಿರಿ ಗುಡ್ಡದಲ್ಲಿ ಕಾಡ್ಗಿಚ್ಚುಹೊತ್ತಿಕೊಂಡ ಪರಿಣಾಮ ನೂರಾರು ಎಕರೆ ಪ್ರದೇಶದಲ್ಲಿದ್ದ ಅಪರೂಪದ ಸಸ್ಯ ಸಂಪತ್ತು ಸುಟ್ಟು ಭಸ್ಮವಾಗಿರುವಂತಹ ಘಟನೆ ನಡೆದಿದೆ.

ಮುಳ್ಳಯ್ಯನಗಿರಿ ಸಮೀಪದ ಬೈರೇಗುಡ್ಡ ಎಂಬಲ್ಲಿ ಕಾಡಿಗೆ ಬೆಂಕಿ ಬಿದ್ದಿದ್ದು, ನೂರಾರು ಎಕರೆ ಅರಣ್ಯ ಸುಟ್ಟು ಬೂದಿಯಾಗಿದೆ. ಬೈರೇಗುಡ್ಡ ಸಮೀಪ ಹೊತ್ತಿದ ಕಾಡ್ಗಿಚ್ಚು ಕವಿಕಲ್ ಗಂಡಿ ಅರಣ್ಯದವರೆಗೂ ಗುಡ್ಡದಿಂದ ಗುಡ್ಡಕ್ಕೆ ವ್ಯಾಪಿಸಿದೆ. ಕಾಡ್ಗಿಚ್ಚಿನ ಸ್ಥಳಕ್ಕೆ ಹೋಗಲಾರದೇ ಅರಣ್ಯಾಧಿಕಾರಿಗಳು ಪರದಾಡುವಂತಾಗಿದೆ.

ಬೈರೇಗುಡ್ಡ ಅತ್ಯಂತ ಎತ್ತರ, ಅರಣ್ಯ ಹಾಗೂ ಇಳಿಜಾರಿನ ಪ್ರದೇಶವಾಗಿದೆ. ಮುಳ್ಳಯ್ಯನಗಿರಿಯಲ್ಲಿ ಬೀಸುವ ಭಾರೀ ಗಾಳಿಗೆ ಬೆಂಕಿಯ ಕೆನ್ನಾಲಿಗೆ ಹೆಚ್ಚಿದ್ದರಿಂದ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ.

ಅರಣ್ಯಾಧಿಕಾರಿಗಳು ಸ್ಥಳದಲ್ಲೇ ಇದ್ದರೂ ಕೂಡ ಬೆಂಕಿಯನ್ನ ನಂದಿಸಲು ಸಾಧ್ಯವಾಗಿಲ್ಲ. ಅತ್ಯಂತ ಎತ್ತರ ಹಾಗೂ ಇಳಿಜಾರಿನ ಪ್ರದೇಶದ ಬೈರೇಗುಡ್ಡದ ಬಳಿ ಹೋಗಲು ಕಷ್ಟಸಾಧ್ಯ. ಬಿಸಿಲ ಝಳಕ್ಕೆ ಸಂಪೂರ್ಣ ಒಣಗಿ ನಿಂತಿರುವ ಅರಣ್ಯ ಯಾವ ಪ್ರಮಾಣದಲ್ಲಿ ಹೊತ್ತಿ ಉರಿಯುತ್ತದೆ ಎಂದು ಊಹಿಸುವುದು ಕಷ್ಟವಾಗಿದೆ. ಹಾಗಾಗಿ, ಅರಣ್ಯಾಧಿಕಾರಿಗಳು ಕೂಡ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಅರಣ್ಯಕ್ಕೆ ಸ್ಥಳೀಯರೇ ಬೆಂಕಿ ಕೊಟ್ಟಿರಬಹುದು ಎಂದೂ ಶಂಕಿಸಲಾಗಿದೆ.

ಬೇಸಿಗೆಯ ವೇಳೆ ಬಂಡೀಪುರ ಅರಣ್ಯ ಪ್ರದೇಶ, ಮುಳ್ಳಯ್ಯನಗಿರಿ ಗುಡ್ಡಗಾಡು ಪ್ರದೇಶ ಸೇರಿ ರಾಜ್ಯದ ಹಲವೆಡೆ ಕಾಡ್ಗಿಚ್ಚು, ಅಗ್ನಿ ದುರಂತಗಳು ಸಂಭವಿಸುತ್ತವೆ. ಆದರೆ, ಬೇಸಿಗೆ ಆರಂಭಕ್ಕೂ ಮೊದಲೇ ಕಾಡ್ಗಿಚ್ಚು ಆವರಿಸಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ.

SCROLL FOR NEXT