ಸಂಗ್ರಹ ಚಿತ್ರ
ಸಂಗ್ರಹ ಚಿತ್ರ 
ರಾಜ್ಯ

ವಿದೇಶಿ ಪ್ರಜೆ ಅಪಹರಿಸಿ ಸುಲಿಗೆ: ಪ್ರಕರಣ ಬೇಧಿಸಲು ಹೋದ ಪೊಲೀಸರ ಕೈಗೆ ಸಿಕ್ಕಿಬಿದ್ದ ಡ್ರಗ್ಸ್ ಪೆಡ್ಲರ್!

Manjula VN

ಬೆಂಗಳೂರು: ಆಸ್ಟ್ರೇಲಿಯಾ ಪ್ರಜೆಯ ಅಪಹರಣ ಹಾಗೂ ಸುಲಿಗೆ ಪ್ರಕರಣವನ್ನು ಬೇಧಿಸಲು ಮುಂದಾಗಿದ್ದ ಪೊಲೀಸರು ಇದೇ ಪ್ರಕರಣ ಪ್ರಕರಣದಲ್ಲಿ ಡ್ರಗ್ಸ್ ಪೆಡ್ಲರ್ ಒಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿದೇಶಿಗನ ಅಪಹರಿಸಿ ರೂ.1.50 ಲಕ್ಷ ಸುಲಿಗೆ ಮಾಡಿದ್ದ ಆರೋಪದಡಿ ಆರು ಮಂದಿ ಆರೋಪಿಗಳನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪರಪ್ಪನ ಅಗ್ರಹಾರ ಸಮೀಪದ ಚನ್ನಕೇಶವ ನಗರದ ಮೋನಿಶ್ ಅಲಿಯಾಸ್ ಮನು (24), ಹೊಂಗಸಂದ್ರದ ಲೋಕೇಶ್ (24), ಬೊಮ್ಮನಹಳ್ಳಿಯ ಕಿಶೋರ್ ಶಿವ (19), ಎಂ.ಆದಿ (21), ಜಯನಗರದ ದಿಲೀಪ್ ಕುಮಾರ್ (26) ಹಾಗೂ ತಿಲಕನಗರದ ಸತೀಶ್ (25) ಎಂದು ಗುರ್ತಿಸಲಾಗಿದೆ.

‘ಆಸ್ಟ್ರೇಲಿಯಾ ಪ್ರಜೆ ಅಲೋಕ್ ರಾಣಾ ಅವರನ್ನು ಫೆ. 5ರಂದು ಅಪಹರಿಸಿದ್ದ ಆರೋಪಿಗಳು, ಹಣ ಸುಲಿಗೆ ಮಾಡಿ ಪರಾರಿಯಾಗಿದ್ದರು. ಕೃತ್ಯದ ಸಂಬಂಧ ಸಹೋದರ ಬೆಂಗಳೂರಿನ ಅಮಿತ್ ಅವರು ದೂರು ನೀಡಿದ್ದರು. ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

‘ಬೆಂಗಳೂರಿನ ಅಲೋಕ್‌ ರಾಣಾ, ಸುಮಾರು ವರ್ಷಗಳ ಹಿಂದೆಯೇ ಆಸ್ಟ್ರೇಲಿಯಾಗೆ ಹೋಗಿ ನೆಲೆಸಿದ್ದರು. ಅಲ್ಲಿಯ ಪೌರತ್ವವನ್ನೂ ಪಡೆದಿದ್ದಾರೆ. ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿದ್ದರು.

‘ಬಂಧಿತ ಆರೋಪಿ ಮೋನಿಶ್, ಕಾಲ್‌ ಸೆಂಟರ್ ಉದ್ಯೋಗಿ. ಈತ ಗಾಂಜಾ ಸಹ ಮಾರುತ್ತಿದ್ದ. ಬೆಂಗಳೂರಿಗೆ ಬಂದಾಗಲೆಲ್ಲ ಮೋನಿಶ್‌ನಿಂದ ಅಲೋಕ್ ರಾಣಾ ಗಾಂಜಾ ಖರೀದಿಸುತ್ತಿದ್ದರು. ಕೇಳಿದಷ್ಟು ಹಣವನ್ನೂ ನೀಡುತ್ತಿದ್ದರು. ಅಲೋಕ್ ಬಳಿ ಹೆಚ್ಚಿನ ಹಣ ಇರಬಹುದೆಂದು ತಿಳಿದು ಮೋನಿಶ್ ಹಾಗೂ ಇತರರು ಸುಲಿಗೆ ಮಾಡಲು ಸಂಚು ರೂಪಿಸಿದ್ದರು’.

ಇದರಂತೆ ‘ಗಾಂಜಾ ನೀಡುವುದಾಗಿ ಅಲೋಕ್‌ ಅವರನ್ನು ಕರೆಸಿಕೊಂಡಿದ್ದ ಆರೋಪಿಗಳು, ಅವರದ್ದೇ ಕಾರಿನಲ್ಲಿ ಅಪಹರಿಸಿ ಮನೆಯೊಂದಕ್ಕೆ ಕರೆದೊಯ್ದಿದ್ದರು. ಹಣ ನೀಡುವಂತೆ ಪೀಡಿಸಿ ಹಲ್ಲೆ ಮಾಡಿದ್ದರು. ರೂ. 1.50 ಲಕ್ಷ ಸುಲಿಗೆ ಮಾಡಿದ್ದರು’.

‘ಸಹೋದರ ಮನೆಗೆ ಬಾರದಿದ್ದರಿಂದ ಅನುಮಾನಗೊಂಡಿದ್ದ ದೂರುದಾರ ಅಮಿತ್, ಕಾರಿನ ಜಿಪಿಎಸ್ ಆಧರಿಸಿ ಸ್ಥಳಕ್ಕೆ ಹೋಗಿದ್ದರು. ಅವರನ್ನು ನೋಡಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಸಹೋದರನಿಗೆ ಚಿಕಿತ್ಸೆ ಕೊಡಿಸಿದ ನಂತರವೇ ಠಾಣೆಗೆ ದೂರು ನೀಡಿದ್ದಾರೆ.

ಇದರಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿ ಮೋನಿಶ್ ನೀಡಿದ್ದ ಮಾಹಿತಿ ಆಧರಿಸಿ ಡ್ರಗ್ಸ್ ಪೆಡ್ಲರ್ ಸತ್ಯನಾರಾಯಣ ಮೆಹತೊನನ್ನು (25) ಎಂಬಾತನನನ್ನು ಬಂಧನಕ್ಕೊಳಪಡಿಸಿದ್ದಾರೆ.

ಈತನಿಂದ 410 ಗ್ರಾಂ ಗಾಂಜಾ, ಮೊಬೈಲ್ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ. ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದ ಈತ, ಗಾಂಜಾ ಮಾರುವುದನ್ನೇ ವೃತ್ತಿ ಮಾಡಿಕೊಂಡಿದ್ದ. ಈತನ ಬಳಿಯೇ ಮೋನಿಶ್‌ ಗಾಂಜಾ ಖರೀದಿಸಿ ಗ್ರಾಹಕರಿಗೆ ಮಾರುತ್ತಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

SCROLL FOR NEXT